ಪುತ್ತೂರು: ಧಾರ್ಮಿಕ ಧತ್ತಿ ಇಲಾಖೆಯ ಅಡಿಯಲ್ಲಿರುವ ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನವನ್ನು ಮೂಲ ವಂಶಸ್ಥರಿಗೆ ಬಿಟ್ಟುಕೊಡಬೇಕು ಮತ್ತು ದೈವಸ್ಥಾನದ ಜೀರ್ಣೋದ್ಧಾರ ಮಾಡಬೇಕೆಂದು ನೀಡಿದ ಮನವಿಗೆ ಸಹಾಯಕ ಕಮೀಷನರ್ ಸ್ಥಳ ತನಿಖೆ ಮಾಡಲು ಬರಲಿಲ್ಲ ಎಂದು ಜ.6ರಂದು ಸಂಜೆಯಿಂದ ಪುತ್ತೂರು ಗಾಂಧಿ ಕಟ್ಟೆ ಬಳಿ ಅಮರಣಾಂತ ಉಪವಾಸ ಮಾಡುತ್ತೇನೆಂದು ಕುಳಿತ ಅಯ್ಯಪ್ಪ ವೃತಧಾರಿ ಜ.7ರಂದು ಬೆಳಿಗ್ಗೆ ಮಿನಿ ವಿಧಾನ ಸೌಧಕ್ಕೆ ತೆರಳಿ ಅಲ್ಲಿ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ.
ಸುಳ್ಯ ಅಮರಮುಡ್ನೂರು ಗ್ರಾಮದ ಹಿಂದುಳಿದ ವರ್ಗಗಳ ಅನುಸೂಚಿತ ಜಾತಿಗಳ ಬುಡಕಟ್ಟು ಜನಾಂಗದ ಜಾಗೃತಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರೂ ಅಯ್ಯಪ್ಪ ವೃತಧಾರಿಯೂ ಆಗಿರುವ ಮಂಜುನಾಥ್ ಕುಕ್ಕುಜೆ ಎಂಬವರು ದೈವಸ್ಥಾನದ ಜಾಗದ ಸ್ಥಳ ತನಿಖೆಗೆ ಸಹಾಯಕ ಕಮೀಷನರ್ ಬರಬೇಕೆಂದು ಪಟ್ಟು ಹಿಡಿದು ಪುತ್ತೂರು ಗಾಂಧಿ ಕಟ್ಟೆಯಲ್ಲಿ ಅಮರಣಾಂತ ಉಪವಾಸ ಕೈಗೊಂಡಿದ್ದರು. ಆದರೆ ಅವರು ಜ.೭ರಂದು ಬೆಳಿಗ್ಗೆ ತನ್ನ ಧರಣಿಯನ್ನು ಮಿನಿ ವಿಧಾನ ಸೌಧಕ್ಕೆ ಶಿಫ್ಟ್ ಮಾಡಿದ್ದಾರೆ. ‘ನಾನು ರಾತ್ರಿ ಗಾಂಧಿ ಕಟ್ಟೆಯ ಬಳಿ ಅಮರಣಾಂತ ಉಪವಾಸ ಕೈಗೊಂಡಿದ್ದೆ. ಮಧ್ಯ ರಾತ್ರಿ ಪೊಲೀಸರು ಬಂದು ನನ್ನನ್ನು ಮಿನಿ ವಿಧಾನ ಸೌಧದಲ್ಲ ಕುಳಿತು ಕೊಳ್ಳಲು ಹೇಳಿದ್ದಾರೆ. ಅವರೇ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ ಎಂದು ಮಂಜುನಾಥ್ ಕುಕ್ಕುಜೆ ಅವರು ತಿಳಿಸಿದ್ದಾರೆ.