ಮಡಂತ್ಯಾರು: 2023 ರ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಎನ್ಸಿಸಿ ಕೆಡೆಟ್ ಗಳ ಆಯ್ಕೆ ಶಿಬಿರ ಮತ್ತು ಎನ್ ಸಿ ಸಿ ವಾರ್ಷಿಕ ಶಿಬಿರ ಇವೆರಡನ್ನು ಜಂಟಿಯಾಗಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಆಶ್ರಯದಲ್ಲಿ ಅ 24 ರಿಂದ ಅ 31 ರವರೆಗೆ ನಡೆಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಕಮಾಂಡೆಂಟ್ ಕರ್ನಲ್ ನಿತಿನ್ ಆರ್ ಭಿಡೆ ಅವರು ಉದ್ಘಾಟನಾ ಭಾಷಣ ಮಾಡಿದರು. ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್.ಎಂ, ಮಡಂತ್ಯಾರ್ ಕಾಲೇಜು ಕ್ಯಾಂಪಸ್ಗೆ ಎಲ್ಲಾ ಕೆಡೆಟ್ಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಅವರಿಗೆ ಆಹ್ಲಾದಕರ ವಾಸ್ತವ್ಯವನ್ನು ಹಾರೈಸಿದರು. ಕರ್ನಲ್ ಅಮಿತಾಬ್ ಸಿಂಗ್, ಉಪ ಕಮಾಂಡೆಂಟ್, ಶಿಬಿರಾಧಿಕಾರಿ ಕ್ಯಾಪ್ಟನ್ ಶಾಕಿನ್ ರಾಜ್ ಹಾಗೂ ಸುಬೇದಾರ್ ಮೇಜರ್ ಉಪಸ್ಥಿತರಿದ್ದರು.
ಶಿಬಿರದಲ್ಲಿ ಕೆಡೆಟ್ಗಳಿಗೆ ಡ್ರಿಲ್, ಶಸ್ತ್ರಾಸ್ತ್ರ ತರಬೇತಿ, ನಕ್ಷೆ ಓದುವಿಕೆ, ಪ್ರಥಮ ಚಿಕಿತ್ಸೆ, ಮಿಲಿಟರಿ ಇತಿಹಾಸ, ದೈಹಿಕ ಕ್ಷಮತೆ ಮುಂತಾದ ವಿವಿಧ ವಿಷಯಗಳಲ್ಲಿ ತರಬೇತು ನೀಡಲಾಯಿತು. ಕೆಡೆಟ್ಗಳಿಗೆ ಚರ್ಚಾ ಸ್ಪರ್ಧೆ, ರಸಪ್ರಶ್ನೆ, ವಾಲಿಬಾಲ್, ಥ್ರೋ ಬಾಲ್ ಮುಂತಾದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ತರಬೇತಿಯ ಸಮಯದಲ್ಲಿ ಕೆಡೆಟ್ಗಳಿಗೆ ಬೆಂಕಿ ನಂದಿಸುವ ಕೌಶಲ್ಯದ ಕುರಿತು ನೇರ ಪ್ರದರ್ಶನವನ್ನು ನೀಡಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ(ರುಡ್ ಸೆಟ್ಟಿ) ವಿಶೇಷ ತರಬೇತಿಯನ್ನು ನೀಡಲಾಯಿತು. ಕೆಡೆಟ್ಗಳಿಗೆ ಸಂಚಾರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಭಾರತದ ಉಕ್ಕಿನ ಮನುಷ್ಯ’ ಸರ್ಧಾರ್ ಪಟೇಲ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಿಬಿರದ ಸ್ಥಳದಲ್ಲಿ ‘ರನ್ ಫಾರ್ ಯೂನಿಟಿ’ , ಏಕತೆಗಾಗಿ ಓಟ ವನ್ನು ನಡೆಸಲಾಯಿತು. ,ಕಂಪನಿ ಕ್ವಾರ್ಟರ್ ಮಾಸ್ಟರ್ ಆದ ಲೆಫ್ಟಿನೆಂಟ್ ಆಲ್ ವಿನ್ ಕೆಜಿ, ಲೆಫ್ಟಿನೆಂಟ್ ರಾಜೇಶ್ ಶೆಟ್ಟಿಗಾರ್, ಲೆಫ್ಟಿನೆಂಟ್ ಗಾಯತ್ರಿ ಬಿಕೆ, ಅಧಿಕಾರಿ ಸಂಜಿತ್ ಶೆಟ್ಟಿ ಮತ್ತು ಲೆಫ್ಟಿನೆಂಟ್ ಜಾನ್ಸನ್ ಶಿಬಿರದ ಎಎನ್ಒಗಳಾಗಿ ಸಹಕರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ಕಮಾಂಡಿಂಗ್ ಆಫೀಸರ್ ಕರ್ನಲ್ ನಿತಿನ್ ಭಿಡೆ ಮತ್ತು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ಬಾಸಿಲ್ ವಾಸ್ ರವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು. ಕಮಾಂಡಿಂಗ್ ಅಧಿಕಾರಿಯ ಮುಕ್ತಾಯದ ಮಾತುಗಳಿಂದ ಮುಕ್ತಾಯವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಎನ್ ಸಿ ಸಿ ಹಾಡು ಮತ್ತು ರಾಷ್ಟ್ರಗೀತೆಯನ್ನು ಹಾಡಲಾಯಿತು.