ಕನ್ಯಾಡಿ : ಸೇವಾಭಾರತಿಯ ವಿಭಾಗವಾದ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ ಪುನಶ್ಚೇತನ ಕೇಂದ್ರ ದಲ್ಲಿ ನಾಲ್ಕನೇ ವಾರ್ಷಿಕ ಸಮಾರಂಭ ಮತ್ತು ವಿಶ್ವ ಬೆನ್ನುಹುರಿ ಅಪಘಾತಕ್ಕೊಳಗಾದವರ ದಿನಾಚರಣೆ ಇದೇ ಸೆ. 5 ರಂದು ಸೌತಡ್ಕ ಸೇವಾಧಾಮ ಕೇಂದ್ರದಲ್ಲಿ ನಡೆಯಲಿದೆ ಎಂದು ಸೇವಾ ಭಾರತಿ ಸಂಚಾಲಕ ಕೆ. ವಿನಾಯಕ ರಾವ್ ಮತ್ತು ಸಂಚಾಲಕ ಕೆ. ಪುರಂದರ ರಾವ್ ಹೇಳಿದರು. ಅವರು ಸೆ.2 ರಂದು ಕನ್ಯಾಡಿ ಸೇವಾ ಭಾರತಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಜಾಥಾಗಳು, ಗಣ್ಯ ವ್ಯಕ್ತಿಗಳ ಭೇಟಿ ಮತ್ತು ಸರ್ಕಾರಿ ಇಲಾಖೆಗಳ ಭೇಟಿ ಹೀಗೆ ಹತ್ತು ಹಲವು ಯೋಜನೆಗಳನ್ನು ಮಾಡುತ್ತಾ ಪ್ರಸ್ತುತ 6 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ ಸಂಸ್ಥೆಯ ಆರಂಭದಿಂದ ಈವರೆಗೂ ಸಲಹೆ ಸಹಕಾರಗಳನ್ನು ನೀಡುತ್ತಿರುವ ಇವರನ್ನು ಗೌರವಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸೇವಾಧಾಮದ ಸಂಚಾಲಕ ಕೆ ಪುರಂದರ ರಾವ್ ಅಧ್ಯಕ್ಷತೆ ವಹಿಸುವರು. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ. ಹರೀಶ್ ರಾವ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ರೋ. ಮನೋರಮ ಭಟ್ ಅತಿಥಿಗಳಾಗಿರುತ್ತಾರೆ. ಕಾರ್ಯಕ್ರಮದಲ್ಲಿ ನಡೆಯಲ್ಪಡುವ ಸೇವಾಕಾರ್ಯಗಳು, ಫಲಾನುಭವಿಗಳಿಗೆ – ವೀಲ್ ಚೇರ್ ವಿತರಣೆ, ಶೌಚಾಲಯ ಮತ್ತು ರಾಂಪ್ ನಿರ್ಮಾಣಕ್ಕೆ ಧನಸಹಾಯ, ಮೆಡಿಕಲ್ ಕಿಟ್ ಗಳ ವಿತರಣೆ ನಡೆಯಲಿದೆ.
ಉಜಿರೆಯ ಉದ್ಯಮಿ ಪ್ರಭಾಕರ ಹೆಗ್ಡ, ಶ್ರೀ ಮಹಾಗಣಪತಿ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಗೌರವ ಉಪಸ್ಥಿತಿ ಇರುವರು. ಬೆನ್ನುಹುರಿ ಅಪಘಾತದ ಬಗ್ಗೆ ಒಂದು ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾ ಗೋಷ್ಠಿ ಯಲ್ಲಿ ಸೇವಾಧಾಮದ ಮೆನೇಜರ್ ಚರಣ್, ಮೋಹನ ನಿಡ್ಲೆ ಉಪಸ್ಥಿತರಿದ್ದರು.