ಬೆಳ್ತಂಗಡಿ : ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಸಮಿತಿ ಇದರ ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ರಾಜ್ಯದಾದ್ಯಂತ ಜೈ ಭೀಮ್ ಜನ ಜಾಗೃತಿ ಜಾಥಾವು ಸೆ. 28. ರಂದು ಪ್ರಾರಂಭವಾಗಿ ಹಲವಾರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮವನ್ನು ನೀಡುತ್ತಾ ಬರುತ್ತಿದ್ದು, ನ.2 ರಂದು ದ.ಕ.ಜಿಲ್ಲೆಯ ಬೆಳ್ತಂಗಡಿಗೆ ಜಾಥಾವು ಆಗಮಿಸಲಿದ್ದು ಆ ದಿನ ಸಂಜೆ ಬಸ್ ನಿಲ್ದಾಣ ಸಮೀಪ ಬಹಿರಂಗ ಸಭೆ ಜರುಗಲಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಆಲಂಗಾರ್ ಮತ್ತು ದ. ಕ. ಜಿಲ್ಲಾಧ್ಯಕ್ಷ ದಾಸಪ್ಪ ಎಡಪವು ಹೇಳಿದರು.
ಅವರು ಅ.22 ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚಿಸಿದ ಸಂವಿಧಾನವು 1950 ಜನವರಿ 26, ರಂದು ಜಾರಿಗೆ ಬಂದಿರುತ್ತದೆ. ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ವಿಮೋಚನೆಯನ್ನು ಸಾಧಿಸುವ ಸಲುವಾಗಿ ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಹಾಗೂ ರಾಜನೀತಿ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಇದರಿಂದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಿಗಬೇಕಾಗಿತ್ತು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಮ್ಮನ್ನು ಆಳುವ ಸರಕಾರಗಳು ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಸಂವಿಧಾನ ಒಂದು ಸಮುದಾಯಕ್ಕೆ ಸೀಮಿತವಾಗಿರುವುದಿಲ್ಲ . ಎಲ್ಲಾ ಭಾರತೀಯರಿಗೆ ಹಾಗು ಎಲ್ಲಾ ಸಮುದಾಯಗಳಿಗೆ ಸಂವಿಧಾನದ ರಕ್ಷಣೆ ಮತ್ತು ಸೌಲಭ್ಯಗಳು ದಕ್ಕಿದೆ. ಸರ್ವರನ್ನೂ ಒಳಗೊಳ್ಳುವ ಇಂತಹ ಸಂವಿಧಾನವನ್ನು ರಕ್ಷಿಸುವ ಕರ್ತವ್ಯ ಮತ್ತು ಜವಾಬ್ದಾರಿ ಎಲ್ಲಾ ಭಾರತೀಯರಿಗೆ ಮತ್ತು ಎಲ್ಲಾ ಸಮುದಾಯಗಳಿಗೆ ಇದೆ. ಸಂವಿಧಾನಾತ್ಮಕ ಹೋರಾಟದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ವಿಮೋಚನೆ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಲು ನಾಡಿನ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯು ಸಂವಿಧಾನದ ಸಂರಕ್ಷಣೆ ಮಾಡಬೇಕಾಗಿದೆ. ಈ ನೆಲೆಯಲ್ಲಿ ಬಿ.ಎಸ್.ಪಿ. ವತಿಯಿಂದ ಸಂವಿಧಾನ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪಿ ಜನ ಜಾಥಾ ಹಮ್ಮಿಕೊಳ್ಳಲಾಗಿದೆ.
ಈ ಜನಜಾಗೃತಿ ಜಾಥದಲ್ಲಿ ಬಿ.ಎಸ್.ಪಿ.ಯ ರಾಜ್ಯ ಸಂಯೋಜಕರಾದ ಎಂ.ಗೋಪಿನಾಥ್, ಮಾರಸಂದ್ರ ಮುನಿಯಪ್ಪ, ದಿನೇಶ್ ಗೌತಮ್, ರಾಜ್ಯ ಅಧ್ಯಕ್ಷ ಎಂ.ಕೃಷ್ಣಮೂರ್ತಿ, ಉಪಾಧ್ಯಕ್ಷ ಕೆ.ಬಿ.ವಾಸು, ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾ ಗೋಷ್ಠಿಯಲ್ಲಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಉಸ್ತುವಾರಿ ಗೋಪಾಲ ಮುತ್ತೂರು, ದ.ಕ.ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ, ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಪಿ. ಎಸ್. ಶ್ರೀನಿವಾಸ, ತಾಲೂಕು ಸಂಯೋಜಕ ಅಮ್ಮು ಬಿ. ಬಾಂಗೇರು ಉಪಸ್ಥಿತರಿದ್ದರು.