ಪುತ್ತೂರು: 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಸಂಜೀವ ಭಟ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿರುವುದರ ಹಿಂದೆ ಮೋದಿ ಸರಕಾರದ ಷಡ್ಯಂತ್ರವಿದೆ. ಯಾರೆಲ್ಲಾ ಸಂಘ ಪರಿವಾರದ ವಿರುದ್ಧ ಮಾತನಾಡುತ್ತಾರೋ ಅವರನ್ನು ಮೋದಿ ಸರಕಾರ ಗುರಿಯಾಗಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ತಾಲೂಕು ಅಧ್ಯಕ್ಷ ಸವಾದ್ ಕಲ್ಲರ್ಪೆ ಅವರು ಹೇಳಿದರು.
ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರ ನ್ಯಾಯ ಸಮ್ಮತವಲ್ಲದ ಬಂಧನ ಮತ್ತು ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ ತಾಲೂಕು ಸಮಿತಿ ವತಿಯಿಂದ ಜೂ. ೨೮ರಂದು ಪುತ್ತೂರು ಪ್ರಧಾನ ಅಂಚೆ ಕಚೇರಿ ಬಳಿಯಿಂದ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯ ತನಕ ವಿದ್ಯಾರ್ಥಿ ಖಂಡನಾ ಮಾರ್ಚ್ ಮತ್ತು ಗಾಂಧಿಕಟ್ಟೆಯ ಬಳಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಭಯೋತ್ಪಾದನಾ ಕೇಸಿನಲ್ಲಿ ಸಾಧ್ವಿ ಅವರು ಪಾರ್ಲಿಮೆಂಟಿಗೆ ಹೋಗಲು ಅವಕಾಶವಿದೆ ಎಂದಾದರೆ ಗುಜರಾತ್ನಲ್ಲಿ ನಡೆದ ಹತ್ಯಾಕಾಂಡದಲ್ಲಿ ದಕ್ಷ ಅಧಿಕಾರಿಯಾಗಿದ್ದ ಸಂಜೀವ ಭಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಜಾತ್ಯಾತೀತ ಮನೋಭಾವ ಇರುವ ಪ್ರತಿಯೊಬ್ಬರು ಇವತ್ತು ಪ್ರಶ್ನಿಸಬೇಕಾಗಿದೆ.
೨೦೦೧ ರಿಂದ ೨೦೧೬ರ ತನಕ ೧೮೦ ಕಸ್ಟಡಿ ಸಾವಾಗಿದ್ದರೂ ಯಾರಿಗೂ ಜೀವಾವಧಿ ಶಿಕ್ಷೆ ವಿಧಿಸಿಲ್ಲ. ಆದರೆ ಸಂಜೀವ ಭಟ್ ಅವರನ್ನು ೩೦ ವರ್ಷಗಳ ಹಿಂದಿನ ಕಸ್ಟಡಿ ಹೆಸರಲ್ಲಿ ಮೋದಿ ಸರಕಾರ ಮಾಡದ ತಪ್ಪಿಗೆ ಅನ್ಯಾಯವಾಗಿ ಗುರಿಯಾಗಿಸಿದೆ. ಈ ನಿಟ್ಟಿನಲ್ಲಿ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಚ್ಯುತಿ ಬಂದಾಗ ಪ್ರತಿಯೊಬ್ಬರು ಇದರ ವಿರುದ್ಧ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಗಲಭೆಗೆ ಮೋದಿ, ಅಮಿತ್ ಶಾ ಸಹಕಾರ:
ಗುಜರಾತ್ನಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಮುಂದಾದಾಗ ಆಗಿನ ಗುಜರಾತಿನ ಮುಖ್ಯಮಂತ್ರಿ ಮೋದಿ ಮತ್ತು ಗೃಹಸಚಿವರಾಗಿದ್ದ ಅಮಿತ್ ಶಾ ಅವರು ಪೊಲೀಸ್ ಅಧಿಕಾರಿಗಳಿಗೆ ನೀವ್ಯಾರೂ ಗಲಭೆ ನಿಲ್ಲಿಸಲು ಹೋಗಬೇಡಿ ಎಂದು ನಿರ್ದೇಶನ ನೀಡಿದ್ದಾರೆ. ಆದರೆ ದಕ್ಷ ಅಧಿಕಾರಿ ಸಂಜೀವ ಭಟ್ ಅವರ ಕಣ್ಣಮುಂದೆಯೇ ಹತ್ಯೆ ನಡೆಯುತ್ತಿದ್ದಾಗ ಅವರು ಆರೋಪಿಗಳನ್ನು ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಜೀವಭಟ್ ಅವರನ್ನು ಈ ಕೇಸಿನಲ್ಲಿ ಸಿಕ್ಕಿಸಲಾಗಿದೆ ಎಂದು ಸವಾದ್ ಕಲ್ಲರ್ಪೆ ಹೇಳಿದರು.
ಭಕ್ತಿಯ ಹೆಸರನ್ನು ಅಸ್ತ್ರವನ್ನಾಗಿಸಿದ ಸಂಘಟನೆ:
ಶ್ರೀರಾಮ ಮತ್ತು ಗೋವು ಭಕ್ತಿಯ ಹೆಸರು ಆದರೆ ಇದನ್ನೆ ದುರ್ಬಳಕೆ ಮಾಡುತ್ತಿರುವ ಹಿಂದೂ ಸಂಘಟನೆಗಳು, ಸಂಘಪರಿವಾರದವರು ಭಕ್ತಿಯ ಹೆಸರಿನಲ್ಲಿ ಅಮಾಯಕರಲ್ಲಿ ಹೇಳಿಸಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡುತ್ತಿದ್ದಾರೆ ಎಂದು ಸವಾದ್ ಹೇಳಿದರು.
ಪುಸ್ತಕದ ಬದನೆಕಾಯಿ ಬೇಕಾಗಿಲ್ಲ:
ಸಿಎಫ್ಐ ಸಂಘಟನೆಯ ವಿದ್ಯಾರ್ಥಿ ಕಾರ್ಯಕರ್ತರು ಪುಸ್ತಕದ ಬದನೆಕಾಯಿ ಪಡೆಯಲು ಬಂದವರಲ್ಲ. ನಮಗೆ ಕೇವಲ ಪರೀಕ್ಷೆಗಳಲ್ಲಿ ಪಾಸಾಗುವುದು ಮುಖ್ಯವಲ್ಲ. ಸೈದಾಂತಿಕವಾಗಿ ಮತ್ತು ಸಂವಿಧಾನಿಕವಾಗಿ ನಾವು ತರಬೇತಿ ಪಡೆದಿದ್ದೇವೆ ಎಂದು ನವಾಜ್ ಕಲ್ಲರ್ಪೆ ಹೇಳಿದರು. ಸಿಎಫ್ಐ ತಾಲೂಕು ಕಾರ್ಯದರ್ಶಿ ರಿಯಾಜ್ ಅಂಕತ್ತಡ್ಕ, ಉಪಾಧ್ಯಕ್ಷ ಅಪ್ರಿದ್ ಕೂರ್ನಡ್ಕ, ಸದಸ್ಯ ನಿಜಾಮ್ ಕಲ್ಲರ್ಪೆ, ಬೆಳ್ಳಾರೆ ಘಟಕದ ಅಧ್ಯಕ್ಷ ಜಾಬೀರ್, ಮುನೀರ್, ಶಮನ್ ಬನ್ನೂರು, ಪಾರೂಕ್ ಕಬಕ, ಅನ್ವರ್ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.