ಪುತ್ತೂರು: ಭಾರತೀಯ ವೈವಿಧ್ಯಮಯ ಕಲೆಗಳನ್ನು ಕಲಾಪ್ರಿಯರಿಗೆ ಉಣಬಡಿಸುವ ನಿಟ್ಟಿನಲ್ಲಿ ಕಳೆದ ೧೭ ವರ್ಷಗಳಿಂದ ಪ್ರಸಿದ್ಧ ಅಂತರ್ರಾಷ್ಟ್ರೀಯ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನಗಳನ್ನು ಸಾರ್ವಜನಿಕರಿಗೆ ತಲುಪುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕಲಾ ಸೇವೆ ಮಾಡುತ್ತಿರುವ ಪರ್ಲಡ್ಕ ಎಸ್ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್ ಇದರ ಆಶ್ರಯದಲ್ಲಿ ಫೆ. ೫ ರಿಂದ ಮಾ.೭ ರ ತನಕ ೩ ದಿನಗಳ ಕಲೋಪಾಸನಾ ಸಾಂಸ್ಕೃತಿಕ ಕಲಾ ಸಂಭ್ರಮ ರಿಸರ್ಚ್ ಸೆಂಟರ್ನ ಆವರಣದಲ್ಲಿ ಜರಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ಹರಿಕೃಷ್ಣ ಪಾಣಾಜೆ ಅವರು ಈ ಭಾರಿ ಮೊದಲ ದಿನ ಖ್ಯಾತ ಚೆನ್ನೈ ಮೂಲದ ಸಂಗೀತ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಉಳಿದೆರಡು ದಿನ ಬಡಗು ತಿಟ್ಟಿನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಫೆ.೫ರಂದು ಸಂಜೆ ಗಂಟೆ ೬ಕ್ಕೆ ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಎ.ಪಿ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಳಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಆರಂಭಗೊಳ್ಳಲಿದೆ. ಹಾಡುಗಾರಿಕೆಯಲ್ಲಿ ಚೆನ್ನೈಯ ವಿದ್ವಾನ್ ಸಂದೀಪ್ ನಾರಾಯಣ್, ವಯಲಿನ್ನಲ್ಲಿ ಚೆನ್ನೈಯ ವಿದ್ವಾನ್ ಎಚ್.ಎನ್.ಭಾಸ್ಕರ್ ಶೆಟ್ಟಿ, ಮೃದಂಗದಲ್ಲಿ ವಿದ್ವಾನ್ ಕೆ.ಯು.ಜಯಚಂದ್ರ ರಾವ್, ಘಟಂನಲ್ಲಿ ವಿದ್ವಾನ್ ಗಿರಿಧರ್ ಉಡುಪ ಅವರು ಸಹಕರಿಸಲಿದ್ದಾರೆ. ಫೆ. ೬ರಂದು ಸಂಜೆ ಗಂಟೆ ೬.೩೦ರಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯಿಂದ ವೀರ ಬರ್ಬರೀಕೆ ಮತ್ತು ಫೆ. ೭ರಂದು ಸಂಜೆ ಗಂಟೆ ೬.೩೦ರಿಂದ ಸಾಲಿಗ್ರಾಮ ಶ್ರೀ ಗುರುಪ್ರದಾದಿತ ಯಕ್ಷಗಾನ ಮಂಡಳಿಯಿಂದ ದಕ್ಷ ಯಜ್ಞ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷಗಾನವು ಕಾಲಮಿತಿಯೊಳಗೆ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ರೂಪಲೇಖ ಉಪಸ್ಥಿತರಿದ್ದರು.