- ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ದಾಳಿ-ಒತ್ತುವರಿ ತೆರವು
- ಜೆಸಿಬಿ, ಹಿಟಾಚಿ ಮುಟ್ಟುಗೋಲು
ಪುತ್ತೂರು; ಆರ್ಯಾಪು ಗ್ರಾಮದ ಮರಕ್ಕ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು, ಸೈಟ್ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿರುವುದನ್ನು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ಒತ್ತುವರಿ ತೆರವುಗೊಳಿಸಿದ್ದಾರೆ.
ಸಂಪ್ಯ-ವಳತ್ತಡ್ಕ ರಸ್ತೆಯ ಮರಕ್ಕ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅದನ್ನು ನಿವೇಶನಕ್ಕೆ ಸೈಟ್ ಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಸಹಾಯಕ ಆಯುಕ್ತರು ದಾಳಿ ನಡೆಸಿ, ಸೈಟ್ ಮಾಡಲು ಬಳಸುತ್ತಿದ್ದ ಒಂದು ಜೆಸಿಬಿ ಹಾಗೂ ಎರಡು ಟಿಪ್ಪರ್ ಗಳನ್ನು ಮುಟ್ಟುಗೋಲು ಹಾಕಿ, ಸಂಪ್ಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪುತ್ತೂರಿನಲ್ಲಿ ಪೊಲೀಸ್ ವಸತಿ ಗೃಹಕ್ಕೆ ನಿವೇಶನದ ಆವಶ್ಯಕತೆ ಇದ್ದು ಒತ್ತುವರಿ ತೆರವುಗೊಳಿಸಿರುವ ಭೂಮಿಯನ್ನು ಪೊಲೀಸ್ ವಸತಿ ಗೃಹ ನಿರ್ಮಾಣಕ್ಕೆ ನೀಡುವಂತೆ ಪ್ರಸ್ತಾವಣೆ ಸಲ್ಲಿಸಲಾಗುವುದು ಎಂದು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಕಂದಾಯ ನಿರೀಕ್ಷಕ ಮಹೇಶ್, ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ, ಗ್ರಾಮ ಸಹಾಯಕ ಉಮೇಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು. ಸಂಪ್ಯ ಠಾಣಾ ಎಸೈ ಉದಯ ರವಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.