ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘವು ಮೂರು ಸಹಕಾರಿ ವರ್ಷವನ್ನು ಪೂರೈಸಿ ರೂ.44.84 ಕೋಟಿ ವ್ಯವಹಾರವನ್ನು ನಡೆಸಿ, 2021-22ನೇ ಸಾಲಿನಲ್ಲಿ ಗ್ರಾಹಕರ ಸಹಕಾರದಿಂದ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಅತ್ಯುತ್ತಮ ಕಾರ್ಯನಿರ್ವಹಣೆಯಿಂದ ರೂ.28.38 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಎಂಎಲ್ಸಿ ಹರೀಶ್ ಕುಮಾರ್ ತಿಳಿಸಿದ್ದಾರೆ.
ಅವರು ಸ.24 ರಂದು ಸಂಘದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಂಘದಲ್ಲಿ 15 ,ಮಂದಿ ನಿರ್ದೇಶಕರ ಆಡಳಿತವಿದ್ದು, ಸಂಘವು ಕೋವಿಡ್-19 ಕೊರೋನ ವೈರಸ್ ನಿಂದಾಗಿ ಸದೃಢವಾಗಿ ವ್ಯವಹಾರ ನಡೆಸಲು ಸಮಸ್ಯೆಯಾಗಿದ್ದರೂ, ಯಶಸ್ವಿಯಾಗಿ ಮುನ್ನಡೆಯುತ್ತಿದೆ. 2021-22ನೇ ಸಾಲಿನಲ್ಲಿ 1039 ಎ ವರ್ಗದ ಸದಸ್ಯರು, ಮತ್ತು 766 ಸಿ ವರ್ಗದ ಸದಸ್ಯರು ಸೇರ್ಪಡೆಗೊಂಡು ರೂ. 64.77 ಲಕ್ಷ ಪಾಲಬಂಡಳ ಜಮೆಯಾಗಿದೆ. ಪ್ರಾರಂಭ ಹಂತದಲ್ಲಿ 1.90 ಕೋಟಿ ಠೇವಣಿ ಇತ್ತು ಈಗ 9.24 ಕೋಟಿ ಠೇವಣಿ ಇದೆ. ಸಾಲ ಮಾರ್ಚ್ ವರೆಗೆ 7 ಕೋಟಿ ಇತ್ತು ಈಗ ರೂ.9 ಕೋಟಿಗೆ ಏರಿದೆ. ಒಟ್ಟು ವ್ಯವಹಾರ 44.84ಕೋಟಿ ವ್ಯವಹಾರ ಮಾಡಿದ್ದೇವೆ. ಶೇ 98.60 ಸಾಲ ಮರುಪಾವತಿ ಇದೆ. ರೂ.28.34 ಲಕ್ಷ ನಿವ್ವಳ ಲಾಭ ಬಂದಿದೆ. ಇಷ್ಟರವರೆಗೆ ಲಾಭಂಶ ವಿತರಣೆ ಮಾಡಿಲ್ಲ. ಈ ವರ್ಷ ಶೇ 10 ಲಾಭಂಶ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಸಂಘದಿಂದ ಮನೆ ನಿರ್ಮಾಣ, ರಿಪೇರಿ, ಠೇವಣಾತಿ ಸಾಲ, ಚಿನ್ನಾಭರಣ ಸಾಲ ಸೇರಿದಂತೆ ರೂ.6.74 ಕೋಟಿ ಸಾಲ ನೀಡಲಾಗಿದೆ. ವರದಿ ಸಾಲಿನಲ್ಲಿ 4.42 ಕೋಟಿ ಸಾಲ ವಸೂಲಾಗಿದೆ. ಸಂಘದಿಂದ ಇದುವರೆಗೆ ಯಾವುದೇ ಶಾಖೆ ತೆರೆದಿಲ್ಲ, ಸಂಸ್ಥೆ ಶಿಸ್ತಿನಿಂದ ನಡೆಯಬೇಕು ಎಂಬುದೇ ಉದ್ದೇಶವಾಗಿತ್ತು. ಈಗ ಸಂಘ ಸದೃಢವಾಗಿದ್ದು, ಮುಂದಿನ ಮಹಾಸಭೆಗೆ ಮೊದಲು ನಿಡ್ಲೆಯಲ್ಲಿ ಹೊಸ ಬ್ರಾಂಚ್ ಮಾಡುವ ಯೋಜನೆ ಇದೆ ಎಂದು ಪ್ರಕಟಿಸಿದರು. ಅಲ್ಲದೆ ಲಾಭಂಶದಲ್ಲಿ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವ ಅಲೋಚನೆಯೂ ಇದೆ. ಇದಕ್ಕೆ ಎಲ್ಲಾ ನಿರ್ದೆಶಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ನಿರ್ದೇಶಕರು ಭೂ ರಹಿತ ಗ್ರಾಮೀಣ ಪ್ರದೇಶದ ಬಡವರಿಗೆ ಸಣ್ಣ ಉದ್ದಿಮೆ ಮಾಡುವವರಿಗೆ ಸಾಲ ಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಸಂಘದ ಕಾರ್ಯಚಟುವಟಿಕೆಗಳ ಕುರಿತು ಸಂಘದ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಘದಲ್ಲಿ ಪಿಗ್ಮಿ ವ್ಯವಸ್ಥೆಯಿದ್ದು, ಪಿಗ್ಮಿ ಸಂಗ್ರಹಕ ಮೂರು ಮಂದಿ ಸದಸ್ಯರಿಗೆ ಸಭೆಯಲ್ಲಿ ಸನ್ಮಾನ ಮಾಡಲಾಗಿದೆ ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಗಂಗಾಧರ ಮಿತ್ತಮಾರು ಉಪಸ್ಥಿತರಿದ್ದರು.