- ಅಲ್ಲಾಹನ ಕಾರುಣ್ಯದ ಬಗ್ಗೆ ನಿರಾಶರಾಗದಿರಿ: ಖಲೀಲ್ಹುದವಿ
ಪುತ್ತೂರು: ದೇವರು ಸಂಪತ್ತನ್ನು ಎಲ್ಲರಿಗೂ ಕೊಟ್ಟಿಲ್ಲ, ಅದೇ ರೀತಿ ಸ್ಥಾನ, ಮಾನ ಆರೋಗ್ಯವನ್ನು ಎಲ್ಲರಿಗೂ ಕೊಟ್ಟಿಲ್ಲ. ಎಲ್ಲರಿಗೂ ಒಂದೇ ಸ್ಥಾನ ಮಾನ ಕೊಡದೇ ಇರುವುದು ಅಲ್ಲಾಹನ ತೀರ್ಮಾನವಾಗಿದೆ. ಅವನು ಉದ್ದೇಶಿಸಿದ ವ್ಯಕ್ತಿಗಳಿಗೆ ಮಾತ್ರ ಆ ಗೌರವ ಸ್ಥಾನ ಮಾನ ದೊರೆಯುತ್ತದೆ ಅದು ಸಿಗದೇ ಇದ್ದವರು ಅಲ್ಲಾಹನ ಕಾರುಣ್ಯದ ಬಗ್ಗೆ ನಿರಾಶರಾಗದಿರಿ, ಎಲ್ಲವನ್ನೂ ಅಲ್ಲಾಹನೇ ನಿಯಂತ್ರಿಸುವವನಾಗಿದ್ದಾನೆ ಎಂದು ಖ್ಯಾತ ವಾಗ್ಮಿ ಖಲೀಲ್ ಹುದವಿ ಹೇಳಿದರು. ಅವರು ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ನಡೆಯುತ್ತಿರುವ ಸಂಪ್ಯ ಸಾದಾತ್ನಗರ ಮಖಾಂ ಉರೂಸ್ ಕಾರ್ಯಕ್ರಮದ ನಾಲ್ಕನೇ ದಿನದದಂದು ನಡೆದ ಧಾರ್ಮಿಕ ಪ್ರವಚನದಲ್ಲಿ ಮುಖ್ಯ ಭಾಷಣ ಮಾಡಿದರು.
ನಾವು ಮನುಷ್ಯರು ತಪ್ಪು ಮಾಡಿರುತ್ತೇವೆ, ಎಷ್ಟೇ ಒಳ್ಳೆಯವರಾದರೂ ಒಂದಲ್ಲ ಒಂದು ತಪ್ಪು ಮಾಡಿದವರೇ ಆಗಿರುತ್ತಾರೆ. ನಾವು ಮಾಡಿರುವ ಪಾಪಗಳ ಬಗ್ಗೆ ನಮಗೆ ಪಶ್ಚಾತ್ತಾಪ ಇರಲಿ. ಎಲ್ಲಾ ಪಾಪಗಳನ್ನು ಅಲ್ಲಾಹನು ಕ್ಷಮಿಸುವವನಾಗಿದ್ದಾನೆ. ವ್ಯಕ್ತಿಗತ ಭಾಧ್ಯತೆಗಳನ್ನು ಹರತುಪಡಿಸಿ ಉಳಿದ ಎಲ್ಲಾ ಪಾಪಗಳನ್ನು ಅಲ್ಲಾಹನು ಖಂಡಿತಾ ಮನ್ನಿಸುವವನು ನೀವು ಅಲ್ಲಾಹನ ಕಾರುಣ್ಯದ ಬಗ್ಗೆ ನಿರಾಶರಾಗುವುದು ಬೇಡ, ಅಲ್ಲಾಹನು ಕರುಣಾಮಯಿಯಾಗಿದ್ದಾನೆ ನಿಮ್ಮ ಎಲ್ಲಾ ವಿಚಾರಗಳನ್ನು ಬಲ್ಲವನೂ ಅಗಿದ್ದಾನೆ ಎಂದು ಹೇಳಿದರು.
ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಉರೂಸ್ ಕಮಿಟಿ ಅಧ್ಯಕ್ಷರಾದ ಎಸ್ ಅಬ್ದುಲ್ ಜಲೀಲ್ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಕಲಿಕೆಗೆ ಇಸ್ಲಾಮಿನಲ್ಲಿ ವಿಶೇಷ ಸ್ಥಾನ ಮಾನವಿದೆ. ದೀನೀ ವಿಜ್ಞಾನ ವೇದಿಕೆಯಲ್ಲಿ ಭಾಗವಹಿಸುವುದು ಅಲ್ಲಾಹನಿಗೆ ಇಷ್ಟವಾದ ಕಾರ್ಯವಾಗಿದೆ. ಊರಿನಲ್ಲಿ ನಡೆಯುವ ಧಾರ್ಮಿಕ ಮಜ್ಲಿಸ್ ಗಳಲ್ಲಿ ಭಾಗವಹಿಸಿ ಪುನೀತರಾಗಬೇಕು. ಉಲಮಾಗಳಿಗೆ ಅಲ್ಲಾಹನ ಬಳಿಕ ವಿಶೇಷ ಗೌರವ ಇದೆ. ಉಲಮಾಗಳ ವೇದಿಕೆಯಲ್ಲಿ ನೀವು ಭಾಗವಹಿಸಿ ದೀನೀ ವಿಜ್ಞಾನವನ್ನು ಕಲಿಯುವ ಮನಸ್ಸುಳ್ಳವರಾಗಬೇಕು ಎಂದು ಹೇಳಿದರು.
ಅಲ್ಲಾಹನ ಸೃಷ್ಟಿಯ ಹಿಂದೆ ವಿಶೇಷತೆ ಇದೆ. ಜಗತ್ತಿನ ವಿವಿಧ ಕಡೆಗಳಲ್ಲಿ ವಿವಿಧ ತರದ ಪ್ರಾಣಿಗಳು, ಪಕ್ಷಿಗಳನ್ನು ಸೃಷ್ಟಿಸಿದ್ದಾನೆ. ಆಯಾ ವಾತಾವರಣಕ್ಕೆ ಅನುಗುನವಾಗಿ ಅವುಗಳನ್ನು ಸೃಷ್ಟಿ ಮಾಡಿರುವುದು ಅಲ್ಲಾಹನ ದೃಷ್ಟಾಂತಕ್ಕೆ ಉಧಾಹರಣೆಯಾಗಿದೆ. ನಾವು ಮನುಷ್ಯರು , ಅಲ್ಲಾಹನು ಮನುಷ್ಯರನ್ನು ಸೃಷ್ಟಿಸಿರುವುದು ಅವನಿಗೆ ಆರಾಧನೆ ಮಾಡಲು. ದೀನೀ ಇಲ್ಮ್ ಕಲಿಯುವುದು ಆರಾಧನೆಯಾಗಿದೆ. “ಇಲ್ಮ್” ವಿದ್ಯೆಗೆ ಇಸ್ಲಾಮಿನಲ್ಲಿ ಅಪಾರ ಸ್ಥಾನವಿದೆ ಎಂದು ಹೇಳಿದರು. ಪ್ರತೀ ದಿನವೂ ನಾವು ಅಲ್ಲಾಹನಲ್ಲಿ ಕ್ಷಮೆ ಕೇಳಬೇಕು, ಆರಾಧನೆ ಮಾಡುವ ಮೂಲಕ ಪ್ರಾರ್ಥನೆಯನ್ನು ರೂಢಿಸಿಕೊಳ್ಳಬೇಕು ಆಗ ಮಾತ್ರ ಅಲ್ಲಾಹನು ನಮ್ಮ ಜೊತೆಯೇ ಇರುತ್ತಾನೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.
ಅಹ್ಲ್ಬೈತನ್ನು ಗೌರವಿಸಿ: ಹಮೀದ್ ದಾರಿಮಿ
ಅಹ್ಲ್ಬೈತ್ ಅಂದರೆ ಪ್ರವಾದಿಯವರ ಕುಟುಂಬವಾಗಿದೆ. ಪ್ರವಾದಿಯವರ ಕುಟುಂಬವನ್ನು ಗೌರವಿಸುವುದು ಪ್ರತೀಯೊಬ್ಬ ಮುಸ್ಲಮನ ಕರ್ತವ್ಯವಾಗಿದೆ, ಈ ಬಗ್ಗೆ ಪ್ರವಾದಿಯವರೇ ತಾಕೀತು ಮಾಡಿದ್ದಾರೆ. ಸಂಪ್ಯ ಸಾದಾತ್ ನಗರದಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ತಂಙಳ್ ಈ ಭಾಗದ ಜನರ ಒಂದು ಸೌಭಾಗ್ಯವಾಗಿದೆ. ತಂಙಳ್ರವರೇ ನಮಗೆ ನೇತೃತ್ವವಾಗಿದ್ದಾರೆ, ಅವರ ನೇತೃತ್ವದಲ್ಲೇ ನಮ್ಮ ಎಲ್ಲಾ ಕಾರ್ಯಗಳು ನಡೆಯುತ್ತದೆ ಎಂದು ಸಂಪ್ಯ ಖತೀಬ್ ಅಬ್ದುಲ್ಹಮೀದ್ ದಾರಿಮಿ ಹೇಳಿದರು. ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು ಪ್ರವಾದಿಯವರ ಕುಟುಂಬ ಅಂತ್ಯದಿನದ ವರೆಗೂ ಈ ಭೂಮಿಯಲ್ಲಿ ವಾಸ್ತವ್ಯ ಇರಲಿದ್ದಾರೆ. ಅವರಿಗೆ ಅಪಾರ ಸ್ಥಾನವೂ ಇಸ್ಲಾಂ ಕಲ್ಪಿಸಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸಂಪ್ಯ ಮುಹಝ್ಝಿನ್ ಮುಸ್ತಫಾ ಫೈಝಿ, ಅಮ್ಮುಂಜೆ ರ್ಹಮಾನಿಯ ಮದ್ರಸ ಮುಅಲ್ಲಿಂ ಉಮರ್ ಮುಸ್ಲಿಯಾರ್, ಝಾಕಿರ್ ಹುಸೈನ್ ಬಪ್ಪಳಿಗೆ, ಮುಕ್ರಂಪಾಡಿ ಮಸೀದಿ ಮಾಜಿ ಅಧ್ಯಕ್ಷ ಶರೀಫ್ ಮುಕ್ರಂಪಾಡಿ, ಮುಕ್ವೆ ಉರೂಸ್ ಸಮಿತಿ ಅಧ್ಯಕ್ಷ ಇಸುಬು ಅಳಿಕೆ, ಕತಾರ್ ನವಾಝ್ ಕುಂಬ್ರ, ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ರಝಾಕ್ ಸಂಟ್ಯಾರ್, ಟಿಂಬರ್ ಮರ್ಚೆಂಟ್ ಅಝೀಜ್ ಹಾಜಿ ಮೊಟ್ಟಡತ್ತಡ್ಕ, ಉದ್ಯಮಿ ನಿಶಾದ್ ಕಲ್ಲರ್ಪೆ, ಸಂಪ್ಯ ಜುಮಾ ಮಸೀದಿ ಉಪಾಧ್ಯಕ್ಷ ಎಸ್ ಅಬೂಬಕ್ಕರ್, ಕಮ್ಮಾಡಿ ಪ್ಲೈವುಡ್ಸ್ಮ ರಝಾಕ್ ಕೆ ಎಂ ಕೆ, ಎಸ್ಕೆಎಸ್ಸೆಸೆಫ್ ಸಂಪ್ಯ ಶಾಖೆಯ ಅಧ್ಯಕ್ಷ ಹಬೀಬ್ ಕೆಂಪಿ, ಸಂಪ್ಯ ಜಮಾತ್ ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ, ಜಮಾತ್ ಕಮಿಟಿ ಉಪಾಧ್ಯಕ್ಷ ಹಮೀದಾಲೀಸ್, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಇಡಬೆಟ್ಟು, ಉರೂಸ್ ಪ್ರಚಾರ ಸಮಿತಿ ಉಸ್ತುವಾರಿ ಅಬೂಬಕ್ಕರ್ ಕಲ್ಲರ್ಪೆ, ಜಬ್ಬಾರ್ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.