ವಿಟ್ಲ: ನನ್ನ ಮಗನೊಂದಿಗಿರುವ ಹಳೇ ದ್ವೇಷದ ಹಿನ್ನೆಲೆ ನಮ್ಮ ಮನೆಗೆ ನುಗ್ಗಿದ ತಂಡವೊಂದು ನನ್ನ ಮೈಗೆ ಕೈಹಾಕಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದೆ ಎಂದು ಆರೋಪಿಸಿ ಮಹಿಳೆಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆ ನಿವಾಸಿ ಬಾಪಕುಂಞಿರವರ ಪತ್ನಿ ಮರಿಯಮ್ಮ ದೂರುದಾರರಾಗಿದ್ದು, ಶಮೀರ್, ಇಸಾಕ್, ಹಕೀಂ ಕೂರ್ನಡ್ಕ ಸಹಿತ ನಾಲ್ವರು ಪ್ರಕರಣದ ಆರೋಪಿಗಳಾಗಿದ್ದಾರೆ.
ಜ.19ರಂದು ನಾನು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆಯ ಮೈಕೆಯ ನಮ್ಮ ಮನೆಯಲ್ಲಿದ್ದ ವೇಳೆ ಕಾರಿನಲ್ಲಿ ಬಂದ ಶಮೀರ್, ಇಸಾಕ್, ಹಕೀಂ ಕೂರ್ನಡ್ಕ ಮತ್ತು ಪರಿಚಯವಿಲ್ಲದ ಇನ್ನೊಬ್ಬ ನಮ್ಮ ಮನೆಯ ಹಿಂಬಾಗಿಲಿನಿಂದ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ನನ್ನ ಮೈಗೆ ಕೈ ಹಾಕಿ, ದೊಣ್ಣೆಯಿಂದ ಹಲ್ಲೆ ಮಾಡಿ, ನನ್ನನ್ನು ದೂಡಿ ಹಾಕಿದ್ದಲ್ಲದೆ ನಮ್ಮ ವಿಚಾರಕ್ಕೆ ಬಂದರೆ ನಿಮ್ಮನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಘಟನೆಗೆ ನನ್ನ ಮಗ ಹಕೀಂ ಹಾಗೂ ಶಮೀರ್ ಎಂಬಾಯನ ಮಧ್ಯೆ ಇರುವ ಪೂರ್ವ ದ್ವೇಷವೇ ಕಾರಣವೆಂದು ಮರಿಯಮ್ಮರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.