- ಜ. 26 ಕಾರ್ಯಕ್ರಮ ಯಶಸ್ವಿಗೊಳಿಸಲು ಜನರಿಗೆ ಕರೆ
ಪುತ್ತೂರು: ಜ.26ರಂದು ಪುತ್ತೂರು, ಸುಳ್ಯದಲ್ಲಿ ಮತ್ತು ದ.ಕ. ಜಿಲ್ಲೆಯಲ್ಲಿ ಸುದ್ದಿಯ ಮಾರ್ಗದರ್ಶನದಲ್ಲಿ ನಡೆಯಲಿರುವ `ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ` ಜನಾಂದೋಲನ ಕಾರ್ಯಕ್ರಮಕ್ಕೆ ದ.ಕ. ಜಿಲ್ಳಾ ಉಸ್ತುವಾರಿ ಸಚಿವ ಎಸ್.ಅಂಗಾರ ಬೆಂಬಲ ನೀಡಿದ್ದಾರೆ.
ಲಂಚ ಭ್ರಷ್ಟಾಚಾರವು ದೇಶದ ಅಭಿವೃದ್ಧಿಗೆ ಮಾರಕವಾದ ವ್ಯವಸ್ಥೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡು ಲಂಚ ಭ್ರಷ್ಟಾಚಾರದಿಂದ ಮುಕ್ತರಾದರೆ ನಮ್ಮ ಆಡಳಿತ ವ್ಯವಸ್ಥೆಯ ಮೇಲೆ ವಿಶ್ವಾಸ ಬರಲು ಸಾಧ್ಯವಾಗುತ್ತದೆ. ಆ ದೃಷ್ಠಿಯಿಂದ ಈ ಜನಾಂದೋಲನ ಮಹತ್ವ ಪೂರ್ಣವಾದದು. ನಮ್ಮ ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಮತ್ತು ತಾಲೂಕು, ಜಿಲ್ಲೆಯಲ್ಲಿ ಈ ಆಂದೋಲನ ಏರ್ಪಡಿಸುತ್ತಿರುವುದು ಒಳ್ಳೆಯ ವಿಚಾರ. ಈ ಕಾರ್ಯ ಈ ಹಿಂದೆಯೇ ಮಾಡಬೇಕಾಗಿತ್ತು`’ ಎಂದು ಸುಳ್ಯ ಶಾಸಕರೂ ಆಗಿರುವ ಸಚಿವ ಅಂಗಾರರು ಹೇಳಿದ್ದಾರೆ.
ಮಂಗಳೂರಿನಲ್ಲಿ ಸಚಿವರಿಂದ ಚಾಲನೆ : ದ.ಕ. ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಜ.26ರಂದು ಪೂರ್ವಾಹ್ನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರವರು “ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ – ಉತ್ತಮ ಸೇವೆಗೆ ಪುರಸ್ಕಾರ” ಸುದ್ದಿ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಲಂಚ ಭ್ರಷ್ಟಾಚಾರ ದಹನಕ್ಕೆ ನಾಂದಿ ಹಾಡಲಿದ್ದಾರೆ.