ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ (ರಿ) ಭರತಪುರ ಇದರ ಅಂಗಸಂಸ್ಥೆ ಧ್ಯಾನಸ್ಥ ಶ್ರೀ ಹನುಮಾನ್ ಸಾಂತ್ವನ ಸೇವಾ ಮಂದಿರ ಸಮಿತಿ ಇದರ ವತಿಯಿಂದ ಎ.16ರಂದು ಬೆಳಗ್ಗೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದಲ್ಲಿ ಹನುಮ ಜಯಂತಿಯ ಪ್ರಯುಕ್ತ ಸಾಮೂಹಿಕ ಹನುಮಯಜ್ಞ ಮತ್ತು ಹನುಮಾನ್ ಕಲ್ಪೋಕ್ತ ಪೂಜೆ ಹಾಗೂ ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ನಡೆಯಲಿದೆ.
ಎ.11ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಚೇತನ್ ಕುಮಾರ್ ಪುತ್ತೂರು, ಎ.16ರಂದು ಶನಿವಾರ ಬೆಳಗ್ಗೆ ಗಂಟೆ 9.30ರಿಂದ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು-ಹನುಮದೋಪಾಸಕರಾದ ಡಾ|ಶ್ರೀ ರಾಮಚಂದ್ರ ಗುರೂಜಿಯವರ ಆಶೀರ್ವಾದಗಳೊಂದಿಗೆ ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಉಪಸ್ಥಿತಿಯಲ್ಲಿ ವೇ.ಮೂ. ಶ್ರೀಕೃಷ್ಣ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಹೃದಯ ಹನುಮಭಕ್ತರ ಸಹಕಾರದಿಂದ ಹನುಮ ಜಯಂತಿ ಪ್ರಯುಕ್ತ ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ಹಾಗೂ ಗ್ರಹಚಾರ ದೋಷ ನಿವಾರಣೆಗಾಗಿ ಸಾಮೂಹಿಕ ಹನುಮಯಜ್ಞ ಮತ್ತು ಹನುಮಾನ್ ಕಲೋಕ್ತ ಪೂಜೆ ಹಾಗೂ ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ನಡೆಯಲಿದೆ ಎಂದು ಹೇಳಿದರು.
ಎ.16ರಂದು ಶನಿವಾರ ಬೆಳಿಗ್ಗೆ ಗಂಟೆ 6ರಿಂದ 9.00ರ ತನಕ: ಗಣಪತಿ ಹವನ, ಶ್ರೀ ಲಕ್ಷ್ಮೀನಾರಾಯಣ ಹೃದಯಹೋಮ ನಡೆಯಲಿದೆ. 9.30ರಿಂದ ಸಾಮೂಹಿಕ ಹನುಮಯಜ್ಞ, ಹನುಮಾನ್ ಕಲ್ಪೋಕ್ತ ಪೂಜೆ, ಸಾಮೂಹಿಕ ಹನುಮಾನ್ ಚಾಲಿಸಾ ಪಾರಾಯಣ ನಡೆದು ಮಧ್ಯಾಹ್ನ 12ರಿಂದ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆದು, ಮಧ್ಯಾಹ್ನ ಗಂಟೆ 1ರಿಂದ ಪ್ರಸಾದ ಭೋಜನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜೊತೆಗೆ ‘ಒಳಿತು ಮಾಡು ಮನುಷ್ಯ’ ಸಂಘಟನೆ 5ನೇ ವರ್ಷಕ್ಕೆ ಪಾದಾರ್ಪಣೆ ಹಿನ್ನೆಲೆಯಲ್ಲಿ 13ನೇ ಯೋಜನೆಯಾಗಿ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ ಆಹಾರ ಸಾಮಾಗ್ರಿ ವಿತರಣಾ ಕಾರ್ಯಕ್ರಮ 3 ಗಂಟೆಯಿಂದ ನಡೆಯಲಿದೆ. ಒಟ್ಟು 37 ಸಹಾಯನಿಧಿ ಸೇವಾ ಯೋಜನೆಯಲ್ಲಿ 2,31,600ರೂ ವಿತರಣೆ ಮಾಡಲಾಗಿದೆ. 12 ತಿಂಗಳ ಒಳಿತು ಮಾಡು ಮನುಷ ಯೋಜನೆಯಲ್ಲಿ 1,000 ರೂ. ಮೌಲ್ಯದ 421 ಕಿಟ್ಗಳು ಅಂದರೆ 4,21,000 ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಸಂಚಾಲಕ ಕಲಾವಿದ ಕೃಷ್ಣಪ್ಪ, ಕಾರ್ಯದರ್ಶಿ ಮೋಹನ್ ಸಿಂಹವನ, ಕೋಶಾಧಿಕಾರಿ ವಾಸಂತಿಶೀಲಾ ಉಪಸ್ಥಿತರಿದ್ದರು.