ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ತಂಡವು ಕಾಲೇಜಿನ ಸಂಚಾಲಕ ರಾಧಾಕೃಷ್ಣ ಭಕ್ತ ಅವರ ವಿಶೇಷ ಆಸ್ಥೆಯಿಂದ ವಿವೇಕ ಜೀವವರ್ಧಕ ಎನ್ನುವ ಕೃತಕ ಉಸಿರಾಟದ ಸಾಧನವನ್ನು ನಿರ್ಮಿಸಿದ್ದಾರೆ. ಜಿಲ್ಲಾ ವೈಧ್ಯಕೀಯ ಅಧೀಕ್ಷಕರು, ಜಿಲ್ಲಾ ಸರ್ಜನರು ಮತ್ತು ಹೆಸರಾಂತ ವೈದ್ಯರ ಸಲಹೆ ಸೂಚನೆಗಳ ಮೇರೆಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಸರಳತೆ ಮತ್ತು ಕಾರ್ಯವೈಖರಿಯನ್ನು ಗಮನಿಸಿದ ಅಮೇರಿಕಾದಲ್ಲಿ ನೆಲಸಿರುವ ಅನಿವಾಸಿ ಭಾರತೀಯ ಮಿತ್ರರು ಜತೆ ಸೇರಿ ಸಮಾಜಮುಖೀ ನಿರ್ಣಯವೊಂದನ್ನು ಕೈಗೊಂಡಿದ್ದಾರೆ. ಈ ಉಪಕರಣಕ್ಕೆ ಬೇಕಾದ ಧನಸಂಗ್ರಹಣೆಯನ್ನು ಮಾಡಿ ಈ ಕೃತಕ ಉಸಿರಾಟ ಸಾಧನವನ್ನು ಸರಕಾರಿ ಆಸ್ಪತ್ರೆಗಳಿಗೆ ನೀಡುವ ಮಹತ್ ಅಭಿಲಾಷೆಯನ್ನು ಹೊಂದಿದ್ದಾರೆ.
ಕೋವಿಡ್-19 ರ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರಿ ಆಸ್ಪತ್ರೆಗಳ ತುರ್ತು ಆವಶ್ಯಕತೆಯನ್ನು ಪರಿಗಣಿಸಿ ಈ ನಿರ್ಣಯವನ್ನು ಕೈಗೊಂಡಿದ್ದಾರೆ. ಇದರನ್ವಯ ನ್ಯೂಜೆರ್ಸಿಯ ಹೈಸ್ಕೂಲ್ ವಿದ್ಯಾರ್ಥಿಗಳಾದ ಭಕ್ತಿ ಹೆಗಡೆ, ಅನನ್ಯ ಭಟ್ ಮತ್ತು ಪ್ರಣವ ಜೋಷಿ ಇವರು ಆನ್ಲೈನ್ ಮೂಲಕ ಲಘು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವನ್ನು ನಡೆಸಿ ಧನ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮವನ್ನು https://youtu.be/CEbx_G924RU ಮೂಲಕ ವೀಕ್ಷಿಸಬಹುದಾಗಿದೆ. ಪುತ್ತೂರಿನ ಹಾಗೂ ಆಸುಪಾಸಿನ ದಾನಿಗಳು ತಮ್ಮಿಂದಾದ ಧನ ಸಹಾಯವನ್ನು ಮಾಡುವುದರ ಮೂಲಕ ಈ ಸಮಾಜಮುಖೀ ಕಾರ್ಯದಲ್ಲಿ ಕೈಜೋಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಅವರನ್ನು ಮೊಬೈಲ್ ಸಂಖ್ಯೆ-9743703473 ಮೂಲಕ ಸಂಪರ್ಕಿಸಬಹುದು. ಇದಕ್ಕೆ ಧನ ಸಹಾಯ ಮಾಡಲಿಚ್ಚಿಸುವ ದಾನಿಗಳು http://m-lp.co/vivekaje ಮೂಲಕ ಸಂದಾಯ ಮಾಡಬಹುದು ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.