ಪುತ್ತೂರು: ಕಬಕ ಮಹಾದೇವಿ ಗ್ಲಾಸಸ್ ಸಂಸ್ಥೆಯಲ್ಲಿ ಮಾರಾಟಕ್ಕಿದ್ದ ಗ್ಲಾಸ್ ಬಾಕ್ಸ್ ಅನ್ನು ಕಿಡಿಗೇಡಿಗಳು ಒಡೆದು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಸಂಸ್ಥೆಯ ಮಾಲಕರು ಗ್ಲಾಸ್ ಒಡೆದವರಿಗೆ ಮತ್ತು ಒಡೆಸಿದವರಿಗೆ ತಕ್ಕ ಶಾಸ್ತಿಯಾಗುವಂತೆ ದೇವರ ಮೇಲೆ ಭಾರ ಹಾಕಿ ಬೇಡಿಕೊಂಡು ಈ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂಬ ವಿಚಿತ್ರ ಸಂದೇಶದ ಬ್ಯಾನರ್ ಅಳವಡಿಸಿದ್ದಾರೆ.
ರಮೇಶ್ ಗೌಡ ಮಾಲಕತ್ವದ ಕಬಕ ಮಹಾದೇವಿ ಗ್ಲಾಸ್ ಸಂಸ್ಥೆಯಲ್ಲಿ ಜಾಗದಲ್ಲಿ ಮಾರಾಟಕ್ಕಿಟ್ಟ ಗ್ಲಾಸ್ ಬಾಕ್ಸ್ ಅನ್ನು ಜ.17ರ ರಾತ್ರಿ ಕಿಡಿಗೇಡಿಗಳನ್ನು ಒಡೆದು ಹಾಕಿದ್ದು ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಕಿಡಿಗೇಡಿಗಳ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ನೊಂದು ವಿಚಿತ್ರ ಸಂದೇಶದ ಬ್ಯಾನರ್ ಅನ್ನು ತನ್ನ ಅಂಗಡಿಯ ಮುಂದೆ ಅಳವಡಿಸಿದ್ದಾರೆ. ‘ನನಗಾದ ಅನ್ಯಾಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗ್ಲಾಸ್ ಒಡೆದ ಮತ್ತು ಒಡೆಸಿದವರಿಗೆ ತಕ್ಕ ಶಾಸ್ತಿಯಾಗುವಂತೆ ನಾವು ನಂಬಿದ ದೇವರ ಮೇಲೆ ಭಾರ ಹಾಕಿ ಬೇಡಿಕೊಂಡು ಈ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ’ ಎಂಬ ಸಂದೇಶದ ಬ್ಯಾನರ್ ಅಳವಡಿಸಿದ್ದಾರೆ. ಇದೇ ಬ್ಯಾನರ್ ಕೆಳಗಡೆ ಇನ್ನೊಂದು ಸಂದೇಶದ ಬ್ಯಾನರ್ನಲ್ಲಿ ‘ಗ್ಲಾಸ್ ಒಡೆದ ಮತ್ತು ಒಡೆಸಿದ ಪಾಪಿ ಹೇಡಿ ಗೂಂಡಾಗಳಿಗೆ ನಾವು ನಂಬಿರುವ ಎಲ್ಲ ದೈವ ದೇವರುಗಳು ಅತೀ ಶ್ರೀಘದಲ್ಲಿ ಹುಚ್ಚು ಹಿಡಿಸಿ ರಕ್ತಕಾರಿ ನರಳುವಂತೆ ಮಾಡಬೇಕಾಗಿ ಬೇಡಿಕೊಳ್ಳುತ್ತಿದ್ದೇನೆ’ ಎಂಬ ಸಂದೇಶದ ಬ್ಯಾನರ್ ಅಳವಡಿಸಿ ತನಗಾದ ನೋವನ್ನು ತೋರ್ಪಡಿಸಿದ್ದಾರೆ.