ಬೆಳ್ತಂಗಡಿ : ಸಮಾರು 800 ವರ್ಷ ಇತಿಹಾಸ ಇರುವ ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜು. 29 ರಂದು ರಾತ್ರಿ ದೇವರ ವಿಗ್ರಹದ ರಜತ ಕವಚ ,ಬಂಗಾರದ ತಾಳಿ ಇನ್ನಿತರ ಬೆಳ್ಳಿ ವಸ್ತುಗಳು ಸೇರಿ 3,28,000/ ಮೊತ್ತದ ವಸ್ತುಗಳು ಕಳ್ಳತನವಾಗಿದ್ದು ಈ ಬಗ್ಗೆ ದೇವಸ್ಥಾನದ ಅರ್ಚಕರ ಮೂಲಕ ಜು 30 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಆದರೆ ಈ ಪ್ರಕರಣ ನಡೆದು ಎರಡು ತಿಂಗಳು ಕಳೆದರೂ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ತನಿಖೆಯಲ್ಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರಿಂದ ದೇವಸ್ಥಾನದ ಅಪಾರ ಹಿಂದೂ ಭಕ್ತರಿಗೆ ನೋವು ತಂದಿದೆ. ಈ ಬಗ್ಗೆ ಗ್ರಾಮದ ಹಿಂದೂ ಭಕ್ತಾಧಿಗಳು ಇತ್ತೀಚೆಗೆ ಹಿಂದೂ ಹಿತರಕ್ಷಣಾ ವೇದಿಕೆ ಮುಂಡೂರು ಎಂಬ ಸಮಿತಿ ರಚಿಸಿ ದೇವಸ್ಥಾನದಲ್ಲಿ ಆದ ಕಳ್ಳತನದ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಲು ಬೆಳ್ತಂಗಡಿ ಠಾಣಾಧಿಕಾರಿ ಸಹಿತ ಮೇಲಾಧಿಕಾರಿಗಳಿಗೆ ,ತಹಶೀಲ್ದಾರರಿಗೆ ವಿವಿದಸ್ತರದ ಜನಪ್ರತಿನಿಧಿಗಳಿಗೆ ಮನವಿ ನೀಡಿ ಒತ್ತಡ ತಂದು ತನಿಖೆಯನ್ನು ತೀವ್ರಗೊಳಿಸಿ ಆರೋಪಿಗಳ ಪತ್ತೆಗೆ ಕಳವಾದ ವಸ್ತುಗಳನ್ನು ಪತ್ತೆ ಮಾಡಲು ಅ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ತಾಲೂಕು ತಹಶೀಲ್ದಾರರಿಗೆ ಹಾಗೂ ಮೇಲಾಧಿಕಾರಿಗಳಿಗೆ,ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಸಂಚಾಲಕ ರಮಾನಂದ ಸಾಲಿಯಾನ್, ದೇವಸ್ಥಾನದ ಅರ್ಚಕ ಹಾಗೂ ಸಮಿತಿಯ ಸಂಚಾಲಕ ರಾಘವೇಂದ್ರ ಭಟ್ ,ಸಂಚಾಲಕರಾದ ಹರಿಶ್ಚಂದ್ರ ಹೆಗ್ಡೆ, ಅಶೋಕ್ ಕುಮಾರ್ ಜೈನ್ ಚಾಮರಾಜ ಸೇಮಿತ ,ಅಶೋಕ್ ಕುಮಾರ್ ಕೊಡಕ್ಕಾಲು,ರಮೇಶ್ ದೇವಾಡಿಗ ಶ್ರೀದರ್ ಅಂಚನ್ ಹಾಗೂ ಸಲಹೆಗಾರ ರಾಜೀವ ಸಾಲಿಯಾನ್ ಇನ್ನಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ ಪೊಲೀಸ್ ಠಾಣೆ ಇವರಲ್ಲಿ ಠಾಣೆಯ ಉಪಠಾಣಾಧಿಕಾರಿಗಳ ಮೂಲಕ ಹಾಗೂ ತಹಶೀಲ್ದಾರರಿಗೆ ಉಪತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.