ಉಜಿರೆ : ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಜನತೆಯನ್ನು ಇತ್ತೀಚಿನ ದಿನಗಳಲ್ಲಿ ಅತೀಯಾಗಿ ಕಾಡುತಿದೆ. ಸೂಕ್ತ ಸಮಯದಲ್ಲಿ ರೋಗ ತಪಾಸಣೆ ಮಾಡಿಸುವುದರಿಂದ ಮೂಳೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪರಿಹರಿಸಿಕೊಳ್ಳಬಹುದು. ವೈದ್ಯಕೀಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನತೆಯ ಆರೋಗ್ಯ ಸಮಸ್ಯೆಯನ್ನು ಪರಿಹರಿಸಬಹುದು ಎಂಬ ಉದ್ದೇಶದಿಂದ ಹೆಗ್ಗಡೆಯವರ ಆಶಯದಂತೆ ಉಚಿತ ಮೂಳೆ ಬಲ ತಪಾಸಣಾ ಶಿಬಿರವನ್ನು ಈ ಬಾರಿ ಹಮ್ಮಿಕೊಳ್ಳಲಾಗಿದೆ ಎಂದು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಸೆ. 1 ರಂದು ಮೂಳೆ ಬಲ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮೂರು ಮಂದಿ ಮೂಳೆ ಶಸ್ತ್ರಚಿಕಿತ್ಸಾ ತಜ್ಞರು ಲಭ್ಯವಿದ್ದು, ಪ್ರತಿದಿನ ಮೂಳೆಗೆ ಸಂಬಂಧಿಸಿದ ಚಿಕಿತ್ಸಾ ಸೇವೆಗಳು ಈ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಮಾತನಾಡಿ ಪೂಜ್ಯರ ಆದೇಶದಂತೆ ಈ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಅನೇಕ ವೈದ್ಯಕೀಯ ಶಿಬಿರಗಳು ನಡೆಯುತ್ತಿದ್ದು, ಜನತೆ ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ಫಿಸಿಷಿಯನ್ ಡಾ| ಸಾತ್ವಿಕ್ ಜೈನ್, ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ಹರೀಶ್ ಬಿ.ಎಸ್, ಡಾ| ಶತಾನಂದ ಪ್ರಸಾದ್ ರಾವ್, ಡಾ| ಸುಪ್ರೀತ್ ಶೆಟ್ಟಿ, ಬಿ.ಎಂ.ಡಿ ಸ್ಕ್ಯಾನ್ ಟೆಕ್ನಿಷಿಯನ್ ಶ್ರೀವೇಣಿ ಬೆಂಗಳೂರು ಉಪಸ್ಥಿತರಿದ್ದರು.
ಎರಡು ದಿನಗಳ ಶಿಬಿರದಲ್ಲಿ 353 ಮಂದಿ ಮೂಳೆ ಬಲ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಂಡರು. ಈ ಶಿಬಿರದಲ್ಲಿ ಮೂಳೆ ಖನಿಜ ಸಾಂದ್ರತೆಯ ಸ್ಕ್ಯಾನ್ ಉಚಿತವಾಗಿ ಮಾಡಲಾಯಿತು. ರಿಯಾಯತಿ ದರದಲ್ಲಿ ಔಷಧ ವಿತರಿಸಲಾಯಿತು.