ಬೆಳ್ತಂಗಡಿ: ಮುಂಡಾಜೆ ಗ್ರಾಮಕ್ಕೆ ಪ್ರತ್ಯೇಕ 5 ಎಕ್ರೆ ಸರಕಾರಿ ಕ್ರೀಡಾಂಗಣ ಬೇಕು ಎಂಬುದಾಗಿ ಸೆ.20 ರಂದು ಪುತ್ತೂರು ಸಹಾಯಕ ಆಯುಕ್ತ (ಎ.ಸಿ) ಗಿರೀಶ್ ನಂದನ್ ಅವರನ್ನು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.
ಎರಡು ವರ್ಷಗಳ ಹಿಂದೆಯೇ ಕ್ರೀಡಾ ಸಂಘದ ಮೂಲಕ ಗ್ರಾಮ ಸಭೆಯಲ್ಲಿ ಅರ್ಜಿ ನೀಡಿ ಸದ್ರಿ ಅರ್ಜಿ, ಜಿಲ್ಲಾಧಿಕಾರಿ ಮತ್ತು ಯುವಜನ ಸೇವಾ ಕ್ರೀಡಾ ಇಲಾಖೆಗೆ ಈಗಾಗಲೇ ಸಲ್ಲಿಕೆಯಾಗಿದೆ. ಗ್ರಾಮದ ಸರ್ವೆ ನಂಬ್ರ 200 ರ ಪೈಕಿ ಯಲ್ಲಿ (ನವೋದಯ ವಸತಿ ಶಾಲೆಯ ಪಕ್ಕದಲ್ಲಿ) ಸರಕಾರಿ ಜಾಗ ಗುರುತಿಸುವಂತೆ ಮೇಲಧಿಕಾರಿಯಿಂದ ಈಗಾಗಲೇ ತಹಶಿಲ್ದಾರ್ ಅವರಿಗೆ ಪತ್ರ ಬಂದಿದ್ದು, ಅದರ ಪ್ರತಿಯನ್ನೂ ಇಟ್ಟು ಇಂದು ಎ.ಸಿ ಅವರ ಗಮನಸೆಳೆಯಲಾಯಿತು.
ಮನವಿಗೆ ಸ್ಪಂದಿಸಿದ ಎ.ಸಿ ಅವರು ಸ್ಥಳದಲ್ಲೇ ಇದ್ದ ತಹಶಿಲ್ದಾರ್ ಪೃಥ್ವಿ ಸಾನಿಕಮ್ ಅವರಿಗೆ ಸೂಚನೆ ನೀಡಿ, ಗ್ರಾಮ ಕರಣಿಕರ ಮೂಲಕ ಜಾಗ ಗುರುತಿಸಿ ಕೂಡಲೇ ಕಡತ ತಯಾರಿಸಿ ಮಂಜೂರಾತಿಗೆ ಸಲ್ಲಿಸುವಂತೆ ನಿರ್ದೇಶಿಸಿದರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಜೊತೆ ನಿಯೋಗದಲ್ಲಿ ಸಂಚಾಲಕ ನಾಮದೇವ ರಾವ್, ಸಲಹಾ ಸಮಿತಿ ಸದಸ್ಯ ಬಾಬು ಪೂಜಾರಿ ಕೂಳೂರು ಉಪಸ್ಥಿತರಿದ್ದರು.