- ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ ಸಲ್ಲಿಕೆ
- ಮುಷ್ಕರ ನಿಲ್ಲಿಸಿ ಕೆಲಸ ಆರಂಭಿಸಿದ ಸಿಬ್ಬಂದಿಗಳು
ವಿಟ್ಲ: ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ರಾಜೇಶ್ ರವರ ಮೇಲೆ ಲಂಚ ಕೇಳಿದ ಆರೋಪ ಹೊರಿಸಿ ಮೇಲಾಧಿಕಾರಿಗಳಿಗೆ ದೂರು ಕೊಡಿಸಿದ್ದರಿಂದ ಮನನೊಂದ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ರವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನ ಮಾಡಿಕೊಂಡಿದ್ದರು. ಸಿಬ್ಬಂದಿಗೆ ಕಿರುಕುಳ ನೀಡಿರುವ ಘಟನೆಯನ್ನು ಖಂಡಿಸಿ ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದು, ಇದೀಗ ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿಯವರಿಗೆ ಮನವಿ ಸಲ್ಲಿಸಿ ಕೆಲಸ ಆರಂಭಿಸಿದ್ದಾರೆ.
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ರಾಜೇಶ್ ರವರ ಮೇಲೆ ಲಂಚ ಕೇಳಿದ ಆರೋಪ ಹೊರಿಸಿ ಮೇಲಾಧಿಕಾರಿಗಳಿಗೆ ದೂರು ಕೊಡಿಸಿದ್ದರೆನ್ನಲಾಗಿದೆ.
ಜ.೨೦ರಂದು ಬೆಳಿಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು, ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು, ಇದರಿಂದ ಮಾನಸಿಕವಾಗಿ ಮನನೊಂದಿರುತ್ತೇನೆ. ಆದುರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೇಶ ಕಳುಹಿಸಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರೆನ್ನಲಾಗಿದೆ. ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ರಾಜೇಶ್ ಗಾಗಿ ಹುಟುಕಾಟ ಪ್ರಾರಂಭಿಸಿದ್ದು, ಆ ವೇಳೆ ಅವರು ನೇತ್ರಾವತಿ ಸೇತುವೆ ಸಮೀಪ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಂಚದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಮಗೆ ಕೂಡ ಕಿರುಕುಳ ನೀಡುತ್ತಿದ್ದು, ಕೆಲಸ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಆತನ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು. ಮುಖ್ಯಾಧಿಕಾರಿಗೆ ಸಿಬ್ಬಂದಿಗಳು ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಸಿಬ್ಬಂದಿಗಳು ನೀಡಿದ ಮನವಿಯಲ್ಲೇನಿದೆ…?
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ವಾಲ್ಟ್ ಮೆನ್ ಆಗಿ ರಾಜೇಶ್ ಸಿವಿ. ಎಂಬವರು ಗುತ್ತಿಗೆ ಆಧಾರದಲ್ಲಿ ಮೇ 2021 ನೇ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 18.01,2022 ರಂದು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸೀಗೆಬಲ್ಲೆ ಭಾಸ್ಕರ ಎಂಬವರು ಸದ್ರಿ ಸಿಬ್ಬಂದಿ ವಸತಿ ಯೋಜನೆಯಲ್ಲಿ ಹಣ ಬಿಡುಗಡೆಗೊಳಿಸಲು ರೂ. 25000/- ಲಂಚ ಕೇಳಿರುತ್ತಾನೆಂದು ನಮ್ಮ ಕಛೇರಿಗೆ ದೂರು ನೀಡಿದ್ದಲ್ಲದೆ, ಈ ಬಗ್ಗೆ ಕೆಲವೊಂದು ಪತ್ರಿಕೆ ಹಾಗೂ ವೆಬ್ಸೈಟ್ ಗಳಲ್ಲಿ ವರದಿ ಪ್ರಸಾರ ಮಾಡಿ ಸದ್ರಿ ನೌಕರನಿಗೆ ಮಾನಸಿಕ ಕಿರುಕುಳ ನೀಡಿದ್ದು, ಈ ಬಗ್ಗೆ ರಾಜೇಶ್ C.V. ರವರನ್ನು ವಿಚಾರಿಸಿದಾಗ ಲಂಚ ತೆಗೆದುಕೊಂಡಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿದ್ದು, ಇದು ಮಾಜಿ ಸದಸ್ಯರಾದ ಶ್ರೀಕೃಷ್ಣ ವಿಟ್ಲ ರವರ ಕುಮ್ಮಕ್ಕಿನಿಂದ ಭಾಸ್ಕರ ಸಿಗಬಲ್ಲೆ ಇವರು ಹೇಳಿರುತ್ತಾರೆ ಹಾಗೂ ದಿನಾಂಕ 17.01.2022 ರಂದು ಸದ್ರಿ ಸಿಬ್ಬಂದಿ ರಾಜೇಶ್ C.V. ಹಾಗೂ ಮಾಜಿ ಸದಸ್ಯರಿಗೆ ಪಟ್ಟಣ ಪಂಚಾಯತ್ ಕಛೇರಿಯಲ್ಲಿ ಗಲಾಟೆಯಾಗಿರುತ್ತದೆ. ಈ ದಿನ ಪೂರ್ವಾಹ್ನ ರಾಜೇಶ್ C.V. ‘ರವರು ಆತ್ಮಹತ್ಯೆಗೆ ಪ್ರಯತ್ನಿಸಿರುತ್ತಾರೆ. ಆದುದರಿಂದ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಭಾಸ್ಕರ ಸೀಗೆಬಲ್ಲೆ ಹಾಗೂ ಮಾಜಿ ಸದಸ್ಯರಾದ ಶ್ರೀಕೃಷ್ಣ ರವರ ವಿರುದ್ಧ ವಿಚಾರಣೆ ನಡೆಸಿ ನಮ್ಮ ಸಹ ಸಿಬ್ಬಂದಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ತಮ್ಮಲ್ಲಿ ನಿವೇದಿಸಿಕೊಳ್ಳುತ್ತೇವೆ ಎಂದು ಸಿಬ್ಬಂದಿಗಳು ನೀಡಿದ ಮನವಿಯಲ್ಲಿ ವಿವರಿಸಿದ್ದಾರೆ.