- ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಜಿಲ್ಲಾ ಮಟ್ಟದ ಸಭೆಯಲ್ಲಿ ಡಾ | ರಾಜೇಂದ್ರ ಕೆ.ವಿ ಸೂಚನೆ
ಪುತ್ತೂರು: ಎಂಡೊಸಲ್ಫಾನ್ ಸಂತ್ರಸ್ತರ ಸಮಸ್ಯೆಗಳ ಬಗೆ ಹರಿಸುವಲ್ಲಿ ಶೇ.100ರಷ್ಟು ಪ್ರಯತ್ನ ಮಾಡಬೇಕು. ಮುಂದಿನ 15 ದಿನದ ಒಳಗೆ ಏನೆನು ಸಮಸ್ಯೆಗಳು ಸಭೆಯಲ್ಲಿ ಪ್ರಸ್ತಾಪ ಆಗಿದೆಯೋ ಅವೆಲ್ಲ ಕ್ಲೀಯರ್ ಅಗಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಪುತ್ತೂರು ತಾಲೂಕು ಪಂಚಾಯತ್ ಕಿರು ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದರು. ಎಂಡೋಸಂತ್ರಸ್ತರಿಗೆ ಗುರುತಿನ ಚೀಟಿ, ಸ್ಮಾರ್ಟ್ ಕಾರ್ಡ್, ಯುಡಿಐಡಿ ಕಾರ್ಡ್, ಆರೋಗ್ಯ ಸೇವೆ ಮತ್ತಿತರರ ವಿವಿಧ ಸೌಲಭ್ಯಗಳನ್ನು ತಲುಪಿಸುವ ವಿಚಾರದಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು. ಎಲ್ಲಾ ವಿಚಾರದಲ್ಲೂ ನಿಮ್ಮ ಪ್ರಯತ್ನ ಇರಲಿ. ಮುಂದಿನ ೧೫ ದಿನಗಳ ಒಳಗೆ ಸಭೆಯಲ್ಲಿ ಬಂದಿರುವ ಸಮಸ್ಯೆಗಳ ಕುರಿತು ಇತ್ಯರ್ಥ ಆಗಬೇಕು. ಮುಂದಿನ ಜಿಲ್ಲಾ ಮಟ್ಟದ ಸಭೆ ಬೆಳ್ತಂಗಡಿ ಅಥವಾ ಎಲ್ಲೆಲ್ಲಿ ಎಂಡೋ ಪಾಲನ ಕೇಂದ್ರವಿದೆಯೋ ಅಲ್ಲೇ ಸಭೆ ಮಾಡೋಣ. ನಿಮ್ಮ ನಿಮ್ಮ ಕೆಳಮಟ್ಟದ ಪೀಲ್ಡ್ ಆಫೀಸರ್ಸ್ ಯಾರಿದ್ದಾರೋ ಅವರ ಮೂಲಕ ಕೆಲಸ ಮಾಡಿಸಿ. ಎಂಡೋ ಸಂತ್ರಸ್ತರ ಕಷ್ಟ ಬಹಳ ಬಹಳ ಸೂಕ್ಷ್ಮತೆ ವಿಚಾರ. ನಾವು ಅವರೊಳಗೆ ನಿಂತು ಅವರ ಕಷ್ಟವನ್ನು ನೋಡಬೇಕಾಗಿದೆ. ನಾವು ಕೆಲಸ ಮಾಡಿದ್ರೂ, ಮಾಡದಿದ್ದರೂ ಸರಕಾರಿ ಸಂಬಳ ಸಿಗುತ್ತದೆ. ಆದರೆ ಒಬ್ಬ ವ್ಯಕ್ತಿಯ ಮಾಸಿಕ ವೇತನ ಸಿಗದಿದ್ದಾಗ ಅವರ ಮನೆಯ ಕಷ್ಟ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡು ಕೆಲಸ ಮಾಡಬೇಕು. ಒಂದು ವೇಳೆ ಅಧಿಕಾರಿಗಳು ಕೆಲಸ ಮಾಡದೇ ಇದ್ದರೆ ಮುಂದಿನ ಸಭೆಯಲ್ಲಿ ನೋಟೀಸ್ ಇಶ್ಯೂ ಮಾಡಿ ಇಲಾಖೆ ಮೂಲಕ ಯಾವ ಕ್ರಮ ಕೈಗೊಳ್ಳಬಹುದೋ ಅದನ್ನು ಕೈಗೊಳ್ಳುತ್ತೇನೆ. ಇದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡಬೇಡಿ ಎಂದರು.
ಕೇರಳದ ಗಡಿ ಬಾವಿಯಿಂದ ಎಂಡೋ ಸಲ್ಪಾನ್ ತೆರವು ಮಾಡಲು ಕ್ರಮ:
ಕರ್ನಾಟಕಕ್ಕೆ ಹೊಂದಿಕೊಂಡ `ದ ಪ್ಲಾಂಟೇಷನ್ ಕಾರ್ಪೊರೇಷನ್ ಆಫ್ ಕೇರಳ’ ದ ಬಾವಿಗಳಲ್ಲಿ ಎಂಡೋಸಲ್ಫಾನ್ ಹೂತ್ತಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿ ನಾನೇ ಎರಡು ಬಾರಿ ಮಿಂಚಿಪದವು ಬಾವಿಯ ಪ್ರದೇಶಕ್ಕೆ ಭೇಟಿ ನೀಡಿದೆ. ಮಿಂಚಿಪದವು ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ಗಡಿಭಾಗ ಆದ್ದರಿಂದ ಇದು ಕೇರಳಕ್ಕೆ ಸೇರುತ್ತದೆ. ಈ ನಿಟ್ಟಿನಲ್ಲಿ ಅವರು ಬಾವಿಯಿಂದ ಎಂಡೊ ಸಲ್ಪಾನ್ ತೆಗೆಯುವ ಕುರಿತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಮಗೆ ಅನುಮತಿ ಕೊಟ್ಟರೆ ನಾವು ಜಿಲ್ಲಾಡಳಿತದಿಂದ ತೆಗೆಸುವ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಸಹಾಯಕ ಕಮೀಷನರ್ ಗಿರೀಶ್ ನಂದನ್, ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಡೋ ಸಂತ್ರಸ್ತರ ನೊಡೇಲ್ ಅಧಿಕಾರಿ ಡಾ. ನವೀನ್ಚಂದ್ರ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು, ಕಡಬ ತಹಶೀಲ್ದಾರ್ ಅನಂತಶಂಖರ್, ಬಂಟ್ವಾಳದ ತಹಸೀಲ್ದಾರ್ ಲಕ್ಷ್ಮೀ, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಬೆಳ್ತಂಗಡಿ ಇ ಒ ಕುಸುಮಾಧರ್, ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅಶಾ ಪುತ್ತೂರಾಯ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಎಂಡೋಸಂತ್ರಸ್ತರಾದ ಶ್ರೀಧರ್ ಗೌಡ, ಸಂಜೀವ ಗೌಡ, ಎಂಡೋ ಸಂತ್ರಸ್ತ ಪಾಲನಕೇಂದ್ರ ಸಹಕಾರಿ ಸಂಸ್ಥೆಯ ಪೀರ್ ಮೊಹಮ್ಮದ್, ಸಂಸ್ಥೆಯ ಅಧ್ಯಕ್ಷೆ ಗಂಗಾರತ್ನ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.