ಪುತ್ತೂರು: ಪರ್ಲಡ್ಕದ ಪೈ ಕೆಟರರ್ಸ್ ಮಾಲಕ ದಿನೇಶ್ ಪೈಯವರಿಂದ ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳಿಂದ ಜೂನ್ 20ರಂದು ಸಂಜೆ ಬಂಧಿಸಲ್ಪಟ್ಟು ಇದೀಗ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ರವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈಯವರು ವಜಾಗೊಳಿಸಿ ಆದೇಶಿಸಿದ್ದಾರೆ. ಈ ಮೂಲಕ ಡಾ. ಪ್ರದೀಪ್ ಕುಮಾರ್ರವರು ಇನ್ನೂ ಕೆಲವು ದಿನ ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ.
ಲೋಕಸಭಾ ಚುನಾವಣೆ ಪ್ರಯುಕ್ತ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ನಡೆದ ಮಸ್ಟರಿಂಗ್, ಡಿ ಮಸ್ಟರಿಂಗ್ ಮತ್ತು ತರಬೇತಿ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಒಟ್ಟು 19 ದಿನ ಹಗಲು ರಾತ್ರಿ ಊಟ ಹಾಗೂ ಉಪಹಾರ ಪೂರೈಸಿದ್ದ ಪರ್ಲಡ್ಕ ಪೈ ಕೆಟರರ್ಸ್ ಮಾಲಕ ದಿನೇಶ್ ಪೈಯವರಿಗೆ ಸರಕಾರದಿಂದ 9ಲಕ್ಷದ 39 ಸಾವಿರ ರೂ ಮಂಜೂರು ಮಾಡಲು ಒಮ್ಮೆ 99 ಸಾವಿರ ರೂ ಮತ್ತು ಇನ್ನೊಮ್ಮೆ 1 ಲಕ್ಷದ 25 ಸಾವಿರ ರೂ ಲಂಚ ಪಡೆದ ಪ್ರಕರಣದಡಿ ಬಂಧಿತರಾಗಿ ಇದೀಗ ಸೆರೆಮನೆಯಲ್ಲಿರುವ ಡಾ. ಪ್ರದೀಪ್ ಕುಮಾರ್ರವರ ಪರ ವಕೀಲರಾದ ಕೆ.ಕೆ. ಅಮೀನ್ ಮತ್ತು ಲಮಾಣಿಯವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ರಾಜೇಶ್ ಕೆ.ಎಸ್.ಎನ್.ರವರು ಡಾ. ಪ್ರದೀಪ್ ಕುಮಾರ್ರವರಿಗೆ ಜಾಮೀನು ನೀಡುವುದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲರ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಮುರಳೀಧರ ಪೈಯವರು ಜೂನ್ 27ರಂದು ಆದೇಶ ಪ್ರಕಟಿಸಿದ್ದು ಡಾ. ಪ್ರದೀಪ್ರವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಹೈಕೋರ್ಟ್ಗೆ ಅರ್ಜಿ ಸಲ್ಲಿಸಲು ಸಿದ್ಧತೆ
ಮಂಗಳೂರಿನ 3ನೇ ಸೆಷೆನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಡಾ. ಪ್ರದೀಪ್ ಕುಮಾರ್ರವರು ಜಾಮೀನು ಪಡೆಯುವುದಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಬೇಕಿದೆ. ಮಂಗಳೂರಿನಲ್ಲಿಯೇ ಅವರು ಜಾಮೀನು ಪಡೆಯುವುದಾದರೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ನ್ಯಾಯಾಲಯಕ್ಕೆ ಜಾರ್ಜ್ಶೀಟ್(ದೋಷಾರೋಪಣಾ ಪಟ್ಟಿ) ಸಲ್ಲಿಸುವವರೆಗೆ ಕಾಯಬೇಕಿದೆ. ಜಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ಅವರಿಗೆ ಮಂಗಳೂರು ನ್ಯಾಯಾಲಯಕ್ಕೆ ಇನ್ನೊಮ್ಮೆ ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಅದಕ್ಕೆ ಇನ್ನೂ ಕೆಲವು ದಿನಗಳು ಬೇಕಾಗಿರುವುದರಿಂದ ಡಾ. ಪ್ರದೀಪ್ರವರ ಪರ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಲು ವಕೀಲರು ಸಿದ್ಧತೆ ನಡೆಸಿದ್ದಾರೆ.