ಪುತ್ತೂರು: ನಿಮ್ಮ ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗಿದೆಯೇ? ಇಕೆವೈಸಿ ಥಂಬ್ ಅಗತ್ಯವಿದೆಯೇ? ಪಡಿತರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಎಂಬುದನ್ನು ತಿಳಿಯಬೇಕದರೆ ನೀವು ಪಡಿತರ ವಿತರಣಾ ಕೇಂದ್ರದ ಬಳಿ ಗೋಡೆಯಲ್ಲಿ ಅಥವಾ ನೊಟೀಸ್ ಬೋರ್ಡಿನಲ್ಲಿ ಅಂಟಿಸಿರುವ ಪಟ್ಟಿಯನ್ನು ನೋಡಬೇಕು. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ನೀವು ಥಂಬ್ ಕೊಟ್ಟು ಲಿಂಕ್ ಮಾಡಿಸಿಕೊಳ್ಳಿ ಇಲ್ಲವಾದರೆ ಅಕ್ಟೋಬರ್ ತಿಂಗಳಿನಿಂದ ನಿಮಗೆ ರೇಶನ್ ಅಕ್ಕಿ ಸಿಗುವುದೇ ಇಲ್ಲ.
ಇಂಥಹದೊಂದು ಆದೇಶವನ್ನು ಕಳೆದ ಮೂರು ತಿಂಗಳ ಹಿಂದೆ ಆಹಾರ ಇಲಾಖೆ ಹೊರಡಿಸಿದೆ. ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಶೇ. ೮೭ ಮಂದಿ ತಮ್ಮ ರೇಶನ್ ಕಾರ್ಡನ್ನು ಸರಿಮಾಡಿಸಿಕೊಂಡಿದ್ದಾರೆ. ಉಳಿದವರು ಇನ್ನೂ ಎಚ್ಚೆತ್ತುಕೊಂಡಿಲ್ಲ.
ನಿಮ್ಮ ರೇಶನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿರಬಹುದು ಇದು ಸಾಲದು ಇಕೆವೈಸಿ ಥಂಬ್ ಕೊಡದೇ ಇದ್ದರೆ ಆಧಾರ್ ಲಿಂಕ್ ಮಾಡಿದರೂ ನಿಮಗೆ ಪಡಿತರ ದೊರೆಯುವುದಿಲ್ಲ.
ಕಳೆದ ಜೂನ್ ತಿಂಗಳಿನಿಂದ ಈ ಥಂಬ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಥಂಬ್ ಬೇಕಾದವರ ಪಟ್ಟಿಯನ್ನು ರೇಶನ್ ಅಂಗಡಿಯ ನೊಟೀಸ್ ಬೋರ್ಡಿನಲ್ಲಿ ಹಾಕಲಾಗಿದೆ. ಇದನ್ನು ನೋಡಿ ಹಲವು ಮಂದಿ ತಮ್ಮ ಕಾರ್ಡನ್ನು ದುರಸ್ಥಿ ಮಾಡಿಸಿಕೊಂಡಿದ್ದಾರೆ. ಸ್ಥಳೀಯ ಗ್ರಾಪಂ , ಸೈಬರ್ ಅಥವಾ ಆಹಾರ ಇಲಾಖೆ ಕಚೇರಿಗೆ ತೆರಳಿ ಥಂಬ್ ಕೊಟ್ಟು ಪಡಿತರ ಚೀಟಿಯನ್ನು ಸರಿಮಾಡಿಸಿಕೊಳ್ಳಬಹುದು. ನನಗೆ ಮಾಹಿತಿ ಇಲ್ಲ, ಗೊತ್ತೇ ಇರಲಿಲ್ಲ ಎಂದು ಹೇಳಿ ಏನೂ ಪ್ರಯೋಜನವಿಲ್ಲ. ಥಂಬ್ ಕೊಡದೇ ಇದ್ದರೆ ನಮ್ಮ ಪಡಿತರ ಚೀಟಿ ಓನ್ಲೀ ಚೀಟಿ ಮಾತ್ರ ಅದಕ್ಕೆ ಬೆಲೆಯೇ ಇಲ್ಲ, ಮಾನ್ಯವೂ ಅಲ್ಲ.
ಈಗಾಗಲೇ ಕಳೆದ ಮೂರು ತಿಂಗಳಿನಿಂದ ಥಂಬ್ ಬೇಕಾದವರಿಗೆ ಮಾಹಿತಿ ನೀಡುವ ಕೆಲಸವನ್ನು ಪಡಿತರ ವಿತರಿಸುವಾಗಲೇ ತಿಳಿಸಲಾಗುತ್ತಿದೆ. ಶೇ. ೮೭ ಮಂದಿ ಸರಿಮಾಡಿಸಿಕೊಂಡಿದ್ದಾರೆ. ಉಳಿದವರು ಈ ತಿಂಗಳ ಅಂತ್ಯದೊಳಗೆ ಥಂಬ್ ಕೊಟ್ಟು ಪಡಿತರ ಕಾರ್ಡನ್ನು ಸರಿಮಾಡಿಸಿಕೊಳ್ಳಬೇಕು, ಇಲ್ಲವಾದರೆ ಪಡಿತರ ಸಾಮಾಗ್ರಿ ದೊರೆಯುವುದಿಲ್ಲ.
ಸರಸ್ವತಿ , ಆಹಾರ ನಿರೀಕ್ಷಕರು, ಪುತ್ತೂರು ತಾಲೂಕು