ವಿಟ್ಲ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಚಾಲಕ, ಮಗು ಹಾಗೂ ಮಹಿಳೆ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಡಿ.3ರಂದು ಮಧ್ಯಾಹ್ನ ಸಂಭವಿಸಿದೆ.
ಮಾಣಿ ನಿವಾಸಿಗಳಾದ ವ್ಯಾಗನರ್ ಕಾರಿನ ಚಾಲಕ ನಯಾಜ್ ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿದ್ದ ಅವರ ಸಂಬಂಧಿಗಳಾದ ಸಫಾ ಹಾಗೂ ಚಿಕ್ಕ ಮಗು ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಇವರು ನೇರಳಕಟ್ಟೆ ಮದುವೆ ಹಾಲ್ ಇಂಡಿಯನ್ ಆಡಿಟೋರಿಯಮ್ ನಿಂದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಕಾರಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಕೊಡಾಜೆ ಶ್ರೀರಾಮಚಂದ್ರಾಪುರ ಮಠಕ್ಕೆ ತೆರಳುವ ರಸ್ತೆಯ ಮುಂಭಾಗದಲ್ಲಿ ಮಾಣಿ ಕಡೆಯಿಂದ ಬಂದ ರಿಡ್ಜ್ ಕಾರು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಘಟನೆಯಲ್ಲಿ ವೇಗನರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ರಿಡ್ಜ್ ಕಾರಿನ ಏರ್ ಬ್ಯಾಗ್ ತೆರೆದಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.