- ಕೇಂದ್ರ ಸಚಿವ, ಸಹಕಾರಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಪುತ್ತೂರಿಗೆ
ಪುತ್ತೂರು: ಜೇನು ಕೃಷಿಕರ ಅಭ್ಯುದಯ್ಕಕಾಗಿ ಕಳೆದ 82 ವರ್ಷಗಳಲ್ಲಿ ಜೇನು ಕೃಷಿಯಲ್ಲಿ ನಿರತವಾಗಿದ್ದು, ಮಹತ್ತರ ಪ್ರಗತಿ ಸಾಧಿಸುತ್ತಾ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಜಿಲ್ಲೆಗೆ ಕಾರ್ಯಕ್ಷೇತ್ರವನ್ನು ಹೊಂದಿಕೊಂಡು ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೂತನ ವಿಸ್ತೃತ ಆಡಳಿತ ಕಚೇರಿ ಮತ್ತು ಸಭಾಭವನದ ಉದ್ಘಾಟನೆಯು ಅ.3ರಂದು ಪುತ್ತೂರು ಮಾಧುರಿ ಸೌಧದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅವರು ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜೇನು ವ್ಯವಸಾಯಗಾರರ ಸಹಕಾರ ಸಂಘವು ೧೯೩೦ರಲ್ಲಿ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸ್ಥಾಪಿಸಲಾಯಿತು. ಅಲ್ಲಿಂದ ಸಂಘವು ನಿರಂತರ ಜೇನು ಕೃಷಿಕರ ಅಭ್ಯುದಯಕ್ಕಾಗಿ ಉತ್ತಮ ಕಾರ್ಯಚಟುವಟಿಕೆ ನಡೆಸಿದೆ. ಇದೀಗ ಪುತ್ತೂರು ಪ್ರಧಾನ ಕಚೇರಿಯ ಕಟ್ಟಡದಲಿ ರೂ. ೫೦ಲಕ್ಷ ವೆಚ್ಚದಲ್ಲಿ ವಿಸ್ತೃತ ಆಡಳಿತ ಕಚೇರಿ, ಸಭಾಭವನದ ಕಾಮಗಾರಿ ನಡೆಸಲಾಗಿದ್ದು, ಇದರ ಉದ್ಘಾಟನೆಗೆ ಕೇಂದ್ರ ಮತ್ತು ರಾಜ್ಯದ ಸಚಿವರು ಆಗಮಿಸಲಿದ್ದಾರೆ. ನೂತನ ವಿಸ್ತೃತ ಆಡಳಿತ ಕಚೇರಿಯನ್ನು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಉದ್ಘಾಟಿಸಲಿದ್ದಾರೆ. ರಾಜ್ಯ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಾಮ ಫಲಕ ಅನಾವರಣ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಭಾಭವನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅವರು ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ವೆಬ್ಸೈಟ್ಗೆ ಚಾಲನೆ ನೀಡಲಿದ್ದಾರೆ. ವಿಸ್ತೃತ ಮಳಿಗೆಯನ್ನು ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.
ದೇಶದಲ್ಲೇ ಟ್ರೇಡ್ ಮಾರ್ಕ್ ಹೊಂದಿದ ಜೇನು
ಪ್ರಸ್ತುತ ದ.ಕ. ಜಿಲ್ಲೆಯ ಮತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದು, ಸುಳ್ಯದಲ್ಲಿ ಸ್ವಂತ ನಿವೇಶನದಲ್ಲಿ ಮತ್ತು ಉಡುಪಿ ಹಾಗೂ ಧರ್ಮಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಸಂಪನ್ಮೂಲ ವ್ಯಕ್ತಿಗಳಿಂದ ಜೇನು ಕೃಷಿಗೆ ಅಗತ್ಯವಿರುವ ತರಬೇತಿಯನ್ನು ನೀಡಿ ಜೇನು ಕೃಷಿಗೆ ಅಗತ್ಯವಿರುವ ಕೃಷಿ ಸಲಕರಣೆಗಳನ್ನು ಒದಗಿಸುವುದು ಮಾತ್ರವಲ್ಲದೇ, ಜೇನು ಕೃಷಿಕರು ಸಂಗ್ರಹಿಸಿದ ಜೇನನ್ನು ಯೋಗ್ಯ ಬೆಲೆಗೆ ಖರೀದಿಸಿ, ಅತ್ಯಾಧುನಿಕ ಮೈಕ್ರೋಫಿಲ್ಟರ್ ಹೊಂದಿರುವ ಸಂಸ್ಕರಣ ಘಟಕದಲ್ಲಿ ಸಂಸ್ಕರಿಸಿ, ಮಾಧುರಿ ಅಗ್ ಮಾರ್ಕ್ ‘ಎ’ ಗ್ರೇಡ್ ಜೇನನ್ನು ಮಾರುಕಟ್ಟೆಗೆ ಒದಗಿಸುತ್ತಿದೆ. ಹಾಗೂ ದೇಶದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮಾಧುರಿ ಜೇನಿಗೆ ಮಾತ್ರ ‘ಟ್ರೇಡ್ ಮಾರ್ಕ್’ ಲಭ್ಯವಾಗಿದೆ. ಇದು ನಮಗೆ ಹೆಮ್ಮೆಯ ವಿಚಾರ ಎಂದು ಚಂದ್ರಕೋಲ್ಚಾರ್ ಹೇಳಿದ ಅವರು ರಾಜ್ಯದ ಏಕೈಕ ಜೇನು ಕೃಷಿ ಪತ್ರಿಕೆ ‘ಮಧುಪ್ರಪಂಚ’ ವನ್ನು ಸಂಘವು ೪೨ ವರ್ಷಗಳಿಂದ ತ್ರೈಮಾಸಿಕ ಪತ್ರಿಕೆಯಾಗಿ ಮುದ್ರಿಸಿ ಜೇನುಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷಿಕರಿಗೆ ಒದಗಿಸುತ್ತಿದೆ ಎಂದರು.
