ವಿಟ್ಲ: ಸ್ನೇಹಿತೆ ಜೊತೆ ತೆರಳಿ ಬಳಿಕ ನಾಪತ್ತೆಯಾಗಿದ್ದ ಪೆರುವಾಯಿ ಗ್ರಾಮದ ಯುವತಿಯನ್ನು ಆಕೆಯ ಪ್ರಿಯಕರ, ಬೆಳ್ತಂಗಡಿ ನಿವಾಸಿ ಯುವಕನ ಜೊತೆ ಬೆಂಗಳೂರಿನಲ್ಲಿ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿದ್ದಾರೆ.
ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ ಭಾಸ್ಕರರವರ ಪುತ್ರಿ ಜ್ಯೋತಿ(೨೩ ವ.) ರವರು ಮೇ ೨೯ರಂದು ಆಕೆಯ ಸ್ನೇಹಿತೆ ಶ್ರೇಯಾ ಎಂಬಾಕೆಯೊಂದಿಗೆ ತೆರಳಿದ್ದರು. ಆದರೆ ಬಳಿಕ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ತಂದೆ ಬಾಸ್ಕರ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದರು.
ಸ್ನೇಹಿತೆಯ ಮನೆಗೆಂದು ತೆರಳಿದ್ದ ಜ್ಯೋತಿ: ಮೇ ೨೯ರಂದು ಜ್ಯೋತಿ ಆಕೆಯ ಸ್ನೇಹಿತೆ ಶ್ರೇಯರವರೊಂದಿಗೆ ತೆರಳಿದ್ದರು. ಮಧ್ಯಾಹ್ನದ ವೇಳೆ ಜ್ಯೋತಿಯವರ ಮನೆಗೆ ಕರೆ ಮಾಡಿದ ಶ್ರೇಯ, ಜ್ಯೋತಿ ನನ್ನ ಜತೆ ಬಂದಿರುವುದಾಗಿಯೂ, ಮೂರು ದಿನದ ಬಳಿಕ ಕಳುಹಿಸಿ ಕೊಡುತ್ತೇನೆ ಎಂದೂ ತಿಳಿಸಿದ್ದರು. ಆದರೆ ದಿನ ಕಳೆದರೂ ಮಗಳು ಮನೆಗೆ ಬಾರದಿರುವುದರಿಂದ ಸಂಶಯಗೊಂಡು ಭಾಸ್ಕರರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ಆರಂಭಿಸಿದ ಪೊಲೀಸರಿಗೆ ಸಿಕ್ಕಿತ್ತು ಬಲವಾದ ಕ್ಲೂ:
ಯುವತಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರಂಭಿಕ ಹಂತದಲ್ಲಿ ಕೆಲವೊಂದು ಮಾಹಿತಿಯನ್ನು ಕಲೆಹಾಕಿಕೊಂಡಿದ್ದರು. ಈ ಮಧ್ಯೆ ಆಕೆಯ ಮನೆಯವರು ಮತ್ತು ಸ್ನೇಹಿತೆಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಇನ್ನೊಂದು ಮಹತ್ವದ ಸುಳಿವು ಲಭಿಸಿತ್ತು. ಅದರ ಆಧಾರದಲ್ಲಿ ಆಕೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದನ್ನು ಖಚಿತಪಡಿಸಿಕೊಂಡು ಆ ಆಯಾಮದಲ್ಲಿ ತನಿಖೆಯನ್ನು ಮುಂದುವರೆಸಿದ್ದರು.
ವಿಟ್ಲ ಪೊಲೀಸರು ಬೆಂಗಳೂರಿಗೆ: ಯುವತಿ ನಾಪತ್ತೆ ಪ್ರಕರಣವನ್ನು ಗಂಭೀರ ವಾಗಿ ತೆಗೆದುಕೊಂಡ ಎಸ್.ಐ ವಿನೋದ್ ರೆಡ್ಡಿಯವರಿಗೆ ಲಭಿಸಿದ ಮಾಹಿತಿ ಯಂತೆ ಜೋಡಿ ಬೆಂಗಳೂರಿನಲ್ಲಿರುವುದನ್ನು ಖಚಿತಪಡಿಸಿಕೊಂಡು ತನ್ನ ನೇತೃತ್ವದ ಪೊಲೀಸರೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಜೋಡಿ ಇರುವ ತಾಣವನ್ನು ಖಚಿತಪಡಿಸಿಕೊಂಡು ಅಲ್ಲಿನ ಪೊಲೀಸರ ಸಹಕಾರದಲ್ಲಿ ಬೆಂಗಳೂರಿನ ಮಾರತ್ ಹಳ್ಳಿಯಿಂದ ಜೋಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸುತ್ತಿದ್ದ ಜೋಡಿಗೆ ಮದುವೆಯಾಗಿತ್ತು:
ಬೆಂಗಳೂರಿನಲ್ಲಿರುವ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಿರಣ್ ಹಾಗೂ ಜ್ಯೋತಿರವರ ಮಧ್ಯೆ ಕಳೆದ ಹಲವು ಸಮಯಗಳ ಹಿಂದೆ ಪ್ರೇಮಾಂಕುರಗೊಂಡಿತ್ತು. ಈ ಮಧ್ಯೆ ಒಬ್ಬರನ್ನು ಒಬ್ಬರು ಬಿಟ್ಟಿರಲಾರದ ಹಂತ ತಲುಪಿದಾಗ ಜೋಡಿ ಪರಾರಿಯಾಗಿ ವಿವಾಹವಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ನಾವು ಸ್ವಇಚ್ಚೆಯಿಂದ ಮನೆಬಿಟ್ಟು ಬಂದು ವಿವಾಹವಾಗಿರುವುದಾಗಿ ಜೋಡಿ ಮಾಹಿತಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.