- ಮುಸ್ಲಿಮರು ಸಾಮೂಹಿಕ ವಿವಾಹದತ್ತ ಹೆಚ್ಚು ಒಲವು ತೋರಿಸಬೇಕು; ಸಖಾಫಿ
ಪುತ್ತೂರು; ಆಡಂಬದರ ಮದುವೆಗಿಂತ ಸಾಮೂಹಿಕ ವಿವಾಹದಲ್ಲಿ ಹೆಚ್ಚು ಪುಣ್ಯವಿದ್ದು ಈ ಕಾರಣಕ್ಕೆ ಮುಸ್ಲಿಂ ಸಮುದಾಯ ಸಾಮೂಹಿಕ ವಿವಾಹದತ್ತ ಹೆಚ್ಚು ಒಲವು ತೋರಬೇಕಿದೆ ಎಂದು ಬನ್ನೂರು ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಹೇಳಿದರು.
ಅವರು ಪುತ್ತೂರು ಮುತ್ತುಪೇಟೆ ಫೌಂಡೇಶನ್ ವತಿಯಿಂದ ಫೆ. 27 ರಂದು ಪರ್ಪುಂಜದ ಎಬ್ರಾಡ್ ಸಭಾಂಗಣದಲ್ಲಿ ನಡೆದ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು.ಇಂದು ಮದುವೆ ಹೆಸರಿನಲ್ಲಿ ಅನಾಚಾರಗಳು ನಡೆಯುತ್ತಿದೆ, ಇದು ಉತ್ತಮ ನಡೆಯಲ್ಲ. ನಾವು ಇಸ್ಲಾಮಿನ ಸಂಸ್ಕಾರದತ್ತ ಹೆಚ್ಚು ಒಲವು ತೋರಬೇಕೇ ವಿನಾ ಪಾಶ್ಚಾತ್ಯ ಸಂಸ್ಕೃತಿಯ ಕಡೆಗಳಲ್ಲ ಎಂದು ಹೇಳಿದ ಅವರು ಪ್ರತೀಯೊಂದು ಮೊಹಲ್ಲಾಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ಕೆ ಪ್ರಾಶಸ್ತ್ಯ ನೀಡಿದರೆ ಮುಂದಿನ ದಿನಗಳಲ್ಲಿ ಬಡವರ ಹೆಣ್ಣುಮಕ್ಕಳಿಗೂ ಸಹಾಯವಾಗಬಹುದು. ಮುತ್ತುಪೇಟೆ ಫೌಂಡೇಶನ್ ವತಿಯಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಎಲ್ಲರಿಗೂ ಮದರಿಯಾಗಲಿ ಎಂದು ಹೇಳಿದರು.
ಕುಪ್ಪೆಟ್ಟಿ ಜುಮಾ ಮಸೀದಿ ಖತೀಬ್ ಹಬೀಬುಲ್ಲಾ ತಂಙಳ್ ಪೆರುವಾಹಿ ಸಮರಂಭವನ್ನು ಉದ್ಘಾಟಿಸಿ ಮಾತನಾಡಿ ಮುತ್ತುಪೇಟೆ ಫೌಂಡೇಶನ್ ವತಿಯಿಂದ ನಡೆಯುವ ಸಾಮೂಹಿಕ ವಿವಾಹ ಬಡವರ ಕಣ್ಣೀರೊರೆಸುವ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳಿಗೆ ನೈತಿಕ ಶಕ್ತಿಯನ್ನು ನೀಡುವ ಕೆಲಸ ಸಂಸ್ಥೆಯಿಂದ ಆಗಲಿ ಎಂದು ಶುಭ ಹಾರೈಸಿದರು.
ಕಾಸರಗೋಡು ದೇಳಿ ಜುಮಾ ಮಸೀದಿಯ ಖತೀಬ್ ಝುಹೈರ್ ಅಝ್ಹರಿ ಮಾತನಾಡಿ ಮುಸ್ಲಿಂ ಸಮಾಜ ಸಬಲವಾಗಬೇಕಾದರೆ ನಾವು ಅನಗತ್ಯ ಖರ್ಚುಗಳಿಂದ ದೂರ ಇರಬೇಕು. ಅನಗತ್ಯ ಖರ್ಚುಗಳನ್ನು ಮಾಡುವುದು ಇಸ್ಲಾಮಿನಲ್ಲಿ ನಿಷಿಧ್ದವಾಗಿದೆ. ಇಂದು ವಿವಾಹದ ಸುದಿನದಲ್ಲಿ ನಾವು ಅಲ್ಲಾಹನು ಇಷ್ಟಪಡದ ಕಾರ್ಯಗಳನ್ನೇ ಮಾಡುವ ಮೂಲಕ ಶುಭ ದಿನದಂದು ನಾವು ದೇವರ ಆಜ್ಞೆಯಿಂದ ದೂರ ಉಳಿಯುತ್ತಿದ್ದೇವೆ. ಬಡವರ ಕಣ್ಣೀರೊರೆಸುವ ಕಾರ್ಯಕ್ಕೆ ಮುಂದಾಗಿರುವ ಮುತ್ತುಪೇಟೆ ಫೌಂಡೇಶನ್ ಮೂರು ಬಡ ಹೆಣ್ಣುಮಕ್ಕಳಿಗೆ ವಿವಾಹ ಭಾಗ್ಯವನ್ನು ನೀಡುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡಿದೆ ಎಂದು ಹೇಳಿದರು.
ಅಸ್ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುತ್ತುಪೇಟೆ ದರ್ಗಾಶರೀಫ್ ಟ್ರಸ್ಟಿ ಬರ್ಕತ್ ಅಲಿ, ಎ ಸಿ ಬಿ ದಾರಿಮಿ ಉಪ್ಪಿನಂಗಡಿ ಮತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಾಲೆಮುಂಡೋವು ಉಸ್ತಾದ್, ಹುಸೈನ್ ಆಟಕ್ಕೋಯಾ ತಂಙಳ್, ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಮುತ್ತುಪೇಟೆ ಫೌಂಡೆಶನ್ ಅಧ್ಯಕ್ಷ ಅಬ್ದುಲ್ರಹಿಮಾನ್ ಹಾಜಿ ಅರಮನೆ, ಕಾರ್ಯದರ್ಶಿ ಅಬ್ದುಲ್ಲ ಹಸ, ಕೋಶಾಧಿಕಾರಿ ಅಬ್ದುಲ್ ಮಜೀದ್ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಎಂ ಎಚ್ ಅಬೂಬಕ್ಕರ್ ಸಖಾಫಿ,ಉಪಾಧ್ಯಕ್ಷ ಹಂಝ ಮುಸ್ಲಿಯಾರ್ ಕೊಯಿಲತ್ತಡ್ಕ, ಅಬ್ದುಲ್ ರಝಾಕ್ ಕಾವು, ಇಬ್ರಾಹಿಂ ಸಅದಿ ಮಾಡನ್ನೂರು, ಅಶ್ರಫ್ ವಲತ್ತಡ್ಕ, ಅಬ್ದುಲ್ ಖಾದರ್ ಮುಸ್ಲಿಯಾರ್ ಮಾಡನ್ನೂರು, ಫಾರೂಕ್ ಸಂಪ್ಯ ಉಪಸ್ತಿತರಿದ್ದರು.
ಕೆ ಎಲ್ ಇಲ್ಯಾಸ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.
ಮೂರು ಜೋಡಿ ಸಾಮೂಹಿಕ ವಿವಾಹ
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೂರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಸಯ್ಯದ್ ಮುಝಮ್ಮಿಲ್ ತಂಙಳ್ ನಿಖಾ ನೆರವೇರಿಸಿದರು. ವಧುವಿಗೆ ೫ ಪವನ್ ಚಿನ್ನ, ಬಟ್ಟೆ ವರನಿಗೆ ಬಟ್ಟೆ ಹಾಗೂ ವಾಚ್ ನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಮಸೀದಿಯ ಖತೀಬರು, ಜಮಾತ್ ಪ್ರತಿನಿಧಿಗಳು ಭಾಗವಹಿಸಿದ್ದರು.