ವಿಟ್ಲ: ನೆಟ್ಲ ಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಡಿ.1ರ ಮುಂಜಾನೆ ಬೆಳಕಿಗೆ ಬಂದಿದೆ.
ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಪರ್ಲೊಟ್ಟು ನಿವಾಸಿ ಬಿ.ಹುಸೇನ್ ರವರ ಪುತ್ರ ಉಮ್ಮಾರ್ ಫಾರುಕ್ ರವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು, ನ.೩೦ರಂದು ರಾತ್ರಿಯಿಂದ ಡಿ.೧ರ ಮುಂಜಾನೆ ಒಳಗೆ ಕಳವು ನಡೆದಿರುವುದಾಗಿ ಮನೆ ಮಂದಿ ತಿಳಿಸಿದ್ದಾರೆ.
ಮನೆ ಮಾಲಕ ಉಮ್ಮಾರ್ ಫಾರುಕ್ ರವರು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯ ಒಂದು ಬೆಡ್ ರೂಮಿನಲ್ಲಿ ಮಲಗಿದ್ದರು. ಇನ್ನೋರ್ವ ಪುತ್ರ ಬೇರೊಂದು ಬೆಡ್ ರೂಮಿನಲ್ಲಿ ಮಲಗಿದರೆ ಮನೆಯ ಕೆಲಸದ ಮಹಿಳೆ ಮೇಲ್ಭಾಗದ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಪತ್ನಿ, ಮಕ್ಕಳೊಂದಿಗೆ ಉಮ್ಮಾರ್ ಫಾರುಕ್ ರವರು ಮಲಗಿದ್ದ ಕೋಣೆಗೆ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ದೋಚಿ ಹಿಂಭಾಗಿಲ ಮೂಲಕ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞ ರನ್ನೂ ಕರೆಸಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ಜಷ್ಟೆ ಲಭಿಸಬೇಕಾಗಿದೆ.