ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಆಂದೋಲನ: ಎನ್. ಸಂತೋಷ್ ಹೆಗ್ಡೆಯವರಿಂದ ಜ.೬ರಂದು ಸುಳ್ಯ, ಪುತ್ತೂರಿನಲ್ಲಿ ಚಾಲನೆ

0

ಮಂಗಳೂರು: ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ನೇತೃತ್ವದಲ್ಲಿ ಆರಂಭಿಸಲಾಗಿರುವ ಭ್ರಷ್ಟಾಚಾರ ವಿರೋಧಿ ಜನ ಜಾಗೃತಿ ಆಂದೋಲನಕ್ಕೆ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಪುತ್ತೂರಿನ ಪುರಭವನದಲ್ಲಿ ಜ.೬ರಂದು ಅಪರಾಹ್ನ ೨.೩೦ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರೂ ಆಗಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಯು.ಪಿ. ಶಿವಾನಂದ ತಿಳಿಸಿದ್ದಾರೆ. ಜ.೩ರಂದು ಮಂಗಳೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುzಶಿಸಿ ಮಾತನಾಡಿದ ಡಾ. ಯು.ಪಿ. ಶಿವಾನಂದರವರು ಸುದ್ದಿ ಬಳಗದ ನೇತೃತ್ವದಲ್ಲಿ ೩೬ ವರ್ಷಗಳ ಹಿಂದೆಯೇ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳನ್ನು ಎದುರಿಸಲು ಚುನಾವಣೆಗೆ ಸ್ಪರ್ಧಿಸಿದ್ದೆ. ಮಾತ್ರವಲ್ಲದೆ ಸುದ್ದಿ ಬಿಡುಗಡೆ ಪತ್ರಿಕೆಯೂ ಆರಂಭ ಮಾಡಲಾಗಿತ್ತು. ಬಳಿಕ ಪತ್ರಿಕೆಯ ಮೂಲಕ ನಿರಂತರವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಮತ್ತೆ ಸರಕಾರಿ ಕಛೇರಿಗಳಲ್ಲಿರುವ ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉzಶದಿಂದ ಭ್ರಷ್ಟಾಚಾರ ವಿರೋಧಿ ಆಂದೋಲನ ಆರಂಭಿಸಲಾಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳೂ ಆಗಿರುವ ಕರ್ನಾಟಕ ಲೋಕಾಯುಕ್ತದ ಮಾಜಿ ಮುಖ್ಯಸ್ಥ ಎನ್.ಸಂತೋಷ್ ಹೆಗ್ಡೆಯವರು ಜನವರಿ ೬ರಂದು ಬೆಳಿಗ್ಗೆ ೧೦.೩೦ಕ್ಕೆ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ಮತ್ತು ಮಧ್ಯಾಹ್ನ ೨.೩೦ಕ್ಕೆ ಪುತ್ತೂರು ಪುರಭವನದಲ್ಲಿ ಭ್ರಷ್ಟಾಚಾರ ವಿರೋಧಿ ಫಲಕ ಅನಾವರಣ ಮಾಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದರು.
ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕಾ ಬಳಗದ ನೇತೃತ್ವದಲ್ಲಿ ಬಲಾತ್ಕಾರದ ಬಂದ್ ವಿರುದ್ಧ ಹೋರಾಟ ನಡೆಸಿ ಯಶಸ್ವಿಯಾಗಿzವೆ, ಸುದ್ದಿಯ ಆಂದೋಲನಕ್ಕೆ ಜನರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದ ಡಾ. ಶಿವಾನಂದರವರು ಸರಕಾರಿ ಕಛೇರಿಗಳಲ್ಲಿ ಜನರು ಲಂಚ ನೀಡದೆ ತಮ್ಮ ಕೆಲಸ ಮಾಡಿಕೊಳ್ಳಲು ಸಾಧ್ಯವಾಗಬೇಕು, ಲಂಚ ನೀಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಭಾವನೆಗಳನ್ನು ಜನರಿಂದ ತೆಗೆದು ಹಾಕಬೇಕು. ಲಂಚ ಪಡೆಯುವವರನ್ನು ದರೋಡೆಕೋರರು, ದೇಶದ್ರೋಹಿಗಳು ಎಂದು ಗುರುತಿಸಿ ಅಂತವರನ್ನು ಸಮಾಜವೇ ಬಹಿಷ್ಕಾರ ಮಾಡುವಂತಾಗಬೇಕು ಎಂದು ಹೇಳಿದರು. ನಮ್ಮ ಈ ಆಂದೋಲನ ಯಾವುದೇ ಪಕ್ಷದ ಪರವೂ ಅಲ್ಲ, ವಿರೋಧವೂ ಅಲ್ಲ, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಜನರಿಗೆ ವೇದಿಕೆ ಒದಗಿಸುವ ಕಾರ್ಯವಷ್ಟೇ ನಮ್ಮದು ಎಂದು ಹೇಳಿದ ಅವರು ಶಾಸಕರ ಸಹಿತ ಜನಪ್ರತಿನಿಧಿಗಳನ್ನು, ಎಲ್ಲಾ ಪಕ್ಷದ ಹಾಗೂ ಸಂಘ ಸಂಸ್ಥೆಗಳ ಪ್ರಮುಖರನ್ನು ಮತ್ತು ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲಾಗುವುದು ಎಂದು ತಿಳಿಸಿದರಲ್ಲದೆ ಭ್ರಷ್ಟಾಚಾರದ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕಾಗಿ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಭ್ರಷ್ಟಾಚಾರದ ಪ್ರತಿಕೃತಿ ಸಾಗಲಿದೆ. ಜನವರಿ ೧೦ರಂದು ಸುಳ್ಯ ಮತ್ತು ಪುತ್ತೂರು ಪೇಟೆಯಲ್ಲಿ ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡುವ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಭ್ರಷ್ಟಾಚಾರ ರಹಿತ ಸೇವೆ ನೀಡುವ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸಾರ್ವಜನಿಕವಾಗಿ ಸನ್ಮಾನಿಸುವ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜನವರಿ ೨೬ರ ಪ್ರಜಾಪ್ರಭುತ್ವ ದಿನಾಚರಣೆಯಂದು ಗ್ರಾಮ ಗ್ರಾಮಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಗುವುದು, ದೇಶದ ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸುದ್ದಿ ಬಿಡುಗಡೆಯ ಮುಖಾಂತರ ನಡೆದ ಆನ್‌ಲೈನ್ ಚುನಾವಣೆಯಲ್ಲಿ ಪ್ರತೀ ಸರಕಾರಿ ಕಛೇರಿಯ ಉತ್ತಮ ಅಧಿಕಾರಿ ಮತ್ತು ಉತ್ತಮ ಸಿಬ್ಬಂದಿಯನ್ನು ಜನರೇ ಆಯ್ಕೆ ಮಾಡಿದ್ದಾರೆ. ಗ್ರಾಮ ಸ್ವರಾಜ್ಯದ ಕಲ್ಪನೆ ಸಾಕಾರಗೊಳಿಸಲು ಭ್ರಷ್ಟಾಚಾರದ ಪಿಡುಗು ನಿವಾರಣೆಯಾಗಬೇಕಿದೆ. ಅದಕ್ಕಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಸಮಾಜದ ಎಲ್ಲಾ ವರ್ಗದ ಜನರು ಸ್ವಯಂಪ್ರೇರಿತರಾಗಿ ಈ ಆಂದೋಲನದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಯು.ಪಿ. ಶಿವಾನಂದರವರು ಹೇಳಿದರಲ್ಲದೆ, ಇಡೀ ದೇಶದಲ್ಲಿಯೇ ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಅತೀ ಕಡಿಮೆ ಭ್ರಷ್ಟಾಚಾರ ನಡೆಸುವಂತೆ ಮಾಡುವ ವಿಶ್ವಾಸ ಇದೆ ಎಂದು ಹೇಳಿದರು. ಸರಕಾರಿ ಕಛೇರಿಗಳಲ್ಲಿ ಸರಕಾರಿ ಸೇವೆಗಳನ್ನು ಸಾರ್ವಜನಿಕರು ಭ್ರಷ್ಟಾಚಾರ ರಹಿತವಾಗಿ ಪಡೆಯಲು ಸಹಾಯ ಕೇಂದ್ರ (ಹೆಲ್ಪ್ ಡೆಸ್ಕ್)ಗಳನ್ನು ತೆರೆಯಲು ಸರಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರಬೇಕಿದೆ ಎಂದು ಡಾ. ಯು.ಪಿ. ಶಿವಾನಂದ ಹೇಳಿದರು. ಸುದ್ದಿ ಬಿಡುಗಡೆ ಸಿಇಓ ಸೃಜನ್ ಊರುಬೈಲು ಮತ್ತು ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರರವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here