ವೇಣೂರು: ಎಳವೆಯಲ್ಲೇ ಮಕ್ಕಳಿಗೆ ಸಂಸ್ಕಾರ ನೀಡಿದಾಗ ಸತ್ಪ್ರಜೆಗಳಾಗಿ ಬೆಳೆಯುತ್ತಾರೆ. ಶಿಶು ಮಂದಿರಗಳು ಸಂಸ್ಕೃತಿ, ಸಂಸ್ಕಾರವನ್ನು ಉದ್ದೀಪನಗೊಳಿಸುವ ಕೇಂದ್ರ ಎಂದು ವೇಣೂರು ಸೇವಾ ಶರಧಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಕೆ. ಭಾಸ್ಕರ ಪೈ ಹೇಳಿದರು.
ವೇಣೂರು ಭಾರತೀ ಶಿಶು ಮಂದಿರದಲ್ಲಿ ಸೆ.30 ರಂದು ಜರುಗಿದ ಬಾಲ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇಣೂರು ಮಹಿಳಾ ಮಂಡಲದ ಅಧ್ಯಕ್ಷ ಪದ್ಮಹರೀಶ್ ಭಟ್ ಅಧ್ಯಕ್ಷತೆ ವಹಿಸಿ, ಭಜನೆ, ಶ್ಲೋಕ, ಧಾರ್ಮಿಕ ಪಠಣಗಳ ಮೂಲಕ ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಮತ್ತು ದೇಶದ ಮೇಲೆ ಪ್ರೀತಿ ಮೂಡಿಸುವುದು ಉತ್ತಮ ಕಾರ್ಯವೆಂದರು.
ಸುರಭಿ ಮಹಾಬಲೇಶ್ ಭಟ್ ಮಂಗಳೂರು, ಶಿಶು ಮ೦ದಿರದ ಮಾತಾಜಿ ಹೇಮಾ ಶ್ರೀಧರ್ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.
ಶಿಬಿರಾರ್ಥಿ ಶ್ರೀನಿಕಾ ವರದಿ ವಾಚಿಸಿ, ಕೃತಿ ಸ್ವಾಗತಿಸಿದರು. ಸ್ಪೂರ್ತಿ ಭಟ್ ನಿರೂಪಿಸಿ, ಸಾಕ್ಷ್ಯ ವಂದಿಸಿದರು. ಬಳಿಕ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.