ಪುತ್ತೂರು: ಕೆಯುಐಡಿಎಫ್ಸಿಯ ಮೂಲಕ ನಡೆಯುವ ಜಲಸಿರಿ 24/7 ನೀರು ಕುಡಿಯುವ ನೀರು ಸರಬರಾಜು ಯೋಜನೆಗೆ ಸಂಬಂಧಿಸಿ ಪೈಪ್ ಅಳವಡಿಕೆ ವೇಳೆ ನಗರಭೆ ಹಲವು ವಾರ್ಡ್ಗಳಲ್ಲಿ ಡಾಮರು ಮತ್ತು ಇಂಟರ್ಲಾಕ್ ರಸ್ತೆಗಳು ಕೆಟ್ಟು ಹೋಗಿದೆ. ಕೆಟ್ಟು ಹೋದ ರಸ್ತೆಯನ್ನು ತಕ್ಷಣ ದುರಸ್ಥಿಗೊಳಿಸುವಂತೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಜಲಸಿರಿ ಯೋಜನಾ ಇಂಜಿನಿಯರ್ಗಳಿಗೆ ಸೂಚನೆ ನೀಡಿದ್ದಾರೆ.
ಜ.೨೪ರಂದು ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿ ಈ ಹಿಂದೆ ಇರುವ ನಳ್ಳಿ ನೀರಿನ ಸಂಪರ್ಕ ಇರುವ ಮನೆಗಳಿಗೆ ಸಮಗ್ರವಾಗಿ ಜಲಸಿರಿಯ ಸಂಪರ್ಕ ಅನುಷ್ಠಾನಗೊಳಿಸಬೇಕು. ನಳ್ಳಿ ನೀರಿನ ಸಂಪರ್ಕ ಹೊಂದಿದ ಮನೆಗಳಿಗೆ ಸರಿಯಾಗಿ ನೀರು ಸರಬರಾಜು ಆಗುತ್ತಿದೆಯೇ ಎಂದು ನೋಡಬೇಕು. ಜೊತೆಗೆ ಪೈಪ್ ಅಳವಡಿಕೆ ವೇಳೆ ಅಲ್ಲಲ್ಲಿ ಕೆಟ್ಟು ಹೋದ ರಸ್ತೆಗಳು ಮತ್ತು ಇಂಟರ್ಲಾಕ್ ಹೋದಲ್ಲಿ ಅದನ್ನು ಮರು ಜೋಡಿಸಬೇಕು ಎಂದು ಸೂಚಿಸಿದ್ದಾರೆ. ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಇಂಜಿನಿಯರ್ ನರೇಶ್ ಶೆಣೈ, ಜಲಸಿರಿ ಯೋಜನೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾದೇಶ್ ಮತ್ತು ಇತರರು ಉಪಸ್ಥಿತಿದ್ದರು.