ಗಡಿನಾಡ ಜನರಿಗೆ ಧ್ವನಿಯಾದ ದ.ಕ ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ

0

  • ಗ್ರಾಮ ಭೇಟಿ, ಚಾವಡಿ ಚರ್ಚೆಯಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ

 

 

ಸುಳ್ಯಪದವು ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರ ಈ ಬಾರಿಯ ಗ್ರಾಮ ವಾಸ್ತವ್ಯ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಪ್ರದೇಶದ ಸುಳ್ಯಪದವಿನಲ್ಲಿ ಕಂದಾಯ ಇಲಾಖೆಯ ಜೊತೆ ವಿವಿಧ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎ.16ರಂದು ಬೆಳಗ್ಗೆ 10ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ವೈಶಿಷ್ಟ್ಯತೆಗಳೊಂದಿಗೆ ನಡೆಯಿತು. ಗಡಿ ಪ್ರದೇಶದ ನಾಗರಿಕರ ಹಲವಾರು ಬೇಡಿಕೆಗಳು, ಸಮಸ್ಯೆಗಳನ್ನು ನೇರವಾಗಿ ಜಿಲ್ಲಾಧಿಕಾರಿಯೊಂದಿಗೆ ಹೇಳಿಕೊಳ್ಳಲು ವೇದಿಕೆಯಾಯಿತು.

 

ಗಡಿ ನಾಡ ಜನರ ಸಮಸ್ಯೆ ಗಳನ್ನು ಆಲಿಸಿ ಶಾಲೆಯಲ್ಲಿಯೇ ವಾಸ್ತವ್ಯ ಹೂಡಿದ ಜಿಲ್ಲಾಧಿಕಾರಿ: ಬಡಗನ್ನೂರು ಗ್ರಾಮ ಪಂಚಾಯತ್‌ನ ಜನರ ಸಮಸ್ಯೆಗಳನ್ನು ಆಲಿಸಿದ ದ.ಕ ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ ಗಡಿಭಾಗದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನರ ಅದಾಲತ್ ರೀತಿಯಲ್ಲಿ ಬೆಳಗ್ಗಿನಿಂದ ರಾತ್ರಿವರೆಗೆ ನಡೆಯಿತು 169 ಕ್ಕೂ ಅಧಿಕ ಮಂದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ ಅರ್ಜಿಗಳಲ್ಲಿ 80ಕ್ಕೂ ಹೆಚ್ಚು ಅರ್ಜಿಗಳನ್ನು ಜನರ ಜೊತೆ ನೇರ ಸಂವಾದದ ಮೂಲಕ ಸ್ಥಳದಲ್ಲಿ ಪರಿಹಾರ ಮಾಡುವ ಬಗ್ಗೆ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಡಿಭಾಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಸಮಸ್ಯೆಯ ಬಗ್ಗೆ ಸುಳ್ಯಪದವು ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಯ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿ ಸ್ಥಳದಿಂದಲೇ ಅದನ್ನು ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿದ ಸಚಿವರು ಈ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.

ಗ್ರಾಮ ಭೇಟಿ: ಗಡಿನಾಡ ಗ್ರಾಮವಾದ ಸುಳ್ಯಪದವಿನ ಮೈಂದನಡ್ಕ, ಪದಡ್ಕದ ಪರಿಶಿಷ್ಟಜಾತಿ, ಪಂಗಡಗಳ ಜನರು ವಾಸವಿರುವ ಪ್ರದೇಶಕ್ಕೆ ಭೇಟಿ ನೀಡಿದರು. ಅವರ ವಸತಿ ನಿವೇಶನದ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹರಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುಳ್ಯಪದವಿನ ಎಂಡೋಸಲ್ಫಾನ್ ಸಂತ್ರಸ್ತೆಯನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅವರ ಯೋಗ ಕ್ಷೇಮವನ್ನು ವಿಚಾರಿಸಿದರು.

ಅಂತರ್ಜಲ ಸಂರಕ್ಷಣೆಯ ಹೆಜ್ಜೆ: ಬಡಗನ್ನೂರು ಗ್ರಾಮ ಪಂಚಾಯತ್‌ನ ಕನಡ್ಕ ಪ್ರದೇಶದಲ್ಲಿ ಅಂತರ್ಜಲಗಳಿಗೆ ಮೂಲವಾಗಿದ್ದ ಕನಡ್ಕ ಕೆರೆ ಮಣ್ಣು ತುಂಬಿ ಬತ್ತಿ ಹೋಗಿರುವುದನ್ನು ಸ್ಥಳೀಯ ಜನರು ಜಿಲ್ಲಾಧಿಕಾರಿಯ ಗಮನಕ್ಕೆ ತಂದಾಗ ಆ ಪ್ರದೇಶಕ್ಕೆ ಭೇಟಿ ನೀಡಿ ಅದನ್ನು ಪುನರ್ ಜೀವಗೊಳಿಸುವ ಜನರ ಬೇಡಿಕೆಯ ಮನವಿಯನ್ನು ಅವರು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರು.

ಎ.ಜೆ.ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ವೈದ್ಯಕೀಯ ಶಿಬಿರದಲ್ಲಿ ೩೦೦ಕ್ಕೂ ಹೆಚ್ಚು ಮಂದಿಗೆ ಉಚಿತ ತಪಾಸಣಾ ಶಿಬಿರ ನಡೆಯಿತು. ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ವತಿಯಿಂದ ರಕ್ತದಾನ ಶಿಬಿರ ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮಾಹಿತಿ ಕೇಂದ್ರ, ಸ್ವ ಸಹಾಯ ಗುಂಪುಗಳ ತರಕಾರಿ ಹಾಗೂ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ತೆರೆಯಲಾಗಿತ್ತು.

ಚಾವಡಿ ಚರ್ಚೆಯಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ: ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ವಿಶಿಷ್ಟ ಕಾರ್ಯಕ್ರಮ ಚಾವಡಿ ಚರ್ಚೆ. ಬಡಗನ್ನೂರು ಗ್ರಾಮದ ಊರಿನ ಹಿರಿಯರೊಂದಿಗೆ ರಾತ್ರಿ 10ಗಂಟೆಯವರೆಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಭಾಗವಹಿಸಿದರು. ಈ ಚರ್ಚೆಯಲ್ಲಿ ಬಡಗನ್ನೂರು ಗ್ರಾಮದ ಹಿರಿಯ ನಾಗರಿಕರು ಆ ಊರಿಗೆ ಬಸ್ ಸಂಚಾರ ಆರಂಭವಾದ ದಿನ, ದಾನಿಗಳ ಕೊಡುಗೆಯಿಂದ ಶಾಲೆ ನಿರ್ಮಾಣವಾದ ವಿವರ, ಕೃಷಿ, ಬೆಳೆ, ಕಾಡು ಪ್ರಾಣಿಗಳ ಹಾವಳಿ, ಗಡಿ ಭಾಗದ ರಸ್ತೆ, ಮಿಂಚಿಪದವು ಪ್ರದೇಶದಲ್ಲಿ ಹೆಲಿಕಾಪ್ಟರ್ ಮೂಲಕ ಗೇರು ಬೆಳೆಗೆ ಸಿಂಪಡಣೆ ಮಾಡಿದ ಎಂಡೋಸಲ್ಫಾನ್ ಕೀಟನಾಶಕ ಕಾಸರಗೋಡು, ಕರ್ನಾಟಕದ ಗಡಿಪ್ರದೇಶದ ಜನರ ಬದುಕಿನ ಮೇಲೆ ಉಂಟು ಮಾಡಿದ ದುಷ್ಪರಿಣಾಮದ ಬಗ್ಗೆ ಹಿರಿಯರು ತಮ್ಮ ಅನುಭವವನ್ನು ಹಂಚಿಕೊಂಡರು. ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಸುದ್ದಿ ಬಿಡುಗಡೆಯ ಸಂಪಾದಕ ಡಾ.ಯು.ಪಿ.ಶಿವಾನಂದ ಪಾಲ್ಗೊಂಡಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಬಡಗನ್ನೂರು ಗ್ರಾಮದ ಹಿರಿಯ ರಾದ ಬೀರಮೂಲೆ ರಾಮಚಂದ್ರ ಭಟ್, ಮಹಾದೇವಭಟ್, ಪ್ರೇಮ ಟೀಚರ್, ರಾಮಣ್ಣ ಗೌಡ, ವಾಸುದೇವ ಗೌಡ ತಮ್ಮ ಅನುಭವ ಹಂಚಿಕೊಂಡರು. ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ಪತ್ರಕರ್ತರರಾದ ಮೌನೇಶ್ ವಿಶ್ವಕರ್ಮ, ಲೋಕೇಶ್ ಪೆರ್ಲಂಪಾಡಿ, ಮಾಧವ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here