ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.೩೦ರಂದು ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ
ಪೂಕರೆ ಉತ್ಸವ ವಿಜೃಂಭಣೆಯಿಂದ ನಡೆದಿದೆ.
ದೇವರು ಉತ್ಸವ ಸವಾರಿಗೆ ದೇವಳದ ಪಶ್ಚಿಮ ದ್ವಾರದಿಂದ ಹೊರಟು ಪೇಟೆ ಸವಾರಿಯಲ್ಲಿ ಎತ್ತಿನ ಮುಖವಾಡ ಧರಿಸಿದ ಎರುಕುಳ ದೈವದ ಜೊತೆಗೆ ನೆಲ್ಲಿಕಟ್ಟೆಯಲ್ಲಿರುವ ಪೂಕರೆ ಕಟ್ಟೆಗೆ ಬಂದು ಅಲ್ಲಿ ದೇವಳದ ಗದ್ದೆಯನ್ನು ನೋಡಿದ ಬಳಿಕ ಪೂಕರೆಕಟ್ಟೆಯಲ್ಲಿ ಕುಳಿತು ಆರತಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಕುಂಟಾರು ರವೀಶ್ ತಂತ್ರಿ ಮತ್ತು ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಮೂಲ ನಾಗ ಸನ್ನಿಧಿಗೆ ತೆರಳಿದರು. ತಂತ್ರಿಗಳು ಮೂಲ ನಾಗಸನ್ನಿಧಿ ಮತ್ತು ಪೂಕರೆ ಗದ್ದೆಗೆ ತಂತ್ರ ತೂಗಿದ ಬಳಿಕ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ನಾಗ ತಂಬಿಲ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪೂಕರೆ ಸಿದ್ಧ ಪಡಿಸಿದ ಸ್ಥಳದಲ್ಲಿ ಹಿರಿಯರಾದ ಕಿಟ್ಟಣ್ಣ ಗೌಡರು ನುಡಿಗಟ್ಟಿನೊಂದಿಗೆ ಪ್ರಾರ್ಥಿಸಿದದರು. ಪೂಕರೆ ಉತ್ಸವಕ್ಕೆ ಸಂಬಂಧಿಸಿದವರು ದೇವರಮಾರು ಗದ್ದೆ ಮತ್ತು ಬಾಕಿತಮಾರು ಗದ್ದೆಯಲ್ಲಿ ಪೂಕರೆ ಇಟ್ಟು ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಡಾ. ಸುಧಾ ಎಸ್ ರಾವ್, ರಾಮ್ದಾಸ್ ಗೌಡ, ವೀಣಾ ಬಿ.ಕೆ, ರವೀಂದ್ರನಾಥ ರೈ ಬಳ್ಳಮಜಲು, ಬಿ.ಐತ್ತಪ್ಪ ನಾಯ್ಕ್, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಚಿದಾನಂದ ಬೈಲಾಡಿ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ದೇವಪ್ಪನೋಂಡಾ, ರಾಜೇಶ್ ಬನ್ನೂರು, ರತ್ನಾಕರ ನಾಕ್, ಪ್ರಸಾದ್ ಶೆಟ್ಟಿ, ಶ್ರೀಧರ್ ಪಟ್ಲ, ಯು.ಲೋಕೇಶ್ ಹೆಗ್ಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಕೇಪುಳ, ಪಾದೆ ಹೂವಿನಿಂದ ಅಲಂಕರಿಸಿದ ಪೂಕರೆ:
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ಪೂಕರೆಯನ್ನು ನಿರ್ಮಾಣ ಮಾಡಲಾಗುತ್ತದೆ. ಬಾಕಿಮಾರ್ ಗದ್ದೆ ಮತ್ತು ದೇವರಮಾರು ಗದ್ದೆಯಲ್ಲಿ ಈ ಪೂಕರೆಯನ್ನು ನೆಡಲಾಗುತ್ತದೆ. ಅಡಿಕೆ ಮರದ ಮತ್ತು ಬೆತ್ತವನ್ನು ಉಪಯೋಗಿಸಿ ಪೂಕರೆ ಕಟ್ಟಲಾಗುತ್ತದೆ. ಹರೀಶ್ ಆಚಾರ್ಯ ಅವರು ಇದನ್ನು ನಿರ್ಮಾಣ ಮಾಡಿದ ಬಳಿಕ ರಮೇಶ್ ಭಂಡಾರಿ ಪೂಕರೆಯನ್ನು ಅಲಂಕರಿಸುತ್ತಾರೆ. ತೆಂಕಿಲದ ಮೋಂಟಾ ಅವರ ಪುತ್ರರಾದ ರೋಹಿತಾಶ್ವ ಮತ್ತು ಲೋಕೇಶ್ ಮತ್ತಿತರರು ಸೇರಿಕೊಂಡು ಪೂಕರೆ ತಯಾರಿಸುತ್ತಾರೆ. ಇವರೆಲ್ಲರ ಕೂಡುವಿಕೆಯಿಂದ ಪೂಕರೆ ಸಿದ್ದಗೊಳ್ಳುತ್ತದೆ. ಕೇಪುಳ ಹೂವು ಮತ್ತು ಪಾದೆ ಹೂವನ್ನು ಕದಳಿ ಬಾಳೆಗಿಡದ ನಾರಿನಿಂದ ಕಟ್ಟಿ ಪೂಕರೆಯನ್ನು ಶೃಂಗರಿಸಲಾಗುತ್ತದೆ.