ಬೆಳಾಲು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇವರು ಈ ವರ್ಷದಿಂದ ಉತ್ತಮ ಕನ್ನಡ ಶಾಲೆ ರಾಜ್ಯ ಮಟ್ಟದ ಪುರಸ್ಕಾರವನ್ನು, ರಾಜ್ಯದ ಆಯ್ದ ಇಪ್ಪತ್ತು ಖಾಸಗಿ ಕನ್ನಡ ಶಾಲೆಗಳಿಗೆ ನೀಡಿ ಸಮ್ಮಾನಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಈ ಯೋಜನೆಯ ಅನ್ವಯ, ರಾಜ್ಯವ್ಯಾಪಿಯಾಗಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಸಾಧನೆ, ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಇಪ್ಪತ್ತು ಶಾಲೆಗಳನ್ನು ಆಯ್ದುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಉತ್ತಮ ಕನ್ನಡ ಶಾಲೆ ಪುರಸ್ಕಾರಕ್ಕೆ ಆಯ್ಕೆ ಮಾಡಿರುತ್ತಾರೆ. ಅದರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯು ರಾಜ್ಯ ಮಟ್ಟದ ಉತ್ತಮ ಕನ್ನಡ ಶಾಲೆ ಸಮ್ಮಾನಕ್ಕೆ ಆಯ್ಕೆ ಆಗಿರುವುದು ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
1988ರಲ್ಲಿ ಆರಂಭಗೊಂಡಿರುವ ಈ ಶಾಲೆಯು ಇದೀಗ ಮೂವತ್ತ ನಾಲ್ಕು ವರ್ಷಗಳನ್ನು ಪೂರೈಸಿದ ಬಹುಮುಖಿ ಸಾಧನೆಯ ಶಾಲೆಯಾಗಿದೆ . ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಏಜ್ಯುಕೇಶನಲ್ ಸೊಸೈಟಿ ಉಜಿರೆ ಇವರ ಆಡಳಿತಕ್ಕೊಳ ಪಟ್ಟ ಸಂಸ್ಥೆ ಇದಾಗಿದ್ದು, ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಪೊ. ಎಸ್ ಪ್ರಭಾಕರ್, ಡಿ ಸುರೇಂದ್ರ ಕುಮಾರ್ ರವರು ಉಪಾಧ್ಯಕ್ಷರಾಗಿದ್ದು, ಡಿ ಹರ್ಷೇಂದ್ರ ಕುಮಾರ್ರವರು ಮತ್ತು ಡಾ. ಸತೀಶ್ಚಂದ್ರರವರು ಕಾರ್ಯದರ್ಶಿಗಳಾಗಿದ್ದಾರೆ. ಶೈಕ್ಷಣಿಕವಾಗಿ ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಹಾಗೂ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಮಾಡಿದ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲ್ಪಡುತ್ತಿದೆ.
ಕನ್ನಡ ಶಾಲೆಗಳ ಸಮ್ಮಾನ ಕಾರ್ಯಕ್ರಮವು ನ.೧೩ರಂದು ಕಲ್ಲಡ್ಕದ ಶ್ರೀ ರಾಮ ವಿದ್ಯಾ ಕೇಂದ್ರದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಬೆಳಾಲು ಪ್ರೌಢಶಾಲೆಯು, ರಾಜ್ಯ ಮಟ್ಟದ ಉತ್ತಮ ಕನ್ನಡ ಶಾಲೆ ಪುರಸ್ಕಾರವನ್ನು ಸ್ವೀಕರಿಸಲಿದೆ.