ಪುತ್ತೂರು: ನಾವು ನಮ್ಮತನದಿಂದ ಹೊರ ಬಂದು ಸಮಾಜದಲ್ಲಿನ ಕಲಾ ಸಂಸ್ಕೃತಿಯನ್ನು ಆಸ್ವಾದಿಸಿ, ಅವನ್ನು ಉಳಿಸಿ ಬೆಳೆಸಿದಾಗ ಕುಟುಂಬ, ದೇಶ ಹಾಗೂ ಸಮಾಜದ ಪ್ರೀತಿಗೆ ಪಾತ್ರರಾಗಬಲ್ಲೆವು ಎಂದು ಎಸ್ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಇದರ ವ್ಯವಸ್ಥಾಪಕ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆರವರು ಹೇಳಿದರು.
ನಾಟ್ಯರಂಜಿನಿ ಕಲಾಲಯ ಟ್ರಸ್ಟ್ ಪುತ್ತೂರು ಇದರ ೧೫ನೇ ವಾರ್ಷಿಕ ನೃತ್ಯ ಸಮಾರಂಭವು ಎ.೩ ರಂದು ಮುಕ್ರಂಪಾಡಿ ಸುಭದ್ರ ಕಲಾಮಂದಿರದ ಸಭಾಂಗಣದಲ್ಲಿ ಸಂಜೆ ಜರಗಿದ್ದು, ಇದರ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಅವರು ಮಾತನಾಡಿದರು. ಭಾರತೀಯ ಪರಂಪರೆ ಎನಿಸಿರುವ ಭರತನಾಟ್ಯ, ಕೂಚುಪುಡಿ, ಮೋಹಿನಿಯಾಟ್ಟಂ ನೃತ್ಯಕ್ಕೆ ಅದರದ್ದೇ ಆದ ಸಂಸ್ಕೃತಿಯಿದೆ. ಮನುಷ್ಯನ ಅಂಧಕಾರ ಹಾಗೂ ಅಜ್ಞಾನಗಳನ್ನು ಹೋಗಲಾಡಿಸುತ್ತದೆ ಈ ಭಾರತೀಯ ಪರಂಪರೆ ಎನಿಸಿರುವ ನೃತ್ಯಗಳು. ಭರತನಾಟ್ಯದಲ್ಲಿ ಎರಡು ಕೈಗಳಲ್ಲಿ ನಮಸ್ಕರಿಸುವ ಮತ್ತು ಮಂಡಿಯೂರಿ ನಮಸ್ಕರಿಸುವ ಸಂಸ್ಕೃತಿಯಿದೆ. ವಿದ್ಯೆಯಿಂದ ವಿನಯತೆ ಎಂಬ ಸ್ಥಾನಮಾನವು ಪಠ್ಯೇತರ ಚಟುವಟಿಕೆಗಳಿಂದ ಪ್ರಾಪ್ತಿಯಾಗುತ್ತದೆ ಎಂದ ಅವರು ವೃತ್ತಿಯಲ್ಲಿ ವಕೀಲೆ ಎನಿಸಿರುವ ಈ ನಾಟ್ಯರಂಜಿನಿ ಸಂಸ್ಥೆಯ ಮುಖ್ಯಸ್ಥೆ ಪ್ರಮೀಳಾರವರು ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ,ರವರು ಮಾತನಾಡಿ, ದೇವರಿಗೆ ಪ್ರೀತಿಯ ಕಲೆ ಎಂದರೆ ಅದು ನಾಟ್ಯ ಮತ್ತು ಸಂಗೀತ. ನೃತ್ಯದಲ್ಲಿ ಬಹಳಷ್ಟು ಪ್ರಕಾರಗಳಿದ್ದು, ನೃತ್ಯದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಭರತನಾಟ್ಯದ ಹೆಚ್ಚುಗಾರಿಕೆಯಾಗಿದೆ. ಭರತನಾಟ್ಯ ಕಲಿಯುತ್ತಾರೆ ಆದರೆ ಹೆಸರು ಗಳಿಸಿದವರು ಕಡಿಮೆ. ಆದರೆ ನಾಟ್ಯರಂಜಿನಿ ಕಲಾಲಯ ಟ್ರಸ್ಟ್ ಸಂಸ್ಥೆಯ ಪ್ರಮೀಳಾರವರು ನೃತ್ಯದಲ್ಲಿ ರಾಜ್ಯಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಪ್ರಶಂಸನೀಯ. ಹೇಗೆ ಶಿಲ್ಪಿಯು ತನ್ನ ಕೈಚಳಕದಿಂದ ಉತ್ತಮ ಶಿಲ್ಪವನ್ನು ಕೆತ್ತಬಲ್ಲನೋ, ಹಾಗೆಯೇ ಕಲಾವಿದರೆನಿಸಿಕೊಳ್ಳುವವರು ಕಠಿಣ ಪರಿಶ್ರಮ, ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಂಡು ಮುನ್ನೆಡೆಯಿರಿಸಿದಾಗ ಯಶಸ್ಸು ತನ್ನದಾಗುವುದು ಎಂದರು.
ನೋಟರಿ ವಕೀಲರಾದ ಚಿದಾನಂದ ಬೈಲಾಡಿರವರು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಭರತನಾಟ್ಯ ಎಂಬುದು ಸಂಸ್ಕೃತಿಯ ಒಂದು ಭಾಗ. ನಾವು ಕಲಿತ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸುವುದು ಶ್ರೇಷ್ಟತೆಯಲ್ಲೊಂದಾಗಿದೆ. ಆ ನಿಟ್ಟಿನಲ್ಲಿ ಈ ಸಂಸ್ಥೆಯ ನಿರ್ದೇಶಕಿ ಅಂತರ್ರಾಜ್ಯ ನೃತ್ಯ ಕಲಾವಿದೆ ಪ್ರಮೀಳಾ ಉದಯಶಂಕರರವರು ಮಕ್ಕಳಿಗೆ ನೃತ್ಯಾಭ್ಯಾಸವನ್ನು ಕಲಿಸುವ ಮೂಲಕ ಕನಸು ಸಾಕಾರಗೊಂಡಿದೆ. ನೃತ್ಯಗುರು ಪ್ರಮೀಳಾರವರಿಗೆ ನೆರೆಯ ಕೇರಳ ಹಾಗೂ ಕರ್ನಾಟಕದಲ್ಲೂ ಶಿಷ್ಯವೃಂದ ಇರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ನಾಟ್ಯರಂಜಿನಿ ಕಲಾಲಯ ಟ್ರಸ್ಟ್ನ ಅಧ್ಯಕ್ಷ ನಾರಾಯಣ ಎಂ ಕಾಸರಗೋಡುರವರು ಮಾತನಾಡಿ, ತನ್ನ ಬಾಲ್ಯದ ೧೬ನೇ ವಯಸ್ಸಿನಲ್ಲಿಯೇ ತಾನು ಕಲೆಯಲ್ಲಿ ಗುರುತಿಸಿಕೊಂಡಿದ್ದೇನೆ. ಯೋಗಾಸನ, ತಾಲೀಮ್, ಕರಾಟೆ ಹೀಗೆ ವಿವಿಧ ಕಲೆಗಳ ಪ್ರಕಾರಗಳನ್ನು ಆಭ್ಯಸಿಸಿದ್ದೇನೆ ಮತ್ತು ೬೪ ಯೋಗಾಸನಗಳನ್ನು ತಾನು ಮಾಡಬಲ್ಲವನಾಗಿದ್ದೇನೆ. ಹತ್ತೂರು ಬಿಟ್ಟರೂ ಪುತ್ತೂರು ಬಿಡೆನು ಎಂಬ ಗಾದೆಯು ಪುತ್ತೂರಿನ ಮಟ್ಟಿಗೆ ಸಾರ್ಥಕವೆನಿಸಿಕೊಂಡಿರುವುದು ಶ್ಲಾಘನೀಯ. ವಿದ್ಯೆ ಮತ್ತು ಹಣ ಬೇಗನೇ ಸಿಗುವುದಿಲ್ಲ, ಅದಕ್ಕೆ ಕಠಿಣ ತಪಸ್ಸು ಬೇಕಾಗಿದೆ ಎಂದರು.
ಕಲಾವಿದರಾದ ಪ್ರತೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ ಪ್ರಮೀಳ ಉದಯಶಂಕರ್ರವರು ಸ್ವಾಗತಿಸಿ, ಕಲಾವಿದೆ ಶ್ರಾವ್ಯ ವಂದಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಯೂಟ್ಯೂಬ್ ನೇರಪ್ರಸಾರ..
ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತೆ ಪ್ರಮೀಳ ಉದಯಶಂಕರ್ರವರ ಸುಮಾರು ೨೫ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ ಮತ್ತು ಕೇರಳನಡನಂ ನೃತ್ಯ ಕಾರ್ಯಕ್ರಮ ಜರಗಿತು. ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣ ಆಚಾರ್ಯ ನರಿಕೊಂಬು, ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ, ಪಿಟೀಲಿನಲ್ಲಿ ವಿದ್ವಾನ್ ಶ್ರೀಧರ ಆಚಾರ್ಯ ಉಡುಪಿ ಪಾಡಿಗಾರ್ರವರು ಸಹಕರಿಸಿದರು. ಕಾರ್ಯಕ್ರಮವನ್ನು ಸುದ್ದಿ ಯೂಟ್ಯೂಬ್ ಚಾನೆಲ್ ನೇರ ಪ್ರಸಾರ ಮಾಡಿತ್ತು.
ರಾಷ್ಟ್ರಮಟ್ಟದಲ್ಲಿ ಗೌರವ..
ಚೆನ್ನೈಯಲ್ಲಿ ನೃತ್ಯದಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ್ಸ್ ಪದವಿ ಪಡೆದ ನಾಟ್ಯರಂಜಿನಿ ಕಲಾಲಯ ಟ್ರಸ್ಟ್ನ ನಿರ್ದೇಶಕಿ ಪ್ರಮೀಳಾ ಉದಯಶಂಕರ್ರವರು ೨೦೦೯-೧೦ರಲ್ಲಿ ದೆಹಲಿಯಲ್ಲಿ ರಾಷ್ಟ್ರಮಟ್ಟದಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ರವರಿಂದ ರಾಷ್ಟ್ರಪತಿ ಭವನದಲ್ಲಿ ಗೌರವ, ಉಪಾಧ್ಯಕ್ಷ ಡಾ.ಅನ್ಸಾರಿರವರಿಂದ ಗೌರವ, ಕ್ರೀಡಾ ಸಚಿವ ಎಂ.ಎಸ್ ಗಿಲ್ರವರಿಂದ ಗೌರವ, ಕರ್ನಾಟಕ ಸ್ಟೇಟ್ ಅವಾರ್ಡ್ ಗವರ್ನರ್ ಆಫ್ ಕರ್ನಾಟಕದ ಪಠಾಣ್ರವರಿಂದ ಗೌರವಕ್ಕೆ ಭಾಜನಾರಾಗಿರುವ ಸಾಧಕಿಯಾಗಿರುತ್ತಾರೆ.
ಸನ್ಮಾನ..
ಬಾಲ್ಯದಿಂದಲೂ ನೃತ್ಯಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿರುವ ನಾಟ್ಯರಂಜಿನ ಕಲಾಲಯ ಟ್ರಸ್ಟ್ನ ಮುಖ್ಯಸ್ಥೆ ಪ್ರಮೀಳಾ ಉದಯಶಂಕರ್ರವರ ತಂದೆ ನಾರಾಯನ ಎಂ ಹಾಗೂ ತಾಯಿ ಪದ್ಮಾವತಿ, ಮದುವೆ ಬಳಿಕ ನೃತ್ಯಕಲೆಯನ್ನು ಮುಂದುವರೆಸಲು ಪ್ರೋತ್ಸಾಹ ನೀಡಿರುವ ಪ್ರಮೀಳಾ ಉದಯಶಂಕರ್ರವರ ಅತ್ತೆ ಚಂದ್ರಾವತಿಯವರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
-ನೃತ್ಯ ತರಬೇತಿಗಳು:
ಭರತನಾಟ್ಯ, ಮೋಹಿನಿಯಾಟ್ಟಂ, ಕೇರಳ ನಡನಂ, ಕೂಚುಪುಡಿ
-ತರಬೇತಿ ಶಾಖೆಗಳು:
ಪುತ್ತೂರು-ಮಾಣಿ-ಕಾಸರಗೋಡು
-ಸಂಪರ್ಕಿಸಬಹುದಾದ ನಂಬರ್:
೯೯೧೬೮೨೧೦೫೪, ೬೩೬೦೪೭೬೯೬೮