ಶೇ.25 ಪಾಲು ಮುನಾಫೆ ನೀಡುವ ಏಕೈಕ ಸಹಕಾರಿ ಸಂಘ:
ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿರುವ ಈ ಸಂದರ್ಭದಲ್ಲೂ ಕೂಡ ಜೇನಿನ ಗುಣಮಟ್ಟವನ್ನು ಕಾಯ್ದುಕೊಂಡು ತನ್ನ ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ನಮ್ಮ ಸಂಸ್ಥೆಯ ಜೇನನ್ನು ರಾಜ್ಯ ಅಂತರರಾಜ್ಯ ಹಾಗೂ ವಿದೇಶಗಳಾದ ಬಹ್ರೈನ್, ಸೌಧಿ ಅರೇಬಿಯಾ, ದುಬೈ, ಹಾಗೂ ಮಸ್ಕತ್ಗಳಿಗೆ ರಫ್ತು ಮಾಡಲಾಗುತ್ತಿದೆ. ಅಲ್ಲದೇ, ರೈತರು ಸಂಗ್ರಹಿಸಿ ಸಂಘಕ್ಕೆ ನೀಡಿದ ಪ್ರತಿ ಕಿಲೋ ಜೇನಿಗೆ ರೂ.೧೦/- ರಂತೆ ಬೋನಸ್ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಸದಸ್ಯರ ಪಾಲು ಬಂಡವಾಳಕ್ಕೆ ಶೇ.೨೫ ಪಾಲು ಮನಾಭೆ ನೀಡುತ್ತಿರುವ ರಾಜ್ಯದ ಏಕೈಕ ಜೇನು ವ್ಯವಸಾಯಗಾರರ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಚಂದ್ರ ಕೋಲ್ಚಾರ್ ಹೇಳಿದರು.
ಜೇನು ಕೃಷಿಕರಿಗೆ ಉಚಿ ಪರಿಕರ:
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮಾನ್ಯತೆ ಪಡೆದಿರುವ ನಮ್ಮ ಸಂಘದ ಕಳೆದ ಆರ್ಥಿಕ ವರ್ಷದಲ್ಲಿ ಹನಿಮಿಷನ್ ಕಾರ್ಯಕ್ರಮದಡಿಯಲ್ಲಿ ಸುಮಾರು ೭೫೦ ಜೇನು ಪೆಟ್ಟಿಗೆ, ಜೇನು ಕುಟುಂಬ, ಕಬ್ಬಿಣದ ಸ್ವಾಂಡ್, ಮುಖಪರದೆ. ಹೊಗೆತಿದಿ ಮತ್ತು ಇತರ ಪರಿಕರಗಳನ್ನು ಜೇನು ಕೃಷಿಕರಿಗೆ ಸಂಪೂರ್ಣ ಉಚಿತವಾಗಿ ಒದಗಿಸುವುದರೊಂದಿಗೆ ೫ ದಿನಗಳ ೩ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ಜೇನು ಕೃಷಿಕರಿಗೆ ಮಾಹಿತಿ ಮತ್ತು ತರಬೇತಿ ಒದಗಿಸಿದೆ. ಕಳೆದ ೧೫ ವರ್ಷಗಳಿಂದ ತೋಟಗಾರಿಕಾ ಇಲಾಖೆಯೊಂದಿಗೆ ತರಬೇತಿ ಶಿಬಿರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತೇವೆ. ಕಳೆದ ಬಾರಿ ಉಂಟಾದ ಪ್ರಾಕೃತಿಕ ವಿಕೋಪಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ.೫೦,೦೦೦ ದೇಣಿಗೆಯನ್ನೂ ನೀಡಲಾಗಿದೆ ಎಂದು ಚಂದ್ರಕೋಲ್ಚಾರ್ ಹೇಳಿದರಲ್ಲದೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸುಮಾರು ರೂ.೨.೫೦ಕೋಟಿ ಎಸ್ಎಫ್ಯುಆರ್ಟಿಐ ಅನುದಾನದ ಯೋಜನೆಯನ್ನು ಸಂಘದಲ್ಲಿ ಅಳವಡಿಸಿಕೊಂಡು ಜೇನು ಕೃಷಿಕರಿಗೆ ಅದರ ಪ್ರಯೋಜನವನ್ನು ನೀಡುವ ಉದ್ದೇಶದಿಂದ ಆಯೋಗದೊಂದಿಗೆ ಸಂಪರ್ಕಿವಿರಿಸಿಕೊಂಡು ಅನುದಾನವನ್ನು ನಿರೀಕ್ಷಿಸುತ್ತಿದ್ದೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ತಿಮ್ಮಯ್ಯ ಪಿ, ನಿರ್ದೇಶಕರಾದ ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಪಾಂಡುರಂಗ ಹೆಗ್ಡೆ, ಹೆಚ್ ಸುಂದರ ಗೌಡ, ಡಿ.ತನಿಯಪ್ಪ ಉಪಸ್ಥಿತರಿದ್ದರು.