- ಲಂಚ, ಭ್ರಷ್ಟಾಚಾರ ಮುಕ್ತ ಊರು,ತಾಲೂಕು, ಜಿಲ್ಲೆ ನಮ್ಮದಾಗಲಿ
- ಸುದ್ದಿ ಬಿಡುಗಡೆಯ ಪ್ರಯತ್ನ ಶ್ಲಾಘನೀಯ
ಪುತ್ತೂರು: ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎನ್ನುವ ವಿನೂತನ ಪರಿಕಲ್ಪನೆಯೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇ ಶದಿಂದ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ್ ಹೇಳಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಉಂಟಾದಾಗ ಮಾತ್ರ ಅದು ನಿರ್ಮೂಲನೆಯಾಗುತ್ತದೆ. ಲಂಚ ಪಡೆದುಕೊಳ್ಳುವುದು ಎಷ್ಟು ಅಪರಾಧವೋ, ಲಂಚ ನೀಡುವುದು ಕೂಡ ಅಪರಾಧವೇ. ಭ್ರಷ್ಟಾಚಾರ ನಿರ್ಮೂಲನೆಯಾಗಲು ಮೊದಲು ಜನರಿಗೆ ಉತ್ತಮ ಸೇವೆ ಪಡೆಯುವುದು ನಮ್ಮ ಹಕ್ಕು. ಯಾವ ಕಚೇರಿಯಲ್ಲೂ ಲಂಚ ಕೊಡುವ ಅವಶ್ಯಕತೆ ಇಲ್ಲ ಎನ್ನುವ ಮನೋಭಾವನೆ ಬರಬೇಕು. ಸರ್ಕಾರಿ ಸೇವೆಯಲ್ಲಿರುವವರಿಗೆ ಸರ್ಕಾರಿ ಸಂಬಳ ದೊರೆಯುತ್ತದೆ. ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಬಳಸಿಕೊಂಡು ಸೇವೆ ಪಡೆಯಲು ಯಾರೂ ಮುಂದೆ ಬರಬಾರದು. ಎಲ್ಲಾ ಇಲಾಖೆಗಳಲ್ಲೂ ಹೊಸತನದ ಬದಲಾವಣೆ ಆಗಬೇಕು. ಕಚೇರಿಯ ಜೊತೆಗೆ ಜನರಲ್ಲೂ ಬದಲಾವಣೆ ಆಗಬೇಕು. ಇಂತಹ ಪ್ರಯತ್ನ ಮಾಡುತ್ತಿರುವ ಸುದ್ದಿ ಬಿಡುಗಡೆಯ ಪ್ರಯತ್ನ ಶ್ಲಾಘನೀಯ. ಈ ವಿಶೇಷ ಆಂದೋಲನ ಬೇರೆ ತಾಲೂಕು, ಜಿಲ್ಲೆಗಳಿಗೂ ಮಾದರಿಯಾಗಲಿ ಎಂದು ಡಾ| ಕುಮಾರ್ ಆಶಿಸಿದ್ದಾರೆ.