- ಕಿರುಚಿತ್ರಗಳು ಕೊಡುವ ಸಂದೇಶದ ಮೂಲಕ ಸಾಮಾಜಿಕ ಪರಿವರ್ತನೆಯಾಗಲಿ: ದಿನೇಶ್ ಮೆದು
ಪುತ್ತೂರು: ಕಿರುಚಿತ್ರಗಳಿಗೆ ತನ್ನದೇ ಆದ ವಿಶೇಷತೆ ಇದೆ. ಅಲ್ಪ ಅವಧಿಯಲ್ಲಿ ಜನರ ಮನಮುಟ್ಟುವ ರೀತಿಯಲ್ಲಿ ಕಿರುಚಿತ್ರಗಳು ಕಾರ್ಯನಿರ್ವಹಿಸುತ್ತವೆ. ವಿಭಿನ್ನ ಕಥಾ ವಸ್ತುಗಳಿರುವ, ಸಾಮಾಜಿಕ ಸಂದೇಶ ಸಾರುವ 25 ಕಿರುಚಿತ್ರಗಳನ್ನು ನಿರ್ಮಿಸಲು ಹೊರಟಿರುವ ಅಕ್ಷಯ್ ರೈ ದಂಬೆಕ್ಕಾನ ತಂಡದ ಕೆಲಸವು ಯಶಸ್ವಿಯಾಗಲಿ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಶುಭ ಹಾರೈಸಿದರು.
ಅವರು ನ.೨೩ ರಂದು ದಂಬೆಕ್ಕಾನ ನೂಜಿ ತರವಾಡು ಮನೆಯಲ್ಲಿ ನಡೆದ ಕಿರುಚಿತ್ರಗಳ ಚಿತ್ರೀಕರಣದ ಮುಹೂರ್ತದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಕ್ಷಯ್ ರೈಯವರ ತಂದೆ, ಬಿಜೆಪಿಯ ಹಿರಿಯ ಮುಂಖಡ ದಂಬಕ್ಕಾನ ಸದಾಶಿವ ರೈ ಮತ್ತು ಪ್ರಭಾ ಎಸ್.ರೈಯವರು ದೀಪ ಬೆಳಗಿಸಿ ಶುಭಾಶೀರ್ವದಿಸಿದರು. ದಂಬೆಕ್ಕಾನ ಸದಾಶಿವ ರೈ ಮಾತನಾಡಿ, ಸಾಮಾಜಿಕ ಚಿಂತನೆಗಳನ್ನು ಇಟ್ಟುಕೊಂಡು, ಪ್ರಧಾನಿ ಮೋದಿಜಿಯವರ ಆತ್ಮನಿರ್ಭರ ಭಾರತ್ ಪರಿಕಲ್ಪನೆಯಂತೆ ಸ್ವಚ್ಛ ಭಾರತ ಕನಸನ್ನು ನನಸಾಗಿಸುವ ವಿವಿಧ ಸಂದೇಶಗಳನ್ನು ಒಳಗೊಂಡಿರುವ ಕಿರುಚಿತ್ರಗಳನ್ನು ಅಕ್ಷಯ್ ರೈ ತಂಡ ಮಾಡಹೊರಟಿದೆ ಇದಕ್ಕೆ ಪ್ರತಿಯೊಬ್ಬರ ಆಶೀರ್ವಾದ ಮತ್ತು ಹಾರೈಕೆ ಇರಲಿ ಎಂದು ಶುಭ ಹಾರೈಸಿದರು.
ಪುತ್ತೂರು ಟಿಎಪಿಸಿಎಂಸಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಮಾತನಾಡಿ, ಸಮಾಜದಲ್ಲಿರುವ ದುಶ್ಚಟಗಳ ಬಗ್ಗೆ ಮತ್ತು ಸಾಮಾಜಿಕ ಪರಿವರ್ತನೆಯ ವಿಷಯಗಳನ್ನು ಇಟ್ಟುಕೊಂಡು ಕಿರುಚಿತ್ರಗಳನ್ನು ಮಾಡಹೊರಟಿರುವ ದಂಬೆಕ್ಕಾನ ತಂಡದ ಕಾರ್ಯವು ಯಶಸ್ವಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ರೋಟರಿ ಪುತ್ತೂರು ಯುವ ಅಧ್ಯಕ್ಷ, ಉದ್ಯಮಿ ಡಾ| ಹರ್ಷ ಕುಮಾರ್ ರೈ ಮಾಡಾವು ಮಾತನಾಡಿ, ಈಗಾಗಲೇ ಮೂರು ವಿಭಿನ್ನ ಕಥಾ ವಸ್ತುವಿನ ಕಿರುಚಿತ್ರಗಳನ್ನು ಮಾಡಿ ಯಶಸ್ವಿಯಾಗಿರುವ ಅಕ್ಷಯ್ ರೈ ತಂಡ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ೨೫ ಕಿರುಚಿತ್ರಗಳ ಗೊಂಚಲನ್ನು ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ. ಈ ಕಿರುಚಿತ್ರಗಳು ನೀಡುವ ಸಂದೇಶ ನಾಡಿನೆಲ್ಲೆಡೆ ಹೊಸ ಬೆಳಕನ್ನು ಮೂಡಿಸಲಿ ಎಂದು ಹೇಳಿ ಶುಭ ಹಾರೈಸಿದರು. ಯುವ ಉದ್ಯಮಿ ಸಹಜ್ ರೈ ಬಳಜ್ಜರವರು ಮಾತನಾಡಿ, ಸಾಮಾಜಿಕ ಕೆಡುಕುಗಳು, ದುಶ್ಚಟಗಳ ಬಗ್ಗೆ ಸಮಾಜದ ಕಣ್ಣು ತೆರೆಸುವ ಪ್ರಯತ್ನಕ್ಕೆ ಅಕ್ಷಯ್ ರೈ ದಂಬೆಕ್ಕಾನ ತಂಡ ಹೆಜ್ಜೆ ಇಟ್ಟಿದೆ. ಉತ್ತಮ ಸಂದೇಶಗಳನ್ನು ಕೊಡುವ ಕಿರುಚಿತ್ರಗಳನ್ನು ಮಾಡುವ ಮೂಲಕ ಸಮಾಜದ ಪರಿವರ್ತನೆಯನ್ನು ಮಾಡುವ ಮೂಲಕ ಮೋದಿಜಿಯವರ ಕನಸನ್ನು ನನಸು ಮಾಡುವಲ್ಲಿಯೂ ತಮ್ಮಿಂದ ಸಾಧ್ಯವಾಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಕಿರುಚಿತ್ರಗಳ ನಿರ್ದೇಶಕ ರತನ್ ಪೂಜಾರಿ ಮಾತನಾಡಿ ಎಲ್ಲರ ಸಹಕಾರ ಕೋರಿದರು. ಕಹಳೆ ನ್ಯೂಸ್ ಮುಖ್ಯಸ್ಥ ಶ್ಯಾಮ್ಸುದರ್ಶನ್, ಪತ್ರಕರ್ತ ಸಿಶೇ ಕಜೆಮಾರ್ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಗೌರವಾರ್ಪಣೆ
ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದಂಬೆಕ್ಕಾನ ನೂಜಿ ತರವಾಡು ಮನೆಗೆ ಭೇಟಿ ನೀಡಿದ ದಿನೇಶ್ ಮೆದುರವರನ್ನು ದಂಬೆಕ್ಕಾನ ಸದಾಶಿವ ರೈಯವರ ಶಾಲು ಹಾಕಿ ಗೌರವಿಸಿದರು. ಕಿರುಚಿತ್ರಗಳನ್ನು ಮಾಡಹೊರಟಿರುವ ಅಕ್ಷಯ್ ರೈ ದಂಬೆಕ್ಕಾನರವರನ್ನು ರೋಟರಿ ಯುವ ಅಧ್ಯಕ್ಷ ಡಾ| ಹರ್ಷ ಕುಮಾರ್ ರೈಯವರು ಶಾಲು ಹಾಕಿ, ಫಲಪುಷ್ಪ,ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಛಾಯಾಗ್ರಹಕ ಪ್ರಮೋದ್, ಹಿರಿಯ ಬಿಜೆಪಿ ಮುಖಂಡ ವೇಣುಗೋಪಾಲ್ ರೈ ನೂಜಿ ಮತ್ತಿತರರು ಉಪಸ್ಥಿತರಿದ್ದರು. ಅಕ್ಷಯ್ ರೈ ದಂಬೆಕ್ಕಾನ ಸ್ವಾಗತಿಸಿ ವಂದಿಸಿದರು.
ಸಾಮಾಜಿಕ ಪರಿವರ್ತನೆಯ ಸಂದೇಶಗಳನ್ನು ಒಳಗೊಂಡಿರುವ ೨೫ ಕಿರುಚಿತ್ರಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಸಮಾಜಮುಖಿ ಚಿಂತನೆ, ಪ್ರಧಾನಿ ಮೋದಿಜಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆ, ಸ್ವಚ್ಛ ಭಾರತ್, ಅಚ್ಛೇ ದಿನ್ ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ಚಿತ್ರಗಳೂ ಇವೆ. ಈ ಕಿರುಚಿತ್ರಗಳಲ್ಲಿ ಸಿಎಂ, ಸಚಿವರು, ಶಾಸಕರು, ರಾಜಕೀಯ ನಾಯಕರುಗಳು ಅಲ್ಲದೆ ಸಮಾಜದ ವಿವಿಧ ಕ್ಷೇತ್ರದ ಗಣ್ಯರು ಮಾತನಾಡಲಿದ್ದಾರೆ. ೨೫ ಕಿರುಚಿತ್ರಗಳ ಚಿತ್ರೀಕರಣದ ಮುಹೂರ್ತ ನಡೆದಿದ್ದು ಕೆಯ್ಯೂರು, ತಿಂಗಳಾಡಿ, ಪುತ್ತೂರು ಸುತ್ತಮುತ್ತ ಹಾಗೂ ಬೆಳ್ತಂಗಡಿಯಲ್ಲಿ ಚಿತ್ರೀಕರಣ ನಡೆಯಲಿದೆ. ಎಲ್ಲರ ಸಹಕಾರ ಪ್ರೋತ್ಸಾಹ ಅಗತ್ಯ – ಅಕ್ಷಯ್ ರೈ ದಂಬೆಕ್ಕಾನ, ಸದಸ್ಯರು, ಬಿಜೆಪಿ ಯುವಮೋರ್ಛಾ ರಾಜ್ಯ ಕಾರ್ಯಕಾರಿಣಿ, ಕಿರುಚಿತ್ರಗಳ ನಿರ್ಮಾಣಕಾರರು