ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ 85ನೇ ವರ್ಷದ ಅರ್ಧ ಏಕಾಹ ಭಜನೆಯು ಜ.13ರ ಸೂರ್ಯೋದಯದಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಿತು. ಜ.03ರಂದು ನಗರ ಸಂಕೀರ್ತನೆ ಪ್ರಾರಂಭಗೊಂಡಿದ್ದು ಏಕಾಹ ಭಜನೆಯ ಪ್ರಯುಕ್ತ ಜ.13ರಂದು ಸಂಜೆ 6ಕ್ಕೆ ಉಲ್ಪೆ ಮೆರವಣಿಗೆ (ಹಣ್ಣು ಹಂಪಲು) ನಡೆದು ರಾತ್ರಿ 8ಕ್ಕೆ ಮಂಗಳಾಚರಣೆಯೊಂದಿಗೆ ಅರ್ಧ ಏಕಾಹ ಭಜನೆ ಮುಕ್ತಾಯಗೊಂಡಿತು.
ಬಲ್ನಾಡು ಅಮ್ಮನೆಡೆಗೆ ಭಜನಾ ಪಾದಯಾತ್ರೆ: ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ಜ.14ರಂದು ಸಂಜೆ ಭಜನೆಯೊಂದಿಗೆ ಮಂದಿರದಿಂದ ಭಕ್ತಾದಿಗಳ ಪಾದಯಾತ್ರೆಯು ಬಲ್ನಾಡು ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನದವರೆಗೆ ನಡೆಯಿತು. ಕಳೆದ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆಯುತ್ತಿದ್ದು ಮಕರ ಸಂಕ್ರಮಣದ ಶುಭದಿನದಂದು ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ಸದಸ್ಯರೂ ಸೇರಿದಂತೆ ಭಕ್ತಾದಿಗಳು ಮೆರವಣಿಗೆ ಮೂಲಕ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನಕ್ಕೆ ಭಜನೆ ಮೂಲಕ ತೆರಳಿ ಬಳಿಕ ಅಲ್ಲಿ ನಡೆಯುವ ತಂಬಿಲ ಸೇವೆಯಲ್ಲಿ ಪಾಲ್ಗೊಂಡು ನಂತರ ಮೂಲ ದೈವಸ್ಥಾನಕ್ಕೆ ತೆರಳಿ ಅಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಪುನಃ ದೈವಸ್ಥಾನಕ್ಕೆ ಬಂದು ಅಲ್ಲಿಂದ ಪುತ್ತೂರು ಮಂದಿರಕ್ಕೆ ಬಂದು ಮಂಗಳಾರತಿಯೊಂದಿಗೆ ಕೊನೆಗೊಂಡಿತು. ಈ ಸಂದರ್ಭದಲ್ಲಿ ಮಂದಿರದ ಅರ್ಚಕರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.