ಪುತ್ತೂರು: ಉದ್ಯೋಗ ಮತ್ತು ನೈಪುಣ್ಯಕ್ಕೆ ಸಂಬಂಧಿಸಿ ಹಲವು ಯೋಜನೆ ಇದೆ. ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಅವರು ಹೇಳಿದರು.
ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ತಾಲೂಕು ಪಂಚಾಯತ್ ಪುತ್ತೂರು, ಆರ್ಯಾಪು ತಾಲೂಕು ಯುವಜನ ಒಕ್ಕೂಟ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲ ಇದರ ಸಂಯುಕ್ತ ಆಶ್ರಯದಲ್ಲಿ ಫೆ.೧ ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಯುವಜನತೆಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ನೂರು ಜನರಲ್ಲಿ ಒಬ್ಬರಿಗೆ, ಇಬ್ಬರಿಗೆ ಸರಕಾರಿ ಉದ್ಯೋಗ ಸಿಗಬಹುದು ಹೊರತು ಶೇ.೯೯ ಮಂದಿ ಕೌಶಲ್ಯಾಭಿವೃದ್ದಿಯನ್ನು ಹೊಂದಬೇಕಾಗುತ್ತದೆ. ಇದನ್ನು ಅಭಿವೃದ್ದಿ ಪಡಿಸಲು ಸರಕಾರ ಬೇರೆ ಬೇರೆ ಯೋಜನೆ ತಂದಿದೆ. ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಮುಂದಿನ ಗುರಿಯನ್ನು ನಿರ್ಧಾರ ಮಾಡಿಕೊಳ್ಳಿ. ನಿಜವಾದ ಪ್ರಪಂಚ ಅರಿಯಲು ಇಂತಹ ಕಾರ್ಯಕ್ರಮ ಅಗತ್ಯ ಎಂದರು.
ಸಾವಿರಾರು ಅವಕಾಶವಿದೆ:
ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ಸರಕಾರದಿಂದ ಕೌಶಲ್ಯ ಯೋಜನೆ ತುಂಬಾ ಇದೆ. ಇಲ್ಲಿ ಎಲ್ಲವೂ ಉಚಿತವಾಗಿರುತ್ತದೆ. ಇಂತಹ ಸಾವಿರಾರು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಜನತೆಯ ಮುಂದಿನ ನಿರ್ಧಾರಗಳಿಗೆ ತಕ್ಕಂತೆ ಭಾರತ ಸರಕಾರದ ಅಡಿಯಲ್ಲಿ ಬರುವ ಯೋಜನೆ ಮತ್ತು ಅವಕಾಶಗಳನ್ನು ತಿಳಿಸು ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಅಕ್ಷತಾ ಎ.ಪಿ ಅಧ್ಯಕ್ಷತೆ ವಹಿಸಿದ್ದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕಿ ಗೀತಾ ವಿಜಯ್, ನ್ಯಾಯವಾದಿ ತೇಜಸ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ತಾಲೂಕು ಯುವಜನ ಒಕ್ಕೂಟ ಅಧ್ಯಕ್ಷ ದಿನೇಶ್ ಸಾಲ್ಯಾನ್, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಕಾರ್ಪಾಡಿ ಶ್ರೀ ಸುಬ್ರಹ್ಮಣೈಶ್ವರ ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ದೇವಸ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರ ಮಂಗಳೂರು ಇದರ ತಾಲೂಕು ಸಂಯೋಜಕ ಗೌತಮ್ ರಾಜ್ ಕರಂಬಾರು ಅತಿಥಿಗಳನ್ನು ಗೌರವಿಸಿದರು. ಯಶ್ವಿನಿ ಪ್ರಾರ್ಥಿಸಿದರು. ನೆಹರು ಯುವ ಕೇಂದ್ರದ ಸಂಯೋಜಕಿ ಪ್ರಜ್ಞ ಕುಲಾಲ್ ಕಾವು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸಂದೀಪ್ ಆರ್ಯಾಪು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.