ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯಲ್ಲಿ ಎ.16 ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಆಗಮನವಾದ ಬಳಿಕ ರಾತ್ರಿ ವೈಭವದ ಉತ್ಸವ ನಡೆದು ಎ.17ರ ಬ್ರಾಹ್ಮೀಮುಹೂರ್ತದಲ್ಲಿ ಕೆರೆ ಆಯನ ನಡೆಯಿತು. ಉಳ್ಳಾಲ್ತಿ ಕಿರುವಾಳು ಮತ್ತು ಶ್ರೀ ಮಹಾಲಿಂಗೇಶ್ವರ ದೇವರ ಪಾಲಕಿ ಉತ್ಸವದಲ್ಲಿ ಉಡಿಕೆ, ಚೆಂಡೆ, ವಾದ್ಯ, ಕೊಂಬು, ಶಂಖ, ಭಜನೆ ಸುತ್ತು ನಡೆಯಿತು. ಬಳಿಕ ದೇವಳದ ಹೊರಾಂಗಣದಲ್ಲಿ ಹೂತೇರು, ಕೆರೆ ಆಯನ(ತೆಪ್ಪೋತ್ಸವ) ನಡೆಯಿತು. ಶ್ರೀ ದೇವರು ಕೆರೆಯ ಮಧ್ಯದಲ್ಲಿರುವ ಮಂಟಪದಲ್ಲಿ ಕುಳಿತು ಪೂಜೆ ಸ್ವೀಕರಿಸಿದ ಬಳಿಕ ದೇವಳದ ಒಳಗೆ ಹೋಗುವ ಕಾರ್ಯಕ್ರಮ ನಡೆಯಿತು.