ಕಡಬ: ಬಂಟ್ರ ಗ್ರಾಮದ ಶೆಟ್ಲಬೈಲು ನಿವಾಸಿ ನಿವೃತ್ತ ಬಿ.ಎಸ್.ಎಫ್. ಯೋಧ ಸುಂದರ ಗೌಡ ಅವರ ಷಷ್ಟಬ್ದ ಕಾರ್ಯಕ್ರಮ ಮಾ.6ರಂದು ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ಪೂರ್ವಾಹ್ನ ಬಂಟ್ರ ಶ್ರೀ ಮಾತೃಶಕ್ತಿ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆಯಿಂದ ಶ್ರೀ ಹನುಮಗಿರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪರಶುರಾಮ ಪಳ್ಳಿಗದ್ದೆಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ. ಸೀತಾರಾಮ ಅವರು ಮಾತನಾಡಿ, ಸುಂದರ ಗೌಡರು ಬಾಲ್ಯದಲ್ಲಿ ಕಡು ಬಡತನದಲ್ಲಿದ್ದು ಬಹಳ ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಸೇನೆಗೆ ಸೇರಿದ್ದರು, 1984ರಲ್ಲಿ ಗಡಿ ಭದ್ರತಾ ಪಡೆಗೆ ನೇಮಕಗೊಂಡು ಭಡ್ತಿಗೊಂಡು ಹಲವಾರು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸುಧೀರ್ಘ 35 ವರ್ಷಗಳ ಸೇವೆಯಲ್ಲಿ ಅವರು ಕಾಶ್ಮಿರ, ಪಂಜಾಬ್, ತ್ರಿಪುರ, ಕೋಲ್ಕತ್ತಾ, ರಾಜಸ್ತಾನ್, ಅಸ್ಸಾಂ, ಛತ್ತಿಸ್ಗಢ ಮೊದಲಾದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ, ತನ್ನ ಪ್ರಾಮಾಣಿಕ ಸೇವೆಯಿಂದ ಅನೇಕ ಪುರಸ್ಕಾರಗಳನ್ನು ಪಡೆದಿರುವ ಇವರು ಜೀವನದ ಸುಖ ಕಷ್ಟಗಳನ್ನು ಅರಿತವರಾಗಿದ್ದಾರೆ, ಇವರು ಇಂದು ತನ್ನ ಜೀವನದ ಒಂದು ಹಂತವಾದ ಷಷ್ಟಬ್ದವನ್ನು ಪೂರೈಸುತ್ತಿದ್ದು ಅವರ ಜೀವನವು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಸುಂದರ ಗೌಡರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಂದರ ಗೌಡ ಹಾಗೂ ಗುಲಾಬಿ ದಂಪತಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮತ್ತು ಪರಶುರಾಮ ಪಳ್ಳಿಗದ್ದೆ ಹಾಗೂ ನಾ.ಸೀತಾರಾಮ ಅವರನ್ನು ಸುಂದರ ಗೌಡ ಹಾಗೂ ಕುಟುಂಬಸ್ಥರು ಗೌರವಿಸಿದರು. ಪ್ರತೀಕ್ಷಾ ಸಂಕೇಶ ಸ್ವಾಗತಿಸಿ, ಜೀವನ್ ನೆಲ್ಲಿಕುಂಜ ವಂದನಾರ್ಪಣೆಗೈದರು. ಚಿತ್ರಾಅವಿನಾಶ್ ಪಳ್ಳಿಗದ್ದೆ ಹಾಗೂ ಧನ್ಯತಾ ಗೌತಮ್ ಸೇರ್ಕಜೆ ಪ್ರಾರ್ಥನೆ ಹಾಡಿದರು. ಹಿಮಕರ ನೆಲ್ಲಿಕುಂಜ ಹಾಗು ಪದ್ಮನಾಭ ಪಳ್ಳಿಗದ್ದೆ ಕಾರ್ಯಕ್ರಮ .ಗೌತಮ್ ಸೇರ್ಕಜೆ ಸೇರಿದಂತೆ ಕುಟುಂಬಸ್ಥರು, ಗ್ರಾಮಸ್ಥರು ಉಪಸ್ಥಿತರಿದ್ದರು.