ಪುತ್ತೂರು: ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಭಾಗವಹಿಸಲು ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಪುತ್ತೂರು ಬಿಲ್ಲವ ಸಂಘದ ನೇತೃತ್ವದಲ್ಲಿ ಜ.26ರಂದು ದರ್ಬೆ ವೃತ್ತದಿಂದ ಬಪ್ಪಳಿಗೆ ಗುರುಮಂದಿರ ತನಕ ಸ್ತಬ್ಧ ಚಿತ್ರದೊಂದಿಗೆ ಮೆರವಣಿಗೆ ನಡೆಯಿತು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ ಮಾತನಾಡಿ, ನಾರಾಯಣ ಗುರುಗಳು ನೀಡಿದ ಸಂದೇಶ ಸಮಾಜಕ್ಕೆ ಉನ್ನತವಾದುದು. ಆದರೆ ಇವರ ಸಂದೇಶವನ್ನು ಅರಿಯದ ಕೇಂದ್ರದ ಒಂದು ತಂಡ, ಕೇರಳ ಸರಕಾರ ನೀಡಿದ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ನಿರಾಕರಿಸಿದೆ. ಆದ್ದರಿಂದ ನಾರಾಯಣ ಗುರುಗಳ ಸಂದೇಶವನ್ನು ಮತ್ತೊಮ್ಮೆ ಸಮಾಜಕ್ಕೆ ತಿಳಿಯಪಡಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಸಮಾಜದ ಎಲ್ಲಾ ಬಾಂಧವರನ್ನು ಸೇರಿಸಿಕೊಂಡು ನಾರಾಯಣ ಗುರುಗಳ ಸಂದೇಶ ಸಾರುವ ಯಾತ್ರೆಯನ್ನು ದರ್ಬೆಯಿಂದ ಪುತ್ತೂರಿನ ನಾರಾಯಣ ಗುರು ಮಂದಿರದವರೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಹಿಂದೂ ಬಾಂಧವರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ, ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ನರಿಮೊಗರು ಸಾಂದಿಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು, ಸುದಾನ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್, ನ್ಯಾಯವಾದಿ ಚಿದಾನಂದ ಬೈಲಾಡಿ, ಸಂತ ಫಿಲೋಮಿನಾ ಕಾಲೇಜಿನ ಆಶೋಕ್ ರಾಯನ್ ಕ್ರಾಸ್ತಾ, ವೈದ್ಯ ಡಾ.ರಘು ಬೆಳ್ಳಿಪ್ಪಾಡಿಯವರು ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದರ್ಬೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಬಪ್ಪಳಿಗೆಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರುಮಂದಿರದವರೆಗೆ ನಾರಾಯಣ ಗುರುಗಳ ಸ್ತಬ್ಧಚಿತ್ರ, ಚೆಂಡೆ, ಭಜನಾ ತಂಡದೊಂದಿಗೆ ಮೆರವಣಿಗೆ ಸಾಗಿತು.
ಗುರು ಮಂದಿರದಲ್ಲಿ ಮಹಿಳೆಯರು ಪುಷ್ಪಾರ್ಚನೆ ಮಾಡುವ ಮೂಲಕ ಸ್ತಬ್ಧ ಚಿತ್ರವನ್ನು ಅಭೂತಪೂರ್ವವಾಗಿ ಸ್ವಾಗತಿಸಿದರು. ಬಳಿಕ ಮಂಗಳೂರಿನ ಕುದ್ರೋಳಿಯಲ್ಲಿ ನಡೆಯಲಿರುವ ಬೃಹತದ ಮೆರವಣಿಗೆಯಲ್ಲಿ ಭಾಗಿಯಾಗಲು ಪುತ್ತೂರಿನಿಂದ ನೂರಾರು ಮಂದಿ ತೆರಳಿದರು.
ಕಾರ್ಯಕ್ರಮದಲ್ಲಿ ಡಾ.ಸದಾನಂದ ಕುಂದಾರ್, ಮಾಜಿ ಅಧ್ಯಕ್ಷರುಗಳಾದ ಜಯಂತ್ ನಡುಬೈಲು, ವಿಜಯ ಕುಮಾರ್ ಸೊರಕೆ, ಬಾಳಪ್ಪ ಪೂಜಾರಿ ಕೇಪುಳು, ಕೆ ಪಿ ದಿವಾಕರ್, ಬ್ರಹ್ಮ ಶ್ರೀ ನಾರಾಯಣ ಗುರುಮಂದಿರ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಗುರುಮಂದಿರದ ನಿಕಟಪೂರ್ವ ಕಾರ್ಯನಿರ್ವಹಣಾಧಿಕಾರಿ ಆರ್ ಸಿ ನಾರಾಯಣ್, ಕೋಶಾಧಿಕಾರಿ ಬಿ ಟಿ ಮಹೇಶ್ಚಂದ್ರ ಸಾಲ್ಯಾನ್, ಜೊತೆ ಕಾರ್ಯದರ್ಶಿ ಚಿದಾನಂದ ಸುವರ್ಣ, ಸೇಸಪ್ಪ ಬಂಗೇರ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಶಶಿಧರ್ ಕಿನ್ನಿಮಜಲು, ಉಲ್ಲಾಸ್ ಕೋಟ್ಯಾನ್, ವೇದನಾಥ್ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಬಿ ಚಂದ್ರಕಲಾ ಮುಕ್ವೆ, ಮಾಜಿ ಆಧ್ಯಕ್ಷೆ ಉಷಾಅಂಚನ್ ಹಾಗೂ ಪದಾಧಿಕಾರಿಗಳು, ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ಅನುಪ್, ಯುವವಾಹಿನಿ ಕಡಬ-ಉಪ್ಪಿನಂಗಡಿ-ವಿಟ್ಲ ಘಟಕದ ಅಧ್ಯಕ್ಷರುಗಳು , ಸಮಿತಿಯ ಸದಸ್ಯರುಗಳಾದ ಅಣ್ಣಿ ಪೂಜಾರಿ ಭೀರ್ನಹಿತ್ಲು, ಸದಾನಂದ ಕುಮಾರ್ ಮದ್ಯೊಟ್ಟು, ಮಾಧವ ಸಾಲ್ಯಾನ್, ಉದಯ ಕೋಲಾಡಿ, ಅವಿನಾಶ್ ಹಾರಾಡಿ ಸೇರಿದಂತೆ 51 ಗ್ರಾಮ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ವಲಯ ಸಂಚಾಲಕರು, ನಗರ ಸಮಿತಿ ಸದಸ್ಯರು, ಮಹಿಳಾ ಸಮಿತಿ ಮತ್ತು ಯುವವಾಹಿನಿಯ ಮಾಜಿ, ಹಾಲಿ ಅಧ್ಯಕ್ಷರು, ನಿರ್ದೇಶಕರು, ಪದಾಧಿಕಾರಿಗಳು, ಹಿರಿಯ ಮುಖಂಡರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ನಾಗೇಶ್ ಬಲ್ನಾಡು ವಂದಿಸಿದರು.