ತನ್ನೊಳಗಿನ ಅರಿವನ್ನು ಮೂಡಿಸುವುದು ಎನ್ಎಸ್ಎಸ್ – ಡಾ. ನಾಗರತ್ನ ಕೆ ಎ

0

ಪುತ್ತೂರು: ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ ತನ್ನೊಳಗಿನ ಅರಿವನ್ನು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆ. ಸ್ವಾಮಿ ವಿವೇಕಾನಂದರ ಆದರ್ಶವನ್ನು ಪಾಲಿಸಿದರೆ ನವ ಸಮಾಜದ ನಿರ್ಮಿಸಬಹುದು, ಅವರ ತತ್ತ್ವಾದರ್ಶಗಳಾದ ಹೊಸತನ, ಆಶಾವಾದ ಮತ್ತು ಸ್ವಾತಂತ್ರ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ನಾಗರತ್ನ ಕೆ ಎ ಇವರು ಹೇಳಿದರು. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ರಾಷ್ಟ್ರೀಯ ಯುವ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಸುದ್ದಿಬಿಡುಗಡೆ ಸಂಸ್ಥೆಯ ಸಂಸ್ಥಾಪಕರಾಗಿರುವ ಡಾ. ಯು ಪಿ ಶಿವಾನಂದ ಇವರು ಸಾಧನೆ, ಅನುಭವ ಮತ್ತು ಓದಿನ ಮೂಲಕ ಜ್ಞಾನವನ್ನು ವೃದ್ಧಿಸಬೇಕು. ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರಲ್ಲದೇ ಗುರಿಯನ್ನು ನಿರ್ಧರಿಸಿ ಅದನ್ನು ಭೇದಿಸುವ ಶಕ್ತಿಯನ್ನು ಗಳಿಸುವತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ವರದರಾಜ ಚಂದ್ರಗಿರಿ ಇವರು ಮಾತನಾಡಿ ಸ್ವಾತಂತ್ರ್ಯ ಸಾಧಿಸಲು ಯುವಕರನ್ನು ಪ್ರೇರೇಪಿಸಿದ ವಿವೇಕಾನಂದರ ತತ್ವವನ್ನು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ಎನ್ಎಸ್ಎಸ್ ಅಧಿಕಾರಿಗಳಾಗಿರುವ ಶ್ರೀ ಹರಿಪ್ರಸಾದ್ ಎಸ್ ಇವರು ವಿವೇಕಾನಂದರ ತತ್ವಾದರ್ಶಗಳನ್ನು ಒಳಗೊಂಡು ರೂಪಿತವಾದ ಎನ್ಎಸ್ಎಸ್ ವಿದ್ಯಾರ್ಥಿಗಳ ಸರ್ವತೋಮುಖ ವೃದ್ಧಿಗೆ ಬದ್ರ ಬುನಾದಿ ಎಂದು ಹೇಳಿದರಲ್ಲದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸ್ವಾಗತಿಸಿದರು.

ಕಾಲೇಜು ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಂಘದ ಸಂಚಾಲಕರಾದ  ದೀಕ್ಷಿತ್ ಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಉದಯರಾಜ್ ಎಸ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ  ದೇವರಾಜ್ ಆರ್, ಗ್ರಂಥಪಾಲಕರ ಶ್ರೀ ರಾಮ ಕೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶಶಿಕುಮಾರ ಮತ್ತು ಎನ್ನೆಸ್ಸೆಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ  ದಾಮೋದರ ಕಣಜಾಲು ವಂದಿಸಿದರು. ಎನ್ನೆಸ್ಸೆಸ್ ಘಟಕ ನಾಯಕ ಸಾರ್ಥಕ್ ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಪ್ರದರ್ಶನ ಸ್ವಯಂಸೇವಕರಿಂದ ನಡೆಯಿತು. ಸ್ವಯಂ ಸೇವಕರಾದ ಅನುಪಮ ಕೆ ಭರತನಾಟ್ಯ, ಅನನ್ಯ ಎಸ್ ಯಕ್ಷಗಾನ, ಲಿಖಿತಾ ಕೆ, ಶೈಲಜಾ ಎನ್, ಕೃತಿ ರೈ ಕೆ, ಕವಿತಾ, ಬಮಿತ ಮತ್ತು ಜಯಶ್ರೀ ಜಾನಪದ ಗೀತೆ, ಅಂಕಿತ್ ಕೆ ಆರ್, ರಕ್ಷಿತ್ ಕೆ, ರಂಜಿತ್, ಕೌಶಿಕ್, ವೆಂಕಟೇಶ್ ಮತ್ತು ಭವಿತ್ ಇವರುಗಳು ಚೆಂಡೆ ಪ್ರದರ್ಶನ ನೀಡಿದರು.

LEAVE A REPLY

Please enter your comment!
Please enter your name here