ವಿಟ್ಲ: ಬದುಕು ನಿರಂತರ ಹರಿಯುವ ನೀರಿನಂತೆ ಚಲನಶೀಲವಾಗಿರುವುದು. ದೇಹ ವೆಂಬ ರಥಕ್ಕೆ ಧರ್ಮ ಎಂಬ ಪಥ ಅಗತ್ಯ. ಧರ್ಮದ ಪಥದಲ್ಲಿ ನಾವೆಲ್ಲ ಸಾಗಿದಾಗ ನಮ್ಮ ಬದುಕು ಹಸನಾಗುತ್ತದೆ. ಸಮಾಜ ಸೇವೆ ಸಂತನ ಕರ್ತವ್ಯ, ಮನಸ್ಸು ಎಂಬ ಅಲೆ ಅಂತರಂಗದಲ್ಲಿ ಕ್ರೀಯಾಶೀಲವಾಗಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವದತ್ತಸಂಸ್ಥಾನದಲ್ಲಿ ಫೆ.೨೨ರಂದು ಶ್ರೀ ಒಡಿಯೂರು ರಥೋತ್ಸವದ ಪ್ರಯುಕ್ತ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ದ ಧರ್ಮ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಆಧ್ಯಾತ್ಮ ಮತ್ತು ವಿಜ್ಞಾನ ಜೊತೆ ಜೊತೆಯಾಗಿ ಸಾಗಬೇಕು. ಸಾಧನೆಯ ಗುಟ್ಟು ಭಗವಂತನಲ್ಲಿದೆ. ಅಂತರಂಗದಲ್ಲಿ ನಿಜವಾದ ಶಾಂತಿಯನ್ನು ಹುಡುಕಬೇಕು. ಆಧ್ಯಾತ್ಮದಲ್ಲಿ ಶಾಂತಿ ಆನಂದ ಪ್ರಾಪ್ತಿ ಯಾಗುತ್ತದೆ. ಧರ್ಮದ ರಹದಾರಿಯಲ್ಲಿ ದೇಹ ರಥ ಸಾಗಿದಾಗ ನಿಜವಾದ ಗಮ್ಯ ಸ್ಥಳವನ್ನು ತಲುಪಬಹುದು. ದೀನ ದಲಿತರ ಸೇವೆಯೇ ಭಗವಂತನಿಗೆ ಸಲ್ಲುವ ನಿಜವಾದ ಸೇವೆ. ನಮ್ಮ ಅಂತರಂಗದಲ್ಲಿ ಸರ್ಜಿಕಲ್ ಸ್ಟ್ರೈಕ್ ಆಗಬೇಕಾಗಿದೆ. ಎಚ್ಚರಿಕೆಯಿಂದ ನಮ್ಮ ಬದುಕನ್ನು ಸಾಗಿಸುವ ಎಂದು ಎಲ್ಲರಿಗೂ ಶುಭಹಾರೈಸಿದರು. ದಿವ್ಯ ಉಪಸ್ಥಿತರಿದ್ದ ಸಾಧ್ವಿ ಶ್ರೀ ಮಾತಾನಂದಮಯೀ ರವರು ಆಶೀರ್ವಚನ ನೀಡಿ ಉತ್ತಮ ಕಾರ್ಯಗಳಿಂದ ಜೀವನ ಸಾರ್ಥಕತೆ, ಆತ್ಮಸಾಕ್ಷಾತ್ಕಾರ ಪ್ರಾಪ್ತಿಯಾಗುತ್ತದೆ. ದೇವರಲ್ಲಿ ಸಮರ್ಪಣಾ ಭಾವದ ಭಕ್ತಿ ಇಟ್ಟಾಗ ಅನುಗ್ರಹ ಸಾಧ್ಯ. ಸಂತನ ಬದುಕು ಅದು ಸಮಾಜಕ್ಕಾಗಿ ಎಂದರು.
ಮರೋಳಿ ಶ್ರೀ ಸೂರ್ಯನಾರಾಯಣ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಶೆಟ್ಟಿ ಮೊಡಂಕಾಪುಗುತ್ತು, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಎ. ಸುರೇಶ್ ರೈ, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಮಂಗಳೂರು ವಲಯ ಕಾರ್ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಉದ್ಯಮಿ ಭಗವಾನ್ ಆಳ್ವ, ವಾಮಯ್ಯ ಶೆಟ್ಟಿ ಮುಂಬೈ, ಅಜಿತ್ ಕುಮಾರ್ ಪಂದಳಂ, ಕೃಷ್ಣ ಶೆಟ್ಟಿ ಮುಂಬೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದತ್ತಪ್ರಕಾಶ ವಿಂಶತಿ ವಿಷೇಶಾಂಕವನ್ನು ಸ್ವಾಮೀಜಿಯವರು ಬಿಡುಗಡೆ ಮಾಡಿದರು. ಕದ್ರಿ ನವನೀತ ಶೆಟ್ಟಿಯವರು ಸ್ವಾಮೀಜಿಯವರ ಷಷ್ಠ್ಯಬ್ದ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡದರು.
ವಾಮಯ್ಯ ಶೆಟ್ಟಿ ದಂಪತಿಗಳು ಸ್ವಾಮೀಜಿಯವರಿಗೆ ಫಲಪುಷ್ಪನೀಡಿದರು. ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿರವರು ಸಾಧ್ವಿ ಶ್ರೀ ಮಾತಾನಂದಮಯೀರವರಿಗೆ ಫಲಪುಷ್ಪ ನೀಡಿದರು. ದೇವಪ್ಪ ನೋಂಡ, ರಘುರಾಮ ಶೆಟ್ಟಿ ಕನ್ಯಾನ, ಲೋಕನಾಥ ಶೆಟ್ಟಿ, ದೇವಪ್ಪ ನಾಯ್ಕ, ಮೊದಲಾದವರು ಅತಿಥಿಗಳಿಗೆ ಪುಸ್ತಕಹಾರ ನೀಡಿ ನೀಡಿ ಸ್ವಾಗತಿಸಿದರು. ಕೃತಿ ಶೆಟ್ಟಿ ಪ್ರಾರ್ಥಿಸಿ, ರಥೋತ್ಸವ ಸ್ವಾಗತ ಸಮಿತಿ ಸಂಚಾಲಕ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಸೇರಾಜೆ ಗಣಪತಿ ಭಟ್ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಬಳಿಕ ಕಲಾಗ್ರಾಮ ಕಲ್ಮಡ್ಕ ಇವರಿಂದ ಚೋಮನ ದುಡಿ ತುಳು ಸಾಮಾಜಿಕ ನಾಟಕ ನಡೆಯಿತು.