ವೇಣೂರು: ಗ್ರಾಮೀಣ ಭಾಗದ ಪ್ರತಿಯೊಬ್ಬ ಕ್ರೀಡಾಳುಗಳಿಗೂ ಅವಕಾಶ ಕಲ್ಪಿಸುವುದು ಈ ಗ್ರಾಮೀಣ ಕ್ರೀಡೆಯ ಆಶಯವಾಗಿದೆ ಎಂದು ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಹೇಳಿದರು.
ಅವರು ವೇಣೂರು ಗ್ರಾ.ಪಂ.ನ ವತಿಯಿಂದ ಇಲ್ಲಿಯ ಸ.ಪ.ಪೂ. ಕಾಲೇಜು ಮೈದಾನದಲ್ಲಿ ಅ.11 ರಂದು ಜರುಗಿದ ಗ್ರಾಮೀಣ ಕ್ರೀಡೋತ್ಸವ-2022 ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇಣೂರು ವರ್ತಕರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಪೈ ಸಮಾರಂಭ ಉದ್ಘಾಟಿಸಿ, ಈ ಗ್ರಾಮೀಣ ಕ್ರೀಡೆಯಿಂದ ಪರಸ್ಪರ ಅನ್ಯೊನ್ಯತೆ, ಬಾಂಧವ್ಯ ವೃದ್ಧಿಯಾಗಲಿದೆ ಎಂದರು.
ವೇಣೂರು ಸ.ಪ.ಪೂ. ಕಾಲೇಜಿನ ಪ್ರಾಚಾರ್ಯ ಗಂಗಾಧರ್ ಮಾತನಾಡಿ, ಆಟೋಟಗಳು ಏಕಾಗ್ರತೆಯನ್ನು ವೃದ್ಧಿಸಿ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ, ಕ್ರೀಡೆ ನಮ್ಮ ದೈನಂದಿನ ಬದುಕಿನ ಭಾಗ ಎಂದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಡಿ., ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ., ತಾಲೂಕು ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಅಧ್ಯಕ್ಷ ಅರುಣ್ ಕ್ರಾಸ್ತ, ಗ್ರಾ.ಪಂ. ಸದಸ್ಯರಾದ ಉಮೇಶ್ ನಡ್ತಿಕಲ್ಲು, ಹರೀಶ್ ಪಿ.ಎಸ್., ಲೋಕಯ್ಯ ಪೂಜಾರಿ, ಸುನಿಲ್ ಕುಮಾರ್ ಪಿ., ಜಯಂತಿ, ದಿನೇಶ್, ವಸಂತಿ, ಸುಚಿತ್ರಾ, ಶುಭ, ಅರುಣ್ ಹೆಗ್ಡೆ, ಮಾಲತಿ, ಜಿನ್ನು, ಶೈಲಜಾ, ಮಲ್ಲಿಕಾ ಹೆಗ್ಡೆ, ಲೀಲಾವತಿ, ಸುಜಾತ, ವೀಣಾ, ಸುಮಾ ಉಪಸ್ಥಿತರಿದ್ದರು.
ಕು| ಹರ್ಷಿತಾ ಪ್ರಾರ್ಥಿಸಿ, ಪಂ. ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ. ಸ್ವಾಗತಿಸಿದರು. ಪಂ. ಸದಸ್ಯ ಅನೂಪ್ ಜೆ. ಪಾಯಸ್ ನಿರೂಪಿಸಿ, ಸದಸ್ಯೆ ಸಂಭಾಷಿಣಿ ಉದಯ ಕುಮಾರ್ ವಂದಿಸಿದರು.