ಕೆಯ್ಯೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿದ ಬಳಿಕ ಸಂಸ್ಥೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರ ಭಾಗವಾಗಿ ಈಗ 200 ಮೀ ಟ್ರ್ಯಾಕ್ ಇರುವ ಆಟದ ಮೈದಾನವನ್ನು 400 ಮೀ ಟ್ರ್ಯಾಕ್ ಇರುವ ಮೈದಾನವಾಗಿ ಬದಲಿಸಲು ವಿಸ್ತರಣೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಊರಿನ ಶಿಕ್ಷಣಾಭಿಮಾನಿಗಳು ನೀಡಿದ ಮಣ್ಣನ್ನು ತಂದು ಮೈದಾನದ ಬದಿಗಳಲ್ಲಿ ಹರಡಿ ಮೈದಾನ ವಿಸ್ತರಣೆ ಮಾಡುವ ಕಾಮಗಾರಿಯು ಪ್ರಾಂಶುಪಾಲ ಆನಂದ ಪಿ ಮತ್ತು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳ ಮುಂದಾಳತ್ವದಲ್ಲಿ ಚಾಲನೆಗೊಂಡಿದೆ. ಊರ ಮಹನೀಯರು, ಶಿಕ್ಷಣಾಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳು ತಮ್ಮ ಜಮೀನನ್ನು ಸಮತಟ್ಟುಗೊಳಿಸುವ ಸಂದರ್ಭದಲ್ಲಿ ಹೆಚ್ಚುವರಿ ಮಣ್ಣು ಇದ್ದರೆ ಶಾಲಾ ಮೈದಾನದ ವಿಸ್ತರಣೆಗಾಗಿ ಉದಾರವಾಗಿ ದಾನ ಮಾಡಿದರೆ ಕೃತಜ್ಞತಾ ಪೂರ್ವಕ ಸ್ವೀಕರಿಸಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿರುತ್ತಾರೆ. ಈಗಾಗಲೇ ಶಾಲೆಗೆ ಸೇರಿದ ಹದಿನಾಲ್ಕು ಎಕರೆ ಜಮೀನಿನ ಗಡಿಗಳನ್ನು ಗುರುತಿಸಿ ಭದ್ರಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರಕಾರದ ಅನುದಾನ ಬಂದಂತೆ ಸುಸಜ್ಜಿತ ಕಟ್ಟಡ ಸಮುಚ್ಚಯವಿರುವ ಭವ್ಯ ಸಂಸ್ಥೆಯಾಗಿ ಕೆಪಿಎಸ್ ಕೆಯ್ಯೂರು ಬದಲಾಗಲಿದೆ ಎಂದು ಪ್ರಾಂಶುಪಾಲರು ಅಭಿಪ್ರಾಯಪಟ್ಟಿದ್ದಾರೆ.