ಬೆಳ್ತಂಗಡಿ: ರಕ್ತದಾನ ಶಿಬಿರದ ಮೂಲಕ ಅನೇಕ ಸಲ ಭಾಗವಹಿಸುವ ಮೂಲಕ ಉಜಿರೆ ಸಾರ್ಥಕ ಪಡೆದಿದೆ. ಹಿಂದೆ ಆಗೊಮ್ಮೆ ಈಗೊಮ್ಮೆ ಶಿಬಿರ ನಡೆಯುತ್ತಿತ್ತು. ಆದರೆ ರಕ್ತದಾನ ಬಗ್ಗೆ ಇಂದು ಜಾಗೃತಿ ಆಗಿರುವುದು ಹರ್ಷದಾಯಕ ಎಂದು ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಹೇಳಿದರು.
ಸೇವಾಭಾರತಿ ಕನ್ಯಾಡಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಜಿರೆ ಇವರ ನೇತೃತ್ವದಲ್ಲಿ, ರೋಟರಿ ಕ್ಲಬ್, ಬೆಳ್ತಂಗಡಿ ಬ್ಲಡ್ ಬ್ಯಾಂಕ್, ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಅ.9 ರಂದು ಉಜಿರೆ ಶಾರದಾ ಮಂಟಪದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜೀವದಾನಕ್ಕಿರುವ ತುರ್ತು ಜೀವದ್ರವ್ಯ ರಕ್ತದಾನ. ಉಜಿರೆಯಲ್ಲಿ ವರ್ಷಕ್ಕೆ 500 ರಿಂದ 600 ಯುನಿಟ್ ರಕ್ತ ಸಂಗ್ರಹಿಸಲಾಗುತ್ತದೆ. ಇನ್ನಷ್ಟು ಶಿಬಿರಗಳು ಈ ಪರಿಸರದಲ್ಲಿ ನಡೆಯುವ ಮೂಲಕ ಅನೇಕರ ಜೀವ ಸಂರಕ್ಷಣೆಗೆ ನಾಂದಿಯಾಗಲಿ ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮ ಭಟ್ ಮಾತನಾಡಿ, ರಕ್ತದ ಅವಶ್ಯಕತೆ ಇರುವಷ್ಟು ರಕ್ತದಾನ ಮಾಡುವ ಅವಶ್ಯಕತಯಿದೆ. ರಕ್ತದಾನ ಮಾಡುವವರು ಆರೋಗ್ಯವಂತರಾಗಿರಲು ಪ್ರಯತ್ನಿಸಬೇಕು. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಪ್ರಯತ್ನಿಸೋಣ ಎಂದು ಹೇಳಿದರು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿದರು.
ಶ್ರೀಧರ್ ಕೆ.ವಿ. ಮಾತನಾಡಿ, ರಕ್ತದಾನದ ಮೌಲ್ಯ ಹಾಗೂ ರಕ್ತದ ಅವಶ್ಯಕತೆಯಿರುವವರಿಗೆ ನೆರವಾಗಿರುವ ಸಂದರ್ಭಗಳನ್ನು ವಿವರಿಸಿದರು.
ಸೇವಾಭಾರತಿ ಅಧ್ಯಕ್ಷ ವಿನಾಯಕ್ ರಾವ್, ವೆನ್ಲಾಕ್ ಬ್ಲಡ್ ಬ್ಯಾಂಕ್ ನ ತಾಂತ್ರಿಕ ಮೇಲುಸ್ತುವಾರಿ ಅಶೋಕ್, ಡಾ.ಸಾವಿ, ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಗೌಡ, ಪ್ರಗತಿ ಮಹಿಳಾ ಮಂಡಲ ಕಾರ್ಯದರ್ಶಿ ಗಾಯತ್ರಿ ಶ್ರೀಧರ್, ಸಹಿತ ವಿವಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಕಾರ್ಯದರ್ಶಿ ಶೇಖರ್ ಗೌಡ ಪ್ರಾಸ್ತಾವಿಸಿದರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಜಿ.ಕೆ. ನಿರೂಪಿಸಿದರು. ರಮೇಶ್ ಪೈಲಾರ್ ವಂದಿಸಿದರು.
ಈ ಶಿಬಿರದಲ್ಲಿ 102 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.