ಆದಿ ಶಕ್ತಿ ದೇವಿಯೇ ದುಷ್ಟಮರ್ಧನ ಮಾಡಲು ಭೂಲೋಕದಲ್ಲಿ ದೈವೀ ಶಕ್ತಿಗಳಾಗಿ ಆವಿರ್ಭವಿಸುತ್ತಾಳೆ. ಬಳಿಕ ಅಲ್ಲಲ್ಲಿ ದೈವೀ ಶಕ್ತಿಗಳು ನೆಲೆಯೂರಿ ಕಾರಣಿಕತೆ, ಮಹಿಮೆಯಿಂದ ಭಕ್ತರಿಂದ ಆರಾಧನೆಗೊಳಪಟ್ಟು ಪ್ರಸಿದ್ದ ಕ್ಷೇತ್ರಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು, ವಿಟ್ಲ ಸೀಮೆಗೊಳಪಟ್ಟ ಮಾಣಿಲ ಗ್ರಾಮದ ಕುಕ್ಕಾಜೆ ಆಡಳಿತಾತ್ಮಕವಾಗಿ ವಿಟ್ಲ ಸೀಮೆಗೊಳಪಟ್ಟಿದೆ. ತುಳು ನಾಡಿನ ಪರಂಪರೆಯ ದೈವ ದೇವರ ಕಾರ್ಯದಲ್ಲಿ ಕುಂಬ್ಳೆ ಸೀಮೆಗೂ ಸಂಬಂಧವಿದೆ. ಹೀಗೆ ಕುಕ್ಕಾಜೆ ಎರಡೂ ಸೀಮೆಗಳ ಸಂಬಂಧವನ್ನು ಹೊಂದಿಕೊಂಡಿದೆ. ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದಲ್ಲಿ ವಾರ್ಷಿಕ ಹತ್ತು ಹಲವು ಕಾರ್ಯಕ್ರಮ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಜಾತ್ರೋತ್ಸವವು ವೈಭವದಿಂದ ನಡೆಯುತ್ತದೆ. ಫೆ. ೨೭ ರಿಂದ ಮಾ. ೧ ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.
ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಸಂಸ್ಥಾಪಕ, ಆರಾಧಕರೂ ಆಗಿದ್ದ ಧರ್ಮದರ್ಶಿ ಚನಿಯಪ್ಪ ಪೂಜಾರಿಯವರು ಪರಂಪರಾಗತ ಆರಾಧನಾ ಹಿನ್ನಲೆಯಿರುವ ಕುಟುಂಬದವರು. ಖ್ಯಾತ ನಾಟಿ ವೈದ್ಯರಾಗಿದ್ದ ಗುರಿಕಾರ ದಿ| ತ್ಯಾಂಪ ಪೂಜಾರಿ ಮತ್ತು ಅಕ್ಕು ಪೂಜಾರ್ತಿಯ ಸುಪುತ್ರರಾಗಿದ್ದರು. ತಾಯಿಯ ಅಜ್ಜ ಸ್ವಾತಂತ್ರ್ಯ ಪೂರ್ವ ಇಂಗ್ಲೀಷರ ಆಡಳಿತ ಕಾಲದಲ್ಲಿ ಪೋಲಿಸ್ ಇಲಾಖೆಯಲ್ಲಿದ್ದವರು.
ಕ್ಷೇತ್ರದ ಪರಿಚಯ ಮತ್ತು ಹಿನ್ನಲೆ: ಈಗ ದೇವಸ್ಥಾನವಿರುವ ಸ್ಥಳವು ನಾಲ್ಕು ದಶಕಗಳ ಹಿಂದೆ ಬಿದಿರ ಮೆಳೆಗಳಿದಂಲೂ, ಮುಳ್ಳು ಗಂಟೆಗಳಿಂದಲೂ ಕೂಡಿದ, ಜನ ಸಂಚಾರಕ್ಕೆ ಅಸಾಧ್ಯವಾದ ಇಳಿಜಾರು ಕಾಡು ಪ್ರದೇಶವಾಗಿತ್ತು. ಅದನ್ನು ಸಮತಟ್ಟುಗೊಳಿಸುವಾಗ ಅಲ್ಲಿದ್ದ ಹುತ್ತವನ್ನು ಅಗೆಯಬೇಕಾಯಿತು. ಆ ಹುತ್ತದ ಒಳಗೆ ಮಾವಿನ (ಆಕಾರ ಮತ್ತು ಗಾತ್ರದಲ್ಲಿ ಮಾವಿನಂತೆ ಕಾಣುವ) ಗೊಂಚಲುಗಳಿತ್ತು. ಅದರಡಿಯಲ್ಲಿ ಅಗೆಯುವಾಗ ಪಿಕ್ಕಾಸಿನ ಹೊಡೆತಕ್ಕೆ ಸಿಕ್ಕು ಪೂಜೆಗೆ ಉಪಯೋಗಿಸುವ ಒಂದು ಶಂಖ ಛಿದ್ರವಾಯಿತು. ನಂತರ ಸ್ಪಟಿಕದಂತೆ ತೋರುವ ಒಂದು ಸಣ್ಣ ಗಣಪತಿ ವಿಗ್ರಹ ಮತ್ತು ಪದ್ಮರೇಖೆಯಿರುವ ಅಡಿಗಾತ್ರದ ಶಿಲೆಯೊಂದು ಕಂಡು ಬಂತು. ಬಳಿಕ ಕೆಂಪು ಕಲ್ಲಿನ ಗೋಡೆ ಮತ್ತು ಹಂಚು ಛಾವಣಿಯಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯಿತು. ದೇವಳದ ಗರ್ಭಗುಡಿಯ ಮಧ್ಯ ಪೀಠದಲ್ಲಿ ಆದಿ ಪರಾಶಕ್ತಿಯಾದ ಕಾಳಿ, ಬಲ ಬದಿಯ ಪ್ರತ್ಯೇಕ ಪೀಠದಲ್ಲಿ ಆಂಜನೇಯ, ಎಡಬದಿಯ ಪೀಠದಲ್ಲಿ ಗಣಪತಿ, ಸಿರಿಕುಮಾರ ಸಾನ್ನಿಧ್ಯ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಅಗ್ನೇಯ ಭಾಗದ ತಗ್ಗು ಪ್ರದೇಶದ ದಿಣ್ಣೆಯಂತಿದ್ದ ಸ್ಥಳವನ್ನು ೧೯೭೪ರಲ್ಲಿ ಕಟ್ಟಡ ಕಟ್ಟುವ ಉದ್ದೇಶದಿಂದ ಅಗೆಯುವಾಗ ಸುಮಾರು ಮುಕ್ಕಾಲು ಕೋಲು ಚಚೌಕ್ಕದ ಮುರ ಕಲ್ಲಿನಿಂದ ಕಟ್ಟಿದ ಅಡಿಪಾಯ ಕಂಡು ಬಂತು ದೈವಜ್ಞರ ಚಿಂತನೆ ಪ್ರಕಾರ ಅದು ಅನಾದಿ ಕಾಲದಲ್ಲಿದ್ದ ರಕ್ತೇಶ್ವರಿ ಸಾನಿಧ್ಯವೆಂದು ಅಮ್ನಾರು, ಕಾಲಭೈರವ, ಮಹಾಕಾಳಿ, ಕುಟ್ಟಿಚಾತ ಮುಂತಾದ ಭಗವದ್ ಶಕ್ತಿಗಳ ಆವಾಸ ಸ್ಥಾನವಾಗಿತ್ತೆಂದೂ ಕಂಡುಬಂತು. ದೇವಸ್ಥಾನದ ಎದುರು ಪೂರ್ವ ಭಾಗದಲ್ಲಿ ಗದ್ದೆ ನಿರ್ಮಿಸಿದಾಗ ಸುಮಾರು ಐದು ಕೋಲು ಆಳದ ಮುರ ಮಣ್ಣಿನೊಳಗೆ ಪಂಚಲೋಹದ ಒಂದುವರೆ ಅಂಗುಲ ವ್ಯಾಸದ ಬಳೆಗಳು ಕಂಡು ಬಂದಿರುವುದು ಕ್ಷೇತ್ರದ ಪುರಾತನ ಸಾನ್ನಿಧ್ಯ ಶಕ್ತಿಗಳ ಚೈತನ್ಯದ ಕಳೆಯನ್ನು ಪುನರ್ ನಿರ್ಮಿಸಿದೆ.
ತಪಸ್ವಿಯೊಬ್ಬರ ಜ್ಞಾನಾನುಗ್ರಹ: ಕ್ಷೇತ್ರದ ಸಂಸ್ಥಾಪಕರೂ, ಧರ್ಮದರ್ಶಿಗಳಾಗಿದ್ದ ಚನಿಯಪ್ಪ ಪೂಜಾರಿಯವರು ಬಡಕುಟುಂಬದ ಹಿನ್ನೆಲೆಯಿದ್ದವರಾಗಿದ್ದರು. ತಂದೆ ತಾಯಿ ಕುಟುಂಬ ಪುತ್ರ ಸಂತಾನದ ಅಪೇಕ್ಷೆಯಿಂದ ತಮ್ಮ ಧರ್ಮದೈವ ಧೂಮಾವತಿಯನ್ನು ದೀಪ ಹಚ್ಚಿ ಪ್ರಾರ್ಥಿಸುತ್ತಾರೆ. ಪೂರ್ವದಲ್ಲಿ ಇವರ ಕುಟುಂಬವು ಮಂತ್ರ ತಂತ್ರ ವಿದ್ಯೆಯಿಂದ ಸನ್ಯಾಸಿ ಯೋಗವನ್ನು ಪಡೆದು ಲೋಕಕಲ್ಯಾಣ ಮಾಡುತ್ತಿದ್ದ ಕುಟುಂಬವಾಗಿತ್ತು. ತಾಯಿಯ ಪ್ರಾರ್ಥನೆಯಂತೆ ಅವರಿಗೆ ಗಂಡುಮಗುವಿನ ಜನನವಾಗುತ್ತದೆ. ಚನಿಯಪ್ಪ ಪೂಜಾರಿಯವರು ಬಾಲ್ಯದಿಂದಲೇ ಜಪತಪ, ಧ್ಯಾನದಲ್ಲಿ ಆಸಕ್ತರಾಗಿದ್ದರು. ಹಿರಿಯರಿಂದ ಅನೇಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಹಿರಿಯರ ಆಶೀರ್ವಾದ ಹಾಗೂ ಗ್ರಂಥ ಅಧ್ಯಯನ ದ ಅಪೇಕ್ಷೆ ಯಿಂದ ಶಕ್ತಿ ಕ್ಷೇತ್ರ ವಾದ ಕೊಲ್ಲೂರಿನ ಕೊಡಚಾದ್ರಿ ಗೆ ಹೋದ ಸಮಯದಲ್ಲಿ ಕಾಲ ನಿರ್ಣಯವೆಂಬಂತೆ ಗೋಕರ್ಣ ಕ್ಷೇತ್ರ ದಲ್ಲಿ ಪೂಜೆ ನಿರತರಾಗಿದ್ದು ಧರ್ಮಕ್ಷೇತ್ರ ನಿರ್ಮಾಣ ದ ಅತೀವ ಉದ್ದೇಶವನ್ನು ಹೊಂದಿದ್ದ ವಿಶ್ವಕರ್ಮ ಗೋತ್ರದ ಮಹಾ ತಪಸ್ವಿಯೋರ್ವರು ಕೊಡಚಾದ್ರಿ ಯಲ್ಲಿ ಮೋಕ್ಷ ಪ್ರಾಪ್ತಿಗಾಗಿ ತಪೋನಿರತರಾಗಿದ್ದರು ಈ ಸಮಯದಲ್ಲಿ ತನ್ನ ಧರ್ಮ ಉದ್ದೀಪನ ದ ಕಾರ್ಯಕ್ಕೆ ಸೂಕ್ತ ವ್ಯೆಕ್ತಿಯ ನಿರೀಕ್ಷೆ ಯಲ್ಲಿದ್ದರು ಇದೇ ಸಮಯದಲ್ಲಿ ಶ್ರೀ ತನಿಯಪ್ಪ ಪೂಜಾರಿ ಯವರನ್ನು ಕಂಡು ಈ ಕಾರ್ಯ ಕ್ಕೆ ಸೂಕ್ತ ವ್ಯಕ್ತಿಯೆಂದು ಪರಿಗಣಿಸಿ ಮನೋಭಿಲಾಷೆಯನ್ನು ತಿಳಿಸಿ ಆಶೀರ್ವಾದ ಮಾಡಿದರು.
ಚನಿಯಪ್ಪ ಪೂಜಾರಿಯವರು ಎಳೆಯ ವಯಸ್ಸಿನಲ್ಲಿಯೇ ಧರ್ಮ, ಪುರಾಣ, ಗ್ರಂಥಗಳ ಅಧ್ಯಯನದಲ್ಲಿ ಆಸಕ್ತರಾಗಿ ದೈವಾಂಶಸಂಭೂತರಂತೆ ಕಂಡಿದ್ದರು. ಕಾಲಕ್ರಮೇಣ ಕೊಲ್ಲೂರಿಗೆ ಹೋಗಿ ಬಂದು ತಪಸ್ವಿಯ ಜ್ಞಾನಾನುಗ್ರಹದಿಂದ ಬಳಿಕ ಮನೆಯಲ್ಲಿಯೇ ದೇವಿಯ ಆರಾಧನೆ ಆರಂಭಿಸುತ್ತಾರೆ. ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಚನಿಯಪ್ಪ ಪೂಜಾರಿಯವರ ಜೀವನದಲ್ಲಿ ನಡೆದ ಘಟನೆಗಳು ದೇವೀ ಶಕ್ತಿಯಿಂದ ಪ್ರಭಾವಿತವಾದುದು ಎಂದು ಕಂಡುಬಂದಿದೆ. ಕಾಲಕ್ರಮೇಣ ಧರ್ಮದರ್ಶಿ ಚನಿಯಪ್ಪ ಪೂಜಾರಿಯವರ ಕಾಲಾನಂತರ ಅವರ ಹಿರಿಯ ಪುತ್ರ ಡಾ.ವಿಶ್ವನಾಥ ಕುಕ್ಕಾಜೆಯವರು ಕ್ಷೇತ್ರದ ಧರ್ಮದರ್ಶಿಗಳಾಗಿದ್ದರು. ಅವರ ಕಾಲಾನಂತರ ತನಿಯಪ್ಪ ಪುಜಾರಿಯವರ ಕಿರಿಯ ಪುತ್ರ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಸರ್ವಾಭಿವೃದ್ಧಿಯ ರೂವಾರಿಯಾಗಿ, ಕ್ಷೇತ್ರದ ಭಕ್ತರಿಗೆ ದೇವಿಯ ದರ್ಶನ ಭಾಗ್ಯ, ಪ್ರಸಾದವನ್ನು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಗಣಪತಿ, ಶಿವ ಸಿರಿ ಕುಮಾರ ಹಾಗೂ ಆಂಜನೇಯ ಪ್ರತಿಷ್ಠೆ: ಹಿಂದಿನಿಂದಲೇ ದೇವಾಲಯದ ಗರ್ಭಗುಡಿಯಲ್ಲಿ ಪೂಜಿಸಲ್ಪಡುತ್ತಿದ್ದ ಗಣಪತಿ ಹಾಗೂ ಶಿವ ಸಿರಿಕುಮಾರ ದೇವರ ವಿಗ್ರಹಗಳಿಗೆ ಇದೀಗ ನೂತನ ಗರ್ಭಗುಡಿ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ದೇವಾಲಯದ ಬಲಭಾಗದಲ್ಲಿ ಪೂಜಿಸಲ್ಪಡುತ್ತಿದ್ದ ಆಂಜಣೇಯ ಸ್ವಾಮಿಗೆ ದೇವಾಲಯದ ವಾಯುವ್ಯ ಭಾಗದಲ್ಲಿ ನೂತನ ಗರ್ಭಗುಡಿ ನಿರ್ಮಿಸಲಾಗಿದೆ. ಇವೆಲ್ಲದರ ಪ್ರತಿಷ್ಠಾ ಕಲಶಾಭಿಷೇಕವು ಫೆ.೨೭ರಂದು ಜರಗಲಿದೆ.
ಉತ್ಸವಾದಿಗಳ ವಿವರ
ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನ ದಂತೆ ೫೪ ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ. ೨೭ ರಂದು ವಿವಿಧ ತಂಡದ ಭಜನಾ ಕಾರ್ಯಕ್ರಮ ಹಾಗು ಶ್ರೀ ಗಣಪತಿ, ಶ್ರೀ ಆಂಜನೇಯ, ಶ್ರೀ ಶಿವ ಸಿರಿಕುಮಾರ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಫೆ. ೨೮ ರಂದು ಬೆಳಿಗ್ಗೆ ತುಲಾಭಾರ ಸೇವೆ, ಕಲಶ ಸ್ಥಾನ, ಮಹಾಪೂಜೆ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಪ್ರಸಾದ ವಿತರಣೆ, ರಾತ್ರಿ ಶ್ರೀ ಆಂಜನೇಯ ಸೇವೆ ನಡೆಯುತ್ತದೆ. ನಾಗ ದರ್ಶನ, ಶ್ರೀ ದೇವಿಯ ಮಹಾಪೂಜೆ ಬಲಿ ಉತ್ಸವ ಪಲ್ಲಕ್ಕಿ ಉತ್ಸವ, ಸಿಡಿ ಮದ್ದು ಪ್ರದರ್ಶನ, ರಕ್ತೇಶ್ವರಿ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ. ಮಾ. ೧ ರಂದು ಮಧ್ಯಾಹ್ನ ಶ್ರೀ ದೇವಿಯ ದರ್ಶನ ಬಲಿ ಉತ್ಸವ, ರಾತ್ರಿ ಶ್ರೀ ದೇವಿಯ ದರ್ಶನ ಬಲಿ ಉತ್ಸವ, ರಾತ್ರಿ ೨ ಕ್ಕೆ ಅಮ್ಮನವರ ದೊಂದಿ ಸೇವೆ, ಶಕ್ತಿ ಪೂಜೆ, ಮಂಗಳ ಸೇವೆ ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು : ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಫೆ. ೨೮ ರಂದು ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಒರಿಯರ್ದೊರಿ ಅಸಲ್ ನಾಟಕ, ಮಾ. ೧ ರಂದು ಸಂಜೆ ಸ್ಥಳೀಯ ಮಕ್ಕಳ ನೃತ್ಯ ವೈವಿಧ್ಯ, ರಾತ್ರಿ ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಕೇಂದ್ರ ಮಂಜನಾಡಿ ಇವರಿಂದ `ಬಿರ್ದ್ದ ಬೀರೆ ಅಭಿಮನ್ಯು’ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ.
ಕ್ಷೇತ್ರದರ್ಶನ ಹಾಡುಗಳ ಬಿಡುಗಡೆ : ಫೆ. ೨೭ ರಂದು ಬೆಳಿಗ್ಗೆ ಕ್ಷೇತ್ರದ ತುಳು ಭಕ್ತಿಗೀತೆಗಳ ಹಾಡುಗಳನ್ನು ಒಳಗೊಂಡ `ಶ್ರೀ ಕುಕ್ಕಾಜೆ ಕ್ಷೇತ್ರ ದರ್ಶನ’ ಭಕ್ತಿಗೀತೆ ಬಿಡುಗಡೆಗೊಳ್ಳಲಿದೆ.