ಚೆನ್ನರಾಯಪಟ್ಟಣದಲ್ಲಿ ಅಪಘಾತಕ್ಕೆ ಬಲಿಯಾಗಿದ್ದ ಈಶ್ವರಮಂಗಲದ ದೇವಿಪ್ರಸಾದ್ ಶೆಟ್ಟಿ ಪತ್ನಿಗೆ ಗಂಡು ಮಗು ಜನನ

0

  • ತಾನೂ ಆರ್ಥಿಕ ನೆರವು ನೀಡಿದ್ದ ಆಂಬುಲೆನ್ಸ್‌ನಲ್ಲಿಯೇ ಮೃತದೇಹ ಸಾಗಾಟ
  • ಚೊಚ್ಚಲ ಹೆರಿಗೆಗೆ ದಾಖಲಾಗಿದ್ದ ಪತ್ನಿಯಿಂದ ಮೃತದೇಹಕ್ಕೆ ವಿದಾಯ
  • ಈಶ್ವರಮಂಗಲದಲ್ಲಿ ಸಾರ್ವಜನಿಕರಿಂದ ಮೃತದೇಹದ ಅಂತಿಮ ದರ್ಶನ
  • ಪರೋಪಕಾರಿಯ ಸಾವಿನಿಂದ ಪರಿಸರದಲ್ಲಿ ಸ್ಮಶಾನಮೌನ

ಪುತ್ತೂರು:ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಜ.14ರ ಬೆಳಿಗ್ಗೆ ಕಾರು ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಈಶ್ವರಮಂಗಲ ಬಂಟಕಲ್ಲು ದೇವಿಪ್ರಸಾದ್ ಶೆಟ್ಟಿ (33ವ.)ಅವರ ಪತ್ನಿ ಜ.15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟಿದ್ದ ದೇವಿಪ್ರಸಾದ್ ಶೆಟ್ಟಿಯವರ ಮೃತದೇಹವನ್ನು ಜ.14ರಂದು ರಾತ್ರಿಯೇ ಚನ್ನರಾಯಪಟ್ಟಣದಿಂದ ತಂದು, ಮೃತರ ಪತ್ನಿ ಅಕ್ಷತಾ ಅವರು ಹೆರಿಗೆಗಾಗಿ ದಾಖಲಾಗಿದ್ದ ಕೋಟೇಶ್ವರ ಆಸ್ಪತ್ರೆಗೆ ಕೊಂಡೊಯ್ದು ಅವರಿಗೆ ಮುಖದರ್ಶನ ಮಾಡಿಸಲಾಗಿತ್ತು.ಪತಿಯ ಅಕಾಲಿಕ ಸಾವಿನಿಂದಾಗಿ ದು:ಖದ ಮಡುವಿನಲ್ಲಿ ಮುಳುಗಿದ್ದ ಅಕ್ಷತಾ ಅವರು ಜ.15ರಂದು ಸಂಜೆ ವೇಳೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದೇವಿಪ್ರಸಾದ್ ಶೆಟ್ಟಿಯವರ ಮೃತದೇಹವನ್ನು ಕೋಟೇಶ್ವರದಿಂದ ಜ.15ರ ಬೆಳಿಗ್ಗೆ ಈಶ್ವರಮಂಗಲಕ್ಕೆ ತರಲಾಯಿತು.ಅಲ್ಲಿ ಅವರ ಸಂಬಂಧಿ ಕುಮಾರನಾಥ ಆಳ್ವ ಅವರ ಮನೆಯಲ್ಲಿ ಮೃತದೇಹಕ್ಕೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಗಿತ್ತು.ಬಳಿಕ ಚಿಕ್ಕಪುತ್ತೂರು ಹಿಂದೂರುದ್ರಭೂಮಿಗೆ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಈ ಮಧ್ಯೆ ಈಶ್ವರಮಂಗಲ ಪೇಟೆಯಲ್ಲಿ ಸಾರ್ವಜನಿಕರಿಗೆ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.ಹಿಂದೂ ಸಂಘಟನೆ ಕಾರ್ಯಕರ್ತರ ಸಹಿತ ನೂರಾರು ಮಂದಿ ಮೃತದೇಹದ ಅಂತಿಮ ದರ್ಶನ ಪಡೆದರು.

ಪರೋಪಕಾರಿಯಾಗಿದ್ದ ದೇವಿಪ್ರಸಾದ್ ಶೆಟ್ಟಿ: ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಕಳೆದ ಬಾರಿಯ ಕೋವಿಡ್ ಮಹಾಮಾರಿಯ ಸಂದರ್ಭ ಊರಿಗೆ ಬಂದು ಬಳಿಕ ಬೆಂಗಳೂರಿನಲ್ಲಿ ಇನ್ಫೋಸಿಸ್‌ನಲ್ಲಿ ಉದ್ಯೋಗದಲ್ಲಿದ್ದ ದೇವಿಪ್ರಸಾದ್ ಶೆಟ್ಟಿಯವರು ಪರೋಪಕಾರಿಯಾಗಿ ಗುರುತಿಸಿಕೊಂಡಿದ್ದರು.ಊರಲ್ಲಿ ಯಾರಿಗಾದರೂ ಅಸೌಖ್ಯವಿದ್ದು ಆರ್ಥಿಕ ಅಡಚಣೆ ಎದುರಾಗಿದ್ದ ಸಂದರ್ಭದಲ್ಲಿ ತನ್ನಿಂದಾದ ಸಹಾಯವನ್ನು ಮಾಡುತ್ತಿದ್ದರು.ಇತ್ತೀಚೆಗಷ್ಟೆ ಅಪಘಾತದಿಂದ ಗಾಯಗೊಂಡಿದ್ದ ಬಡಕುಟುಂಬದ ಯುವಕನೋರ್ವನ ಚಿಕಿತ್ಸೆಗೆಂದು ಆರ್ಥಿಕ ನೆರವು ನೀಡಿದ್ದ ದೇವಿಪ್ರಸಾದ್ ಮುಂದೆಯೂ ಅಗತ್ಯವಿದ್ದಾಗ ಸಾಧ್ಯವಾದರೆ ಕೊಡುವುದಾಗಿ ವಾಗ್ದಾನ ಮಾಡಿದ್ದರು.

ನೆರವು ನೀಡಿದ್ದ ಆಂಬುಲೆನ್ಸ್‌ನಲ್ಲೇ ಮೃತದೇಹ: ಅಶಕ್ತರ ನೆರವಿಗೆಂದು ಈಶ್ವರಮಂಗಲದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಂಬುಲೆನ್ಸ್ ಒಂದನ್ನು ಖರೀದಿ ಮಾಡಿದ್ದ ಸಂದರ್ಭ ದೇವಿಪ್ರಸಾದ್ ಶೆಟ್ಟಿಯವರೂ ಆರ್ಥಿಕ ಸಹಾಯ ಮಾಡಿದ್ದರು.ದುರಾದೃಷ್ಟವೆನ್ನುವಂತೆ ಅದೇ ಆಂಬುಲೆನ್ಸ್‌ನಲ್ಲಿಯೇ ಅವರ ಮೃತದೇಹವನ್ನು ಚೆನ್ನರಾಯಪಟ್ಟಣದಿಂದ ಕರೆತರಲಾಯಿತು.ಮೃತರ ಸಂಬಂಧಿಕರಲ್ಲದೆ, ಹಿಂದೂ ಸಂಘಟನೆಯ ಕೆಲ ಪ್ರಮುಖರು ಮೃತದೇಹವನ್ನು ತರಲು ಚೆನ್ನರಾಯಪಟ್ಟಣಕ್ಕೆ ಹೋಗಿದ್ದರು.ಒಟ್ಟಾರೆಯಾಗಿ ದೇವಿಪ್ರಸಾದ್ ಅವರು ಅಪಘಾತಕ್ಕೆ ಬಲಿಯಾಗಿರುವುದರಿಂದ ಪರಿಸರದಲ್ಲೀಗ ಸ್ಮಶಾನ ಮೌನ ಆವರಿಸಿದೆ.ಮೃತ ದೇವಿಪ್ರಸಾದ್ ಶೆಟ್ಟಿಯವರು ತಾಯಿ ಸುಮತಿ, ಪತ್ನಿ ಅಕ್ಷತಾ ಹಾಗೂ ನವಜಾತ ಗಂಡು ಮಗುವನ್ನು ಅಗಲಿದ್ದಾರೆ.
ಚೆನ್ನರಾಯಪಟ್ಟಣದಲ್ಲಿ ಮಾರುತಿ ಆಲ್ಟೋ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ, ಇನ್ಫೋಸಿಸ್ ಉದ್ಯೋಗಿಗಳಾಗಿದ್ದ ದೇವಿಪ್ರಸಾದ್ ಶೆಟ್ಟಿ ಹಾಗೂ ವಿಟ್ಲ ಬಾರೆಬೆಟ್ಟು ಸುದರ್ಶನ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.ಕಾರಿನ ಹಿಂಬದಿ ಸೀಟಲ್ಲಿದ್ದ ಸರ್ವೆ ಸೊರಕೆ ನಿವಾಸಿ ಪ್ರಮೋದ್ ಸುವರ್ಣ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ಎನ್ನುವುದನ್ನು ಗುರುತಿಸಲಾಗದ ರೀತಿಯಲ್ಲಿ ಅಪ್ಪಚ್ಚಿಯಾಗಿ ಹೋಗಿದೆ.

 

ಚೆನ್ನರಾಯಪಟ್ಟಣದಲ್ಲಿ ಭೀಕರ ಅಪಘಾತ : ಈಶ್ವರಮಂಗಲ, ವಿಟ್ಲದ ಈರ್ವರು ದಾರುಣ ಮೃತ್ಯು

LEAVE A REPLY

Please enter your comment!
Please enter your name here