- ಸವಾಲುಗಳುಳ್ಳ ಸಂಶೋಧನೆ ಸತ್ಯದ ಅನಾವರಣ- ಡಾ. ಜೆ ದಿನಕರ ಅಡಿಗ
ಪುತ್ತೂರು: ವಿಜ್ಞಾನದಲ್ಲಿ ಎದುರಾಗುವ ಪ್ರತಿಯೊಂದು ಸೋಲು ವಿಜ್ಞಾನಿಗಳಲ್ಲಿ ಇನ್ನಷ್ಟು ಸಂಶೋಧನೆಗೆ ಪ್ರೇರಣೆ ಕೊಡುತ್ತದೆ. ಸವಾಲುಗಳನ್ನು ಎದುರಿಸುತ್ತಾ ನಡೆಸುವ ಸಂಶೋಧನೆಗಳು ಹೊಸ ಸತ್ಯಗಳನ್ನು ಅನಾವರಣಗೊಳಿಸುತ್ತವೆ ಎಂದು ಪುತ್ತೂರಿನ ಐಸಿಎಆರ್ ಇದರ ತೋಟಗಾರಿಕೆ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಜೆ ದಿನಕರ ಅಡಿಗ ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವೇದಿಕೆ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಫೆ.೧೩ ರಂದು `ಅರೋರಾ ೨೦೨೦’-ಅಂತರ್ ಕಾಲೇಜು ವಿಜ್ಞಾನೋತ್ಸವವನ್ನು ಉದ್ಘಾಟಿಸಿ, ಅವರು ಮಾತನಾಡಿದರು. ವಿಜ್ಞಾನವು ಅತ್ಯಂತ ರೋಚಕವಾದುದು. ಈ ಕ್ಷೇತ್ರದಲ್ಲಿ ನಡೆಸಲಾಗುವ ಸಂಶೋಧನೆಗಳು ಸಮಾಜದ ಒಳಿತಿಗೆ ಪೂರಕವಾರಬೇಕು. ಇಂತಹ ವಿಜ್ಞಾನ ಉತ್ಸವಗಳು ವಿದ್ಯಾರ್ಥಿ ಸಮುದಾಯದಲ್ಲಿ ವಿಜ್ಞಾನದ ಕುರಿತು ಇನ್ನಷ್ಟು ಆಸಕ್ತಿ ಮತ್ತು ಕುತೂಹಲವನ್ನು ಉಂಟು ಮಾಡುತ್ತವೆ.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೊನ್ಹಾ ಮಾತನಾಡಿ, ಜ್ಞಾನ ಎಲ್ಲ ಕಡೆಯಿಂದ ಹರಿದು ಬರುತ್ತದೆ. ಅದನ್ನು ಸ್ವಾಂಗೀಕರಿಸುವ ಮನಸ್ಸು ನಮ್ಮದಾಗಬೇಕು. ವಿಜ್ಞಾನೋತ್ಸವಗಳು ಅಂತಹ ಮನೋಭಾವವನ್ನು ಉದ್ದೀಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ವಂ|ಡಾ| ಆಂಟನಿ ಪ್ರಕಾಶ್ ಮೊಂತೆರೊ, ವಿಜ್ಞಾನ ವೇದಿಕೆಯ ನಿರ್ದೇಶಕ ಪ್ರೊ|ಎಡ್ವಿನ್ ಡಿ’ಸೋಜ ಮತ್ತು ಐಕ್ಯುಎಸಿ ಸಂಯೋಜಕ ಡಾ|ಎ.ಪಿ ರಾಧಾಕೃಷ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿಜ್ಞಾನ ವಿಷಯಗಳ ಡೀನ್ ಪ್ರೊ|ಉದಯ ಕೆ, ವಿದ್ಯಾರ್ಥಿ ಸಂಯೋಜಕರಾದ ಶೈನಿ ಡಿ’ಸೋಜ ಮತ್ತು ವಿನಯ ಡಿ.ಆರ್ ಸಹಕರಿಸಿದರು. ಉತ್ಸವದಲ್ಲಿ ಆಸ್ಟ್ರೋಗ್ರಫಿ, ಫೊಟೋಜೆಟ್, ಎಸ್ಪೆರಾಂಟೊ, ಅಖ್ಯಾನಾಮ್ ಯುಫೋರಿಯಾ, ಫೇಸ್ ಫಿಯೇಸ್ಟಾ, ಕೊಲೋಕಿಯಮ್, ಎನಿಗ್ಮ ಮುಂತಾದ ಎಂಟು ರೀತಿಯ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ವಿವಿ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ೧೬ ತಂಡಗಳು ಪಾಲ್ಗೊಂಡಿವೆ.
ಸುಚಿತ್ರಾ ಭಟ್ ಮತ್ತು ಬಳಗ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಯೋಜಕರಾದ ಕುಮಾರ ಸುಬ್ರಹ್ಮಣ್ಯ ಸ್ವಾಗತಿಸಿ, ರಚನಾ ಎನ್ ಆರ್ ವಂದಿಸಿದರು. ರಾಧಿಕಾ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು.