ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ದ. ಕ. ಜಿಲ್ಲೆ, ಬೆಳ್ತಂಗಡಿ ತಾಲೂಕು ಇದರ ದಶಮಾನೋತ್ಸವದ ಸವಿ ನೆನಪಿಗಾಗಿ 34ನೇ ಮನೆ ಹಸ್ತಾಂತರ ಕಾರ್ಯಕ್ರಮ ವೀಲ್ ಚೇರ್ ಮತ್ತು ಟೈಲರ್ ಮಿಷನ್ ಹಸ್ತಾಂತರ ಕಾರ್ಯಕ್ರಮ ಸೆ.24 ರಂದು ಬೆಳ್ತಂಗಡಿ ಶ್ರೀ ಮಂಜುನಾಥ ಕಲಾ ಭವನದಲ್ಲಿ ನಡೆಯಲಿದೆ ಎಂದು ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಹೇಳಿದರು.
ಅವರು ಸೆ.20 ರಂದು ಸುವರ್ಣ ಆರ್ಕೆಡ್ ನ ರಾಜ ಕೇಸರಿ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿದರು.
ಸಂಘಟನೆ ಕೊರೋನ ಸಂದರ್ಭದಲ್ಲಿ ಮತ್ತು ಇತರ ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದು 525 ನೇ ಸೇವಾ ಯೋಜನೆಯಾಗಿ ದಶಮಾನೋತ್ಸವದ ಅಂಗವಾಗಿ 34 ನೇ ಮನೆ ಹಸ್ತಾಂತರ ಗೌರಿಗದ್ದೆ ವಿನಯ ಗುರೂಜಿ ಮಾರ್ಗದರ್ಶನದಲ್ಲಿ ಮನೋಜ್ ಕಟ್ಟೆಮಾರ್ ಇವರ ಆಶೀರ್ವಾದದೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದಾರೆ. ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ವಸಂತ ಶೆಟ್ಟಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಜಯಂತ ನಡುಬೈಲ್, ಸಂಪತ್ ಬಿ. ಸುವರ್ಣ, ಡಾ. ಎಂ. ಎಂ. ದಯಾಕರ್, ಡಾ. ಗೋಪಾಲಕೃಷ್ಣ ಇನ್ನಿತರ ಗಣ್ಯರು, ರಾಜಕೇಸರಿ ಸಂಘಟನೆಯ ವಿವಿಧ ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಮನೋರಂಜನ ಕಾರ್ಯಕ್ರಮ ನಡೆಯಲಿದೆ ಎಂದರು .
ಪತ್ರಿಕಾ ಗೋಷ್ಠಿಯಲ್ಲಿ ಸಂಘಟನೆಯ ಗೌರವ ಸಲಹೆಗಾರ ಗುರುಪ್ರಸಾದ್ ಕೋಟ್ಯಾನ್, ಬೆಳ್ತಂಗಡಿ ತಾಲೂಕು ಸಂಚಾಲಕ ಶಶಿಕಾಂತ್, ಸಾಮಾಜಿಕ ಜಾಲತಾಣದಲ್ಲಿ ಸಂಚಾಲಕ ರಾಮಣ್ಣ, ಸದಸ್ಯ ಅಮೃತ್ ಉಪಸ್ಥಿತರಿದ್ದರು.