ಹಾಸನ: ಭಾರತ ಸರಕಾರದ ಕಾರ್ಮಿಕ ಸಚಿವಾಲಯ ಮತ್ತು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಿಂದ ಕೊಡುವ ಪ್ರತಿಷ್ಠಿತ ಭವಿಷ್ಯ ನಿಧಿ ಪ್ರಶಸ್ತಿಯನ್ನ ಎಸ್.ಡಿ.ಎಮ್ ಎಜ್ಯುಕೇಶನಲ್ ಸೊಸೈಟಿ(ರಿ) ಉಜಿರೆಯ ಅಂಗ ಸಂಸ್ಥೆಯಾದ ಎಸ್ ಡಿ ಎಮ್ ಆರ್ಯುವೇದ ಆಸ್ಪತ್ರೆ, ಹಾಸನ ತನ್ನ ಮುಡಿಗೇರಿಸಿಕೊಂಡಿದೆ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಕ್ಕೆ ನೂರು ಪ್ರತಿಶತದಷ್ಟು ಕಾರ್ಮಿಕರ ಇ-ನಾಮಿನೇಷನ್ ಹಾಗೂ ಕೆ.ವೈ.ಸಿ. ಮಾಡಿರುವ ಹಿನ್ನೆಲೆಯಲ್ಲಿ “ಅತ್ಯುತ್ತಮ ಸಾಧಕ ಸಂಸ್ಥೆ’ಯೆಂದು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಭಾರತದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲು ನಿಟ್ಟಿನಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು,ಇದರ 70ನೇ ವರ್ಷದ ಸಂಸ್ಥಾಪನ ದಿನದ ಸಂಭ್ರಮಾಚರಣೆಯ ಪ್ರಯುಕ್ತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಯೋಗಕ್ಷೇಮವನ್ನು ಕಾಯ್ದುಕೊಳ್ಳುತ್ತಿರುವ ದೇಶದ ವಿವಿಧ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.ಅದರಲ್ಲಿ ಹಾಸನದ ಎಸ್ ಡಿ ಎಂ ಆಯುರ್ವೇದ ಆಸ್ಪತ್ರೆ ಪ್ರಶಸ್ತಿ ಗಳಿಸಿದೆ.
ಚಿಕ್ಕಮಗಳೂರಿನ ಭವಿಷ್ಯನಿಧಿ ಕಛೇರಿಯಿಂದ ಕೊಡಮಾಡಲ್ಪಟ್ಟ ಈ ಪ್ರಶಸ್ತಿಯನ್ನು ಚಿಕ್ಕಮಗಳೂರಿನ ಪ್ರಾದೇಶಿಕ ಕಮಿಷನರ್ ಸಚಿನ್ ಶೆಟ್ಟಿ ಎಸ್ ಡಿ ಎಮ್ ಎಜುಕೇಶನ್ ಸೊಸೈಟಿಯ ಚಂದ್ರನಾಥ್ ಜೈನ್ ರಿಗೆ ನೀಡಿದರು